ವಿಧಾನಸಭಾ ಚುನಾವಣೆ-2023 ಮೇ 10 ರಂದು ನಡೆಯುವ ಮತದಾನದಲ್ಲಿ ಭಾಗವಹಿಸಿ ಹಕ್ಕುಚಲಾಯಿಸಲು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕರೆ

ದಾವಣಗೆರೆ : ಮತದಾನ ಪ್ರಕ್ರಿಯೆಯಿಂದ ದೂರ ಉಳಿಯದೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯುಳ್ಳ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳುವ ಮುಖಾಂತರ ತಮ್ಮ ಹಕ್ಕು ಚಲಾಯಿಸುವಂತಾಗಬೇಕೆಂದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕರೆ ಕೊಟ್ಟರು.
ಬುಧವಾರ ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲಿಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ (ಸ್ವೀಪ್) ತ್ರಿಚಕ್ರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶವನ್ನು ಕಟ್ಟುವಲ್ಲಿ ವಿಕಲಚೇತನರ ಪಾತ್ರವೂ ಪ್ರಮುಖವಾಗಿದ್ದು, ವಿಶೇಷ ವಿಕಲಚೇತನರು ಕೂಡ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಅವರೂ ಸಹ ಪ್ರಜಾಪ್ರಭುತ್ವದ ಭಾಗವಾಗಿದ್ದಾರೆ. ಹಾಗಾಗಿ, ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆ ವೇಳೆ ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿ ಉತ್ತಮ ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜೊತೆಗೆ, ಶೇ.100 ರಷ್ಟು ಮತದಾನಕ್ಕೆ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ಇದೇ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆ ವೇಳೆ ವಿಕಲಚೇತನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತೊಂದರೆಯಾಗದಂತೆ ಸಿದ್ದತೆ ಮಾಡಿಕೊಳ್ಳಲಾಗಿದೆ. ವಿಕಲಚೇತನರಿಗೆ ರ್ಯಾಂಪ್, ರೀಲಿಂಗ್ಸ್ ಹಾಗೂ ಅಂಧರಿಗೆ ಬ್ರೈಲ್ ಲಿಪಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಮತಗಟ್ಟೆಗೆ ವಿಕಲಚೇತನರನ್ನ ಕರೆತರಲು ಮತ್ತು ವಾಪಾಸು ಕರೆದ್ಯೊಯಲು ಸಾರಿಗೆ ವ್ಯವಸ್ಥೆ, ಶೌಚಾಲಯ, ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದ ಅವರು, ಇದಕ್ಕೆ ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ನಿಯೋಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ತ್ರಿಚಕ್ರ ಬೈಕ್ ರಾಲಿಯು ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾಗಿ ಜನತಾ ಬಜಾರ್ ರಸ್ತೆಯ ಮುಖಾಂತರ ಪಿ.ಬಿ ರಸ್ತೆ, ಗಾಂಧಿ ವೃತ್ತ, ಜಯದೇವ ವೃತ್ತದ ಮಾರ್ಗವಾಗಿ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ ತಲುಪಿ ಪ್ರತಿಜ್ಞೆ ಮಾಡುವ ಮೂಲಕ ಮುಕ್ತಾಯಗೊಂಡಿತು.
ಈ ವೇಳೆ ಜಿಲ್ಲಾ ಹಿರಿಯ ನಾಗರಿಕರ ಹಾಗೂ ವಿಶೇಷಚೇತನ ಮತದಾರರ ನೋಡೆಲ್ ಅಧಿಕಾರಿ ಡಾ.ಕೆ.ಕೆ ಪ್ರಕಾಶ್, ಮಹೇಶ್ ದೊಡ್ಮನಿ, ಶಾರದಮ್ಮ, ಮಲ್ಲನಾಯ್ಕ್ ಸೇರಿದಂತೆ ಮತ್ತಿತರರಿದ್ದರು.