“ನಿಷ್ಠೂರವಾದಿ,ಲೋಕ ವಿರೋಧಿ” – ಶರಣಬಸವ ಹುಲಿಹೈದರ

ಕೊಪ್ಪಳ: ಥೇಟ್ ಸಿನಿಮಾ ಹೀರೋ ಮಾದರಿಯಲ್ಲೇ ಎಂಟ್ರಿಕೊಟ್ಟ ಆತ, ನಿಗದಿತ ಆಸನದಲ್ಲಿ ಆಸೀನ ಆಗುವ ಮೊದಲೇ, “ಬರಲು ತಡವಾಗಿದ್ದಕ್ಕೆ sorry” ಎಂದು ಪತ್ರಕರ್ತರಿಗೆ ಕ್ಷಮೆ ಕೇಳಿದ್ದ. ಆದರೆ, ಅಲ್ಲಿದ್ದ ಯಾರಿಗೂ ಕೂಡ ಆತ ಬೇಸರ ಆಗುವ ಮಟ್ಟಿಗೆ ಕಾಯಿಸಿದ ಎಂಬ ಬೇಸರ ಇರಲಿಲ್ಲ.
ಇನ್ನೇನು ಚೇರ್ ಮೇಲೆ ಕುಳಿತುಕೊಂಡ ಅರೆ ಕ್ಷಣದಲ್ಲೇ “ಆಯ್ತು ಶುರು ಮಾಡೋಣವಾ” ಎಂದಾತ ತನ್ನ ಅಕ್ಕ- ಪಕ್ಕ ಕುಳಿತಿದ್ದ ಇಬ್ಬರ ಪರಿಚಯ ಮಾಡಿ, ತನ್ನ ಕೊಪ್ಪಳ ಬರುವಿಕೆಯ ಕಾರಣವನ್ನು ಸವಿಸ್ತಾರವಾಗಿ ಹೇಳುತ್ತಾ ಹೋದ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೊಪ್ಪಳದ ಕುಷ್ಟಗಿಗೆ ಬಂದಿದ್ದ ಆತ, ತಾನು ನಿರಂತರ ಹೋರಾಟ ಮಾಡ್ತಿರೋ ವಿವಿಧ ಮತ್ತು ವಿಭಿನ್ನ ಸಾಂಸ್ಕ್ರತಿಕ ಕಲೆಯನ್ನ ಮೈಗೂಡಿಸಿಕೊಂಡು ಅದನ್ನೇ ಬದುಕಾಗಿಸಿಕೊಂಡಿರೋ ಬುಡಕಟ್ಟು ಸಮುದಾಯದ ಅಭಿವೃದ್ಧಿ ಆಗಿಲ್ಲ. ದೇವದಾಸಿ ಪದ್ಧತಿ ಕೊಪ್ಪಳದಲ್ಲಿ ಇನ್ನೂ ಜೀವಂತ ಇರುವ ಬಗ್ಗೆ ಬೇಸರ ವ್ಯಕ್ತಿಪಡಿಸಿ, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ತಾನೊಬ್ಬ ಏಕಾಂಗಿ ಹೋರಾಟಗಾರನಾಗಿ, ಏನು ಮಾಡಬಹುದು ಮತ್ತು ಮಾಡಿದ್ದನ್ನು ಕೂಡ ಒಂದಷ್ಟು ಸಮಯದಲ್ಲಿ ಹೇಳಿ ಮುಗಿಸಿದ್ದ ನಟ chetan Ahimsa
ನಂತರ ಪತ್ರಕರ್ತರು ಕೇಳಿದ, “ನೀವು ಈ ದೇಶದ ಪೌರತ್ವವನ್ನೇ ಪಡೆದಿಲ್ಲ, ನಿಮಗೆ ಮಾತನಾಡುವ ಹಕ್ಕಿದೆಯೇ? ಎಂಬ ಆತನಿಗೆ ಎಲ್ಲ ಕಡೆ ಎದುರಾಗುವ ಸಾಮಾನ್ಯ ಪ್ರಶ್ನೆ ಸೇರಿ ಕ್ರೀಕೇಟ್ ನಲ್ಲಿಯೂ ಮೀಸಲಾತಿ ಏಕೆ ಬೇಕು? ಮೀಸಲಾತಿಯ ಈಗಿನ ದುರುಪಯೋಗ! ಮೀಸಲಾತಿ ಮತ್ತು ದಲಿತರ ಬಗ್ಗೆ ಕಳೆದ 75 ವರ್ಷದಲ್ಲಿ ಕಾಂಗ್ರೆಸ್-ಬಿಜೆಪಿಯ ನಿಲುವು, ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ, ಸಿದ್ದರಾಮಯ್ಯ ಸಮಾಜವಾದಿಯೇ? ದಲಿತರ ಬಗ್ಗೆ ಯಡಿಯೂರಪ್ಪ ನಿಲುವು ಏನು? ಎಂಬ ಹತ್ತಾರು ಪ್ರಶ್ನೆಗೆ ಅಷ್ಟೇ ಸಾವಧಾನವಾಗಿ, ಯಾವುದೇ ಸೈದ್ಧಾಂತಿಕ ಪೂರ್ವಗ್ರಹ ಇಲ್ಲದೇ, ತನ್ನ ನಿಲುವಿಗೆ ಬದ್ಧವಾಗಿ ಪ್ರಶ್ನೆ ಕೇಳಿದವರ ಕಣ್ಣಿನಲ್ಲಿ ಕಣ್ಣಿಟ್ಟು ಉತ್ತರಿಸುವ ಆತನ ಪರಿ ವೈಯಕ್ತಿವಾಗಿ ನನಗೆ ತುಂಬಾ ಇಷ್ಟವಾಯ್ತು.
