ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ: ಫೆ.27 ರಿಂದ ಮಾ.02 ರವರೆಗೆ 2022ನೇ ಸಾಲಿನ ಪಲ್ಸ್ ಪೋಲಿಯೊ ಕಾರ್ಯಕ್ರಮ

WhatsApp Image 2022-01-29 at 8.35.55 PM

ದಾವಣಗೆರೆ: ಫೆಬ್ರವರಿ 27 ರಿಂದ ಮಾರ್ಚ್ 02 ರವರೆಗೆ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದ್ದು ವಿವಿಧ ಇಲಾಖೆಗಳು ಸಹಕಾರ ನೀಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಶನಿವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿಯಲ್ಲಿ ನಡೆದ 2021-22ನೇ ಸಾಲಿನ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಪೂರ್ವ ಸಿದ್ದತಾ ಸಭೆ ಹಾಗೂ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.
ಪ್ರತಿ ಬಾರಿಯೂ ಜಿಲ್ಲೆಯಲ್ಲಿ ಪೋಲಿಯೋ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿದ್ದು ಪ್ರಸ್ತುತ ವರ್ಷ ಎಲ್ಲಾ ಇಲಾಖೆಯ ಸಹಕಾರದೊಂದಿಗೆ ಎಲ್ಲಾ ರೀತಿಯ ಅಗತ್ಯ ಮುಂಜಾಗರೂಕತೆಯ ಕ್ರಮಗಳನ್ನು ಅನುಸರಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕಿದೆ, ಮನೆ-ಮನೆಗೆ ತೆರಳಿ ಬೂತ್‍ಗೆ ಬರಲು ಆಗದೇ ಇರುವ ಮಕ್ಕಳಿಗೆ ಲಸಿಕೆ ನೀಡಬೇಕು, ಬಸ್‍ಸ್ಟ್ಯಾಂಡ್‍ಗಳಲ್ಲಿ ಲಸಿಕಾ ಕಾರ್ಯಕ್ರಮದ ಬೂತ್ ನಿರ್ಮಿಸಿ ಬೇರೆಡೆಗೆ ತೇರಳುವ ಮಕ್ಕಳಿಗೂ ತಪ್ಪದೇ ಲಸಿಕೆ ನೀಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಡಬ್ಲೂಹೆಚ್‍ಒ ಸಲಹೆಗಾರ ಡಾ.ಶ್ರೀಧರ್ ಮಾತನಾಡಿ, ಪೋಲಿಯೋ ನಿರ್ಮೂಲನೆಗಾಗಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ 05 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಬಾಯಿಯ ಮೂಲಕ ಎರಡು ಹನಿ ಪ ಪೋಲಿಯೋ ಲಸಿಕೆ ಹಾಕುವುದು. ರಾಷ್ಟ್ರೀಯ ಲಸಿಕಾ ದಿನಗಳಲ್ಲಿ (ಪಲ್ಸ್ ಮೂಲಕ ಪೋಲಿಯೋ ಕಾರ್ಯಕ್ರಮದಲ್ಲಿ) 0-5 ವರ್ಷದ ಎಲ್ಲಾ ಮಕ್ಕಳಿಗೂ ಒಂದೇ ಬಾರಿಗೆ ಪೋಲಿಯೋ ಲಸಿಕೆಯನ್ನು ಹಾಕುವುದು ಮತ್ತು ಪೋಲಿಯೋ ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಿ ಖಾಯಿಲೆಯನ್ನು ದೃಢಪಡಿಸಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಫೆ.27 ರಂದು ಬೂತ್‍ಗಳಲ್ಲಿ 0-5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆಯಯನ್ನು ಹಾಕಲಾಗುವುದು ಹಾಗೂ ಫೆ.28 ರಿಂದ ಮಾರ್ಚ್ 02 ರವರೆಗೆ 03 ದಿನಗಳ ಕಾಲ ಮನೆ ಮನೆ ಭೇಟಿ ಮಾಡಿ ಬಿಟ್ಟು ಹೋದ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಒಟ್ಟಾರೆ ವ್ಯಾಪ್ತಿಯಲ್ಲಿರುವ 0-5 ವರ್ಷದ ಯಾವುದೇ ಮಗು ಪೋಲಿಯೋ ಹನಿ ಹಾಕಿಸದೇ ಉಳಿಯಲಾರದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನಾಗರಾಜ್ ಮಾತನಾಡಿ ಜಿಲ್ಲೆಯಲ್ಲಿ ಜನವರಿ 2021 ರಲ್ಲಿ 05 ವರ್ಷದ ಒಳಗಿನ ಮಕ್ಕಳ ಸಂಖ್ಯೆ ಗ್ರಾಮೀಣ ಭಾಗದಲ್ಲಿ 96784 ಮತ್ತು ನಗರ ಪ್ರದೇಶದಲ್ಲಿ 62473 ಒಟ್ಟು 159257 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಈ ಬಾರಿಯೂ ಗ್ರಾಮಾಂತರ ಪ್ರದೇಶದಲ್ಲಿ 93267 ಮಕ್ಕಳಿಗೆ ಹಾಗೂ ನಗರ ಪ್ರದೇಶದಲ್ಲಿ 66990 ಮಕ್ಕಳಿಗೆ ಒಟ್ಟು 160257 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಹಾಗೂ ಸ್ಥಿರ ಬೂತ್‍ಗಳು 1121 ಟ್ರಾನ್ಸಿಟ್/ಮೊಬೈಲ್ ಬೂತ್‍ಗಳು 1132 ಕಾರ್ಯನಿರ್ವಹಿಸಲಿವೆ ಮತ್ತು ಕೋವಿಡ್ 19 ಪಿಡುಗಿನ ನಿಮಿತ್ತ ಪ್ರತಿ ಭೂತ್‍ಗಳಲ್ಲಿ ಗರಿಷ್ಠ 200 ಮಕ್ಕಳಿಗೆ ಲಸಿಕೆಯನ್ನು ಹಾಕಲು ಮುಂಜಾಗ್ರತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಆರ್‍ಸಿಹೆಚ್ ಡಾ.ಮೀನಾಕ್ಷಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎಲ್ಲಾ ಇಲಾಖೆಯವರು ಸಹಕಾರ ನೀಡಿ ನೀಡಬೇಕು, ವಿಶೇಷವಾಗಿ ವಿದ್ಯುತ್ ಸರಬರಾಜು ಮಂಡಳಿ 2 ದಿನಗಳ ಕಾಲ ಯಾವುದೇ ಅಡೆತಡೆ ಇಲ್ಲದೆ ವಿದ್ಯುತ್ ಸರಬರಾಜು ಮಾಡುವಂತೆ ಮನವಿ ಮಾಡಿದರು.
ಇದೇ ವೇಳೆ ಸಾಂಸ್ ಅಡಿಯಲ್ಲಿ ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕೆಯ(ಪಿಸಿವಿ) ಕುರಿತಾದ ಭಿತ್ತಿ ಚಿತ್ರಗಳನ್ನು ಬಿಡುಗಡೆ ಮಾಡಿದರು.

ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಜಿಲ್ಲಾ ಸಮನ್ವಯ ಸಮಿತಿ ಸಭೆ: ಜಿಲ್ಲಾಧಿಕಾರಿಗಳು ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ 2022 ರ ಕುರಿತಾದ ಸ್ವಾತಂತ್ರ್ಯದ ಅಮೃತ ಮಹೋತ್ಸವದೊಂದಿಗೆ ಕುಷ್ಠರೋಗ ಮುಕ್ತ ಭಾರತದ ಕಡೆಗೆ ಎಂಬ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಮುರುಳಿಧರ್ ಮಾತನಾಡಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ 2022 ಅನ್ನು ಜ.30 ರಂದು ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದ ಅಂಗವಾಗಿ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನವನ್ನಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಆಂದೋಲನದ ಅಂಗವಾಗಿ ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಕಾಲೇಜುಗಳಲ್ಲಿ ಹಾಗೂ ಗ್ರಾಮ ಸಭೆಯ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಜಿಲ್ಲಾ ಆರೋಗ್ಯ ಅಭಿಯಾನ ಕಾರ್ಯಕಾರಿ ಸಮಿತಿ ಸಭೆಯ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಹಾಗೂ ಚಟುವಟಿಗೆಗಳ ಪರಿಶೀಲನೆ ನಡೆಯಿತು.

ಕುಷ್ಠರೋಗ ಕುರಿತು ಜಿಲ್ಲಾಡಳಿತದ ಸಂದೇಶ (ಬಾಕ್ಸ್)
ದಾವಣಗೆರೆ ಜಿಲ್ಲಾಡಳಿತವು, ಮಹಾತ್ಮ ಗಾಂಧೀಜಿಯವರ ಸ್ಮರಣೆಯಲ್ಲಿ ನಾವೆಲ್ಲರೂ ನಮ್ಮ ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಪಣ ತೊಟ್ಟು ಕಾರ್ಯ ಪ್ರವತ್ತರಾಗಿದ್ದೇವೆ. ಕುಷ್ಠರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ, ಸಂಪೂರ್ಣವಾಗಿ ಗುಣಪಡಿಸಬಹುದು. ನಮ್ಮ ಜಿಲ್ಲೆಯಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಕುಷ್ಠರೋಗ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ತರಲು ನಾವು ಬದ್ಧರಾಗಿದ್ದೇವೆ. ಕುಷ್ಠರೋಗಿಗಳಿಗೆ ನಮ್ಮಿಂದ ಯಾವುದೇ ರೀತಿಯಾದ ತಾರತಮ್ಯಗಳಾಗದಂತೆ ಎಚ್ಚರವಹಿಸುತ್ತೇವೆ ಹಾಗೂ ಇತರರಿಂದಲೂ ಯಾವುದೇ ರೀತಿಯಾದ ಶೋಷಣೆಗಳಾಗದಂತೆ ನೋಡಿಕೊಳ್ಳುತ್ತೇವೆ. ನಾವೆಲ್ಲರೂ ಒಟ್ಟಾಗಿ, ವೈಯಕ್ತಿಕ ಹಾಗೂ ನಾಗರೀಕ ವ್ಯಕ್ತಿಭಾವದ ಒಗ್ಗಟ್ಟಿನಿಂದ ಸಾಮಾಜಿಕ ಕಳಂಕ ಪಿಡುಗುಗಳನ್ನು ಹೋಗಲಾಡಿಸಿ, ದೌರ್ಜನ್ಯಕ್ಕೊಳಗಾದ ಕುಷ್ಠರೋಗಿಗಳನ್ನು ಮುಖ್ಯವಾಹಿನಿಗೆ ತಂದು, ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಗೊಳಪಡಿಸಿ ಬಾಪೂಜಿಯವರ ನಂಬಿಕೆ ಮತ್ತು ಸದುದ್ದೇಶಗಳನ್ನು ಸಾಕಾರಗೊಳಿಸಲು ಸನ್ನದ್ಧರಾಗಿದ್ದೇವೆ ಎಂಬುದನ್ನು ಈ ಮೂಲಕ ಘೋಷಿಸುತ್ತೇವೆ.

ಇದೇ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ಜಯಪ್ರಕಾಶ್, ಡಾ.ರಾಘವನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!