10 ದಿನ ರಾಜ್ಯವ್ಯಾಪಿ ರಾತ್ರಿ ಸ್ಥಬ್ದ.! ಬಹಿರಂಗ ಹೊಸ ವರ್ಷಾಚರಣೆ ನಿಷೇಧ: ರಾತ್ರಿ 10 ಕ್ಕೆ ಚಟುವಟಿಕೆ ಬಂದ್
ಬೆಂಗಳೂರು: ಕೊರೋನಾ ವೈರಾಣು ಸೋಂಕಿನ ಉಲ್ಬಣ ಹಾಗೂ ಒಮಿಕ್ರಾನ್ ವಕ್ಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಠಿಣ ನಿಯಮ ಘೋಷಿಸಲಾಗಿದೆ. ಡಿಸೆಂಬರ್ 28ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೆ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಬೆಂಗಳೂರಿನಲ್ಲಿಂದು ಸಿಎಂ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ಒದಗಿಸಿದ ಆರೋಗ್ಯ ಸಚಿವ ಡಾ.ಸುಧಾಕರ್, ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಬಗ್ಗೆ ತಿಳಿಸಿದರು. ರಾತ್ರಿ 10ರಿಂದ ಬೆಳಿಗ್ಗೆ 5ಗಂಟೆವರೆಗೆ ಜನರ ಓಡಾಟಕ್ಕೆ ಬ್ರೇಕ್ ಹಾಕಲು ಸರ್ಕಾರ ಕ್ರಮ ಕೈಗೊಂಡಿದೆ. ಹೊಟೇಲ್, ಪಬ್, ಬಾರ್ಗಳಲ್ಲಿ ಶೇ.50 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಭೆ, ಸಮಾರಂಗಳಲ್ಲೂ ಶೇ.50 ಮಂದಿಗೆ ಅವಕಾಶ ನೀಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಕೋವಿಡ್ ಮಾರ್ಗಸೂಚಿ ಹಾಗೂ ರಾಜ್ಯ ಸರ್ಕಾರದ ಆದೇಶಗಳ ಬಗ್ಗೆ ಹೊಟೇಲ್ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯ ಸರ್ಕಾರವು ‘ಒಂದು ‘ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ’ ನೀಡಿಸಂತಿದೆ ಎಂದು ಬೆಂಗಳೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ, ಪಿ.ಸಿ.ರಾವ್ ಅವರು ಅಸನಾಧಾನ ಹೊರಹಾಕಿದ್ದಾರೆ.
ಡಿಸೆಂಬರ್ 28ರಿಂದ ಶೇ.50ರ ಸೂತ್ರದಂತೆ ಮತ್ತೊಮ್ಮೆ ಹೊಸ ನಿಯಮ ಘೋಷಿಸಿರುವ ರಾಜ್ಯ ಸರ್ಕಾರದ ತೀರ್ಮಾನದ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಸಿನಿಮಾ ಮಂದಿರಗಳಲ್ಲಿ ಶೇಕಡಾ ನೂರರಷ್ಟು ಮಂದಿ ಭಾಗಿಯಾಗಲು ಅವಕಾಶ ಇದೆ, ಶಾಲೆಗಳಲ್ಲೂ ಶೇಕಡಾ ನೂರರಷ್ಟು ಮಕ್ಕಳು ಸೇರಲು ಅವಕಾಶ ಇದೆ. ಆದರೆ ಹೊಟೇಲ್ಗಳಲ್ಲಿ ಶೇ.50ರಷ್ಟು ಮಂದಿ ಮಾತ್ರ ಇರಬಹುದೆಂದು ನಿಯಮ ಜಾರಿಗೊಳಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.