ಜೊತೆಗೆ ನಾನು ಸದಾ ಪ್ರತಿಪಾದಿಸುವ ವಿಚಾರಕ್ಕೆ ತೀರಾ ಹತ್ತಿರದ ವ್ಯಕ್ತಿ ಈತ ಅಂತಾ ಮನಸ್ಸು ಒತ್ತಿ ಒತ್ತಿ ಹೇಳಿತ್ತು.
ಈ ಕಾರಣಕ್ಕೆ ನಾನು ಸುದ್ದಿಗೋಷ್ಠಿ ಮುಗಿದ ತಕ್ಷಣ ಮನವಿ ಮಾಡಿ, ಜೊತೆಯಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡೆ.( ಸಾಕಷ್ಟು ಜನಪ್ರೀಯ ವ್ಯಕ್ತಿಗಳನ್ನ ಭೇಟಿ ಮಾಡಿದ್ದರೂ ಯಾರ ಜೊತೆಗೆ ಫೋಟೊ ತೆಗೆದುಕೊಂಡಿರಲಿಲ್ಲ) ಇದಕ್ಕೆ ಕಾರಣ, ಆತ ಮಾತು ಮುಗಿಸುವಷ್ಟರಲ್ಲಿ ನನಗೆ ಅನ್ನಿಸಿದ್ದು, ಈತನಿಗೆ ತಾನು ರಾಜಕೀಯವಾಗಿ ಏನೋ ಆಗಬೇಕು ಎಂಬ ಕನಸಿಲ್ಲ. ಯಾವುದೇ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದು, ಬಹುತೇಕರಂತೆ ತಾ ನಂಬಿದ ಸಿದ್ದಾಂತದಲ್ಲಿನ ತಪ್ಪುಗಳನ್ನ ವಿತಂಡ ವಾದ ಮಾಡಿ, ಸಮರ್ಥಿಸುವ ದರ್ದು ತೋರಲಿಲ್ಲ ಅಂತಾ.
ಚೇತನ ಜೊತೆಗಿನ ಮೊದಲ ಮುಖಾಮುಖಿ ಮಾತಿನಿ ನಂತರ, ಫೇಸ್ ಬುಕ್ ಸೇರಿ ವಿವಿಧ ಸಾಮಾಜಿಕ ಜಾಲತಾಣ ತೆರೆದಾಗಲೆಲ್ಲ ಆಗಾಗ ಕಣ್ಣಿಗೆ ಬೀಳುತ್ತಿದ್ದ ನಟ ಚೇತನ ಇವರೇನಾ? ಕೆಲವರಿಗೆ ಎಡಚನಾಗಿ, ಹಲವರಿಗೆ ಚೈಲ್ಡಿಷ್ ಆಗಿ, ಮತ್ತಷ್ಟು ಜನರಿಗೆ ಹಿಂಸೆಯಾಗಿ ಕಾಣುವ ಚೇತನ ಇವರೇನಾ ಅನ್ನಿಸ್ತು.
ಚೇತನ್ ಅವರು ಮಾತನಾಡಿದ ವಿಡಿಯೋ ಎಡಿಟ್ ಮಾಡಿ, ತಮಗೆ ಬೇಕದಷ್ಟು ಉಳಿಸಿಕೊಂಡು ಟ್ರೋಲ್ ಮಾಡುತ್ತಿದ್ದ ವಿಡಿಯೋ ನೋಡಿದ್ದ ನಾನೂ, ಚೇತನ ಅವರ ಬಗ್ಗೆ ಬಹುತೇಕರಂತೆ ಏನೇನೋ ಅಂದುಕೊಂಡಿದ್ದೆ. ಇವರ ಮಾತನ್ನು ಎದುರು ಕುಳಿತು ಕೇಳಿಸಿಕೊಂಡ ನಂತರ ನನಗೆ ಜ್ಞಾಪಕಕ್ಕೆ ಬಂದಿದ್ದು “ನಿಷ್ಠೂರವಾದಿ, ಲೋಕ ವಿರೋಧಿ” ಎಂಬ ಗಾದೆ.
ಏನೇ ಇರಲಿ. ನನ್ನ ಪ್ರಕಾರ ಚೇತನ ಸತ್ಯ ಪಂಥಿಯ. ಈ ಪಂಥ ದೇಶದ ತುರ್ತು ಅಗತ್ಯ ಕೂಡ. ಚೇತನ ಅವರ ವಾದಕ್ಕೆ ಮತ್ತಷ್ಟು ಬಲ ಬರಲಿ ಎಂದು ಹಾರೈಸುವೆ..
ಶರಣಬಸವ ಹುಲಿಹೈದರ