ಬಾಲಕನ ಪರಿಸರ ಪ್ರೇಮಿ ಗಣಪಗೆ ಫಿದಾ.! ಕೈಯಾರೆ ತಯಾರಿಸಿದ ಗಣೇಶನಿಗೆ ನಮನ
ದಾವಣಗೆರೆ: ಪರಿಸರ ಸಂರಕ್ಷಣೆಗೆ ಕೈಜೋಡಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಾಕಷ್ಟು ಜಾಗೃತಿ ಮೂಡಿಸುತ್ತಿದೆಯೇನೊ ಸರಿ. ಆದರೆ, ಅದನ್ನು ಪಾಲಿಸುವಲ್ಲಿ ಮಾತ್ರ ಜನರು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಹಬ್ಬ ಹರಿದಿನಗಳಲ್ಲಂತೂ ಯಥೇಚ್ಛವಾಗಿಯೇ ಪರಿಸರಕ್ಕೆ ಹಾನಿಯುಂಟು ಮಾಡುತ್ತಾರೆ.
ಗಣೇಶ ಚತುರ್ಥಿಗೆ ಪಿಓಪಿ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸಿದ ಗಣಪನ ಮೂರ್ತಿ ತ್ಯಜಿಸಿ, ಪರಿಸರಕ್ಕೆ ಧಕ್ಕೆಯಾಗದಂತೆ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಟಾಪಿಸುವಂತೆ ಹಬ್ಬ ಹತ್ತಿರ ಬಂದಾಗಲೆಲ್ಲ ಜಾಗೃತಿ ಮೂಡಿಸಲಾಗುತ್ತದೆ. ಆದರೆ, ನಾಗರೀಕ ಜನರು ಮತ್ತೂ ರಾಸಾಯನಿಕ ಬಣ್ಣ ಮಿಶ್ರಿತ ಗಣೇಶನನ್ನೆ ಕೊಂಡುಕೊಳ್ಳುತ್ತಾರೆ.
ಆದರೆ, ಇಲ್ಲೊಬ್ಬ ಬಾಲಕ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ತಾನೆ ತನ್ನ ಕೈಯಾರ ತಯಾರಿಸಿದ ಗಣೇಶನಿಗೆ ಯಾವುದೇ ರಾಸಾಯನಿಕ ಬಣ್ಣ ಬಳಿಯದೆ ವಾಟರ್ ಕಲರ್ ಹಾಕಿ ಗಣೇಶ ಮೂರ್ತಿ ತಯಾರಿಸಿ ಪರಿಸರಕ್ಕೆ ಧಕ್ಕೆ ತರುವ ಜನರಿಗೆ ಈ ಮೂಲಕ ಪಾಠ ಮಾಡಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಹತ್ತಿರವಿರುವ ಪುಟ್ಟ ಹಳ್ಳಿಯ ಬನ್ನೂರು ಗ್ರಾಮದ ಪುಟ್ಟ ಬಾಲಕ ಮನೆಯಲ್ಲಿ ಇಡಲು ಗಣಪನನ್ನು ತಯಾರಿಸಿ ಯಾವುದೇ ತರದ ರಾಸಾಯನಿಕ ಪದಾರ್ಥಗಳನ್ನು ಬಳಸದೆ ವಾಟರ್ ಕಲರ್ ಉಪಯೋಗಿಸಿ ಎಲ್ಲರಿಗೂ ಮಾದರಿಯಾಗಿದ್ದಾನೆ.
ಈ ಬಾಲಕನ ಪರಿಸರ ಪ್ರೇಮವನ್ನಾದರೂ ಜನರು ಅಳವಡಿಸಿಕೊಂಡು ಇನ್ನಾದರೂ ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಟಾಪಿಸುವಂತಾಗಲಿ.