93 ನೇ ವಸಂತಕ್ಕೆ ಶಾಮನೂರು ಶಿವಶಂಕರಪ್ಪ: ಅದ್ದೂರಿ ಹುಟ್ಟುಹಬ್ಬಕ್ಕೆ ಸಾಕ್ಷಿಯಾದ ಅಭಿಮಾನಿಗಳು

ದಾವಣಗೆರೆ: ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು 93ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯನ್ನು ಅವರ ಜನ್ಮದಿನದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ನಗರದ ಶಾಮನೂರು ರಸ್ತೆಯಲ್ಲಿರುವ ಎಸ್.ಎಸ್. ಮಾಲ್ನಲ್ಲಿ ಸ್ನೇಹಿತರ ಬಳಗದಿಂದ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿತು.
ಅರಣ್ಯ ಸಚಿವ ಈಶ್ವರ ಖಂಡ್ರೆ, ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಗಣೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯರಾದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಲೀಲಾಜಿ ಸೇರಿದಂತೆ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮಹಾನಗರ ಪಾಲಿಕೆ ಸದಸ್ಯರು, ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರು.
ಶಿವಶಂಕರಪ್ಪ ಅವರಿಗೆ ಸನ್ಮಾನ ಮಾಡಿ, ಶುಭಾಶಯ ಕೋರಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಮನುಷ್ಯ ಅಳಿಯುತ್ತಾನೆ. ಸಂಘ–ಸಂಸ್ಥೆಗಳು, ಸಾಮ್ರಾಜ್ಯಗಳೂ ಅಳಿಯುತ್ತವೆ. ಆದರೆ ಮಾಡಿದ ಸೇವಾ ಕಾರ್ಯಗಳು ಯಾವತ್ತೂ ಶಾಶ್ವತ. ಅಂತಹ ಸಮಾಜ ಸೇವೆ ಮಾಡಿದವರು ಶಾಮನೂರು ಶಿವಶಂಕರಪ್ಪ ಹೇಳಿದರು.
ವೀರಶೈವ ಸಮಾಜಕ್ಕೆ ಸಂಕಷ್ಟ ಬಂದಾಗಲೆಲ್ಲಾ ಮುಂದೆ ನಿಂತು ಅದನ್ನು ಪರಿಹರಿಸಿ, ಸಮಾಜವನ್ನು ಒಂದುಗೂಡಿಸಿದ್ದಾರೆ. ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುತ್ತಾರೆ. ಕೊಡುಗೈ ದಾನಿ. ಅವರು ಮನಸ್ಸು ಮಾಡಿದ್ದರೆ ಮುಖ್ಯಮಂತ್ರಿ ಆಗಬಹುದಿತ್ತು. ಆದರೆ ಶಾಸಕ, ಸಚಿವರಾಗಿಯೇ ಹಲವು ಕಾರ್ಯ ಮಾಡಿದ್ದಾರೆ ಎಂದರು.
ಲಿಂಗಾಯತ ವೀರಶೈವ ಸಮಾಜದ ಮಾರ್ಗದರ್ಶಕರಾಗಿ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಪರೂಪದ ರಾಜಕಾರಣಿ, ಶೈಕ್ಷಣಿಕ, ಔದ್ಯೋಗಿಕ, ವೈದ್ಯಕೀಯ ಕ್ಷೇತ್ರಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅವರು ಸಾಧನೆ ಮಾಡಿದ್ದಾರೆ. ಅವರ ಸಂಸ್ಥೆಗಳಲ್ಲಿ ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಅವರು ಮಾಡಿದ ಕೆಲಸಗಳಿಗೆ ಲೆಕ್ಕ ಇಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಬಡ ಕುಟುಂಬದಲ್ಲಿ ಹುಟ್ಟಿ ಪರಿಶ್ರಮದಿಂದ ಮುಗಿಲೆತ್ತರಕ್ಕೆ ಬೆಳೆದವರು ಶಾಮನೂರು ಶಿವಶಂಕರಪ್ಪ. ಅದಕ್ಕೆ ಅವರ ಪರಿಶ್ರಮ ಕಾರಣ. ಶ್ರೀಮಂತರಾದರೂ ಅಹಂಕಾರ ಇಲ್ಲ. ಸಂಸ್ಥೆಗಳ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ಅನ್ನದಾತ. ಬಡವ– ಬಲ್ಲಿದ ಎಂಬ ಭೇದವಿಲ್ಲದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಕೋವಿಡ್ ಕಾಲದಲ್ಲಿ ಉಚಿತ ಲಸಿಕೆ ಹಂಚಿ ನೆರವಾಗಿದ್ದಾರೆ ಎಂದರು.