ಭದ್ರಾವತಿ ನಗರಸಭೆ ಕಾಂಗ್ರೆಸ್ ತೆಕ್ಕೆಗೆ.! ಅಧ್ಯಕ್ಷರಾಗಿ ಗೀತಾ, ಉಪಾಧ್ಯಕ್ಷರಾಗಿ ಚನ್ನಪ್ಪ ಆಯ್ಕೆ

ಶಿವಮೊಗ್ಗ :ಭದ್ರಾವತಿ ನಗರ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಸ್ಥಾನಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ಜಯಗಳಿಸಿದರು. ಭದ್ರಾವತಿ ನಗರಸಭೆಯ ವಾರ್ಡ್ ನಂ.೨ರ ಸದಸ್ಯೆ ಗೀತಾ ಕೆ.ಜಿ ರಾಜ್ಕುಮಾರ್ ಹಾಗು ಉಪಾಧ್ಯಕ್ಷರಾಗಿ ಚನ್ನಪ್ಪ ಆಯ್ಕೆಯಾಗಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಗೀತಾ ಕೆ.ಜಿ ರಾಜ್ಕುಮಾರ್ ಮತ್ತು ಚನ್ನಪ್ಪ ತಲಾ ೮ ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಗೀತಾ ಕೆ.ಜಿ ರಾಜ್ಕುಮಾರ್, ಜೆಡಿಎಸ್ ಪಕ್ಷದಿಂದ ವಾರ್ಡ್ ನಂ.೧೫ ರ ಮಂಜುಳ ಬಿ.ಎಸ್ ಸುಬ್ಬಣ್ಣ ಹಾಗು ಬಿಜೆಪಿ ಪಕ್ಷದಿಂದ ವಾರ್ಡ್ ನಂ.೫ ರ ಸದಸ್ಯೆ ಶಶಿಕಲಾ ಬಿ.ಎಸ್ ನಾರಾಯಣಪ್ಪ ಸ್ಪರ್ಧಿಸಿದ್ದರು.
ಈ ಪೈಕಿ ಗೀತಾ ೨೦, ಮಂಜುಳ ೧೨ ಮತ್ತು ಶಶಿಕಲಾ ೪ ಮತಗಳನ್ನು ಪಡೆದುಕೊಂಡರು.
ಪರಿಶಿಷ್ಟ ಜಾತಿಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.೯ರ ಸದಸ್ಯ ಚನ್ನಪ್ಪ ಮತ್ತು ಜೆಡಿಎಸ್ ಪಕ್ಷದಿಂದ ವಾರ್ಡ್ ನಂ. ೨೫ ರ ಕೆ. ಉದಯ ಕುಮಾರ್ ಸ್ಪರ್ಧಿಸಿದ್ದು, ಈ ಪೈಕಿ ಚನ್ನಪ್ಪ ೨೦ ಮತಗಳನ್ನು ಹಾಗು ಕೆ. ಉದಯ ಕುಮಾರ್ ೧೨ ಮತಗಳನ್ನು ಪಡೆದುಕೊಂಡರು.
ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ೪ ಸದಸ್ಯರು ತಟಸ್ಥವಾಗಿ ಉಳಿದುಕೊಂಡರು.
ಭದ್ರಾವತಿ ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದಾರೆ.ಸ್ಥಳಿಯ ಶಾಸಕರು ಸೇರಿ ಒಟ್ಟು 36 ಜನ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ನಗರಸಭೆಯಲ್ಲಿ ಕಾಂಗ್ರೆಸ್ 18, ಜೆಡಿಎಸ್ 12, ಬಿಜೆಪಿ 4 ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.
ಚುನಾವಣಾಧಿಕಾರಿಯಾಗಿ ಶಿವಮೊಗ್ಗ ಉಪ ವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಕರ್ತವ್ಯ ನಿರ್ವಹಿಸಿದರು.