Blood letter: ಸೆಪ್ಟೆಂಬರ್ 17 ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಕಾಂಗ್ರೆಸ್ ನಿಂದ ‘ರಕ್ತ ಪತ್ರ ಕ್ರಾಂತಿ’ ಪ್ರತಿಭಟನೆ
ದಾವಣಗೆರೆ: ರಾಜ್ಯ ಯುವ ಕಾಂಗ್ರೆಸ್ನಿಂದ ಇದೇ ಸೆ. 17 ರಂದು ಇರುವ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ರಾಷ್ಟೀಯ ನಿರುದ್ಯೋಗ ದಿನಾಚರಣೆ ಹಾಗೂ ರಕ್ತದಲ್ಲಿ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ‘ರಕ್ತ ಪತ್ರ ಕ್ರಾಂತಿ’ ಎಂಬ ವಿಶಿಷ್ಟ ರೀತಿಯ ಪ್ರತಿಭಟನೆಯನ್ನು ನಗರದ ಪ್ರಧಾನ ಕೇಂದ್ರ ಅಂಚೆ ಕಚೇರಿ ಮುಂಭಾಗ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂದು ಸುಳ್ಳು ಆಶ್ವಾಸನೆ ನೀಡಿದ್ದ ಪ್ರಧಾನಿ ಮೋದಿ ಹುಟ್ಟಿದ ದಿನವನ್ನು ನಿರುದ್ಯೋಗ ದಿನ ಎಂದು ಆಚರಣೆ ಮಾಡಲಾಗುತ್ತಿದೆ ಎಂದರು.
ಪ್ರಧಾನಿ ಮೋದಿಯವರು 2014ರ ಲೋಕಸಭಾ ಚುನಾವಣಾ ಸಮಯದಲ್ಲಿ ದೇಶದ ಯುವಕರಿಗೆ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು ಇಲ್ಲಿಗೆ ಏಳು ವರ್ಷವಾಗಿದ್ದು, ಅಲ್ಲಿಗೆ 14 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಾಗಿತ್ತು. ಆದರೆ, ಉದ್ಯೋಗ ಸೃಷ್ಟಿ ಮಾಡದೆ ಉದ್ಯೋಗವನ್ನು ಸಹ ಕಿತ್ತುಕೊಳ್ಳುತ್ತಿದ್ದು, ದೇಶದ ಯುವಕರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಇವರ ಆಡಳಿತ ವಿರುದ್ಧ ಬೇಸತ್ತು ಇಂದು ಯುವ ಕಾಂಗ್ರೆಸ್ ರಕ್ತದ ಮೂಲಕ ಪತ್ರ ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದೆ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ ಪ್ರಧಾನಿ ಮೋದಿಯವರು ದೇಶದ ಜನತೆಗಾಗಿ ಆಡಳಿತ ನಡೆಸುತ್ತಿಲ್ಲ ಅದರ ಬದಲಾಗಿ ಕೇವಲ ಅದಾನಿ, ಅಂಬಾನಿ ಎಂಬ ಇಬ್ಬರು ಉದ್ಯಮಿಗಳಿಗಾಗಿ ಅಧಿಕಾರ ನಡೆಸುತ್ತಿದ್ದು, 60 ವರ್ಷ ಕಾಂಗ್ರೆಸ್ ಮಾಡಿದ ಸಂಪತ್ತುಗಳನ್ನು ಮಾರಾಟ ಮಾಡುತ್ತಾ ಮನಸೋಇಚ್ಛೆ ಅಧಿಕಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ ಶೆಟ್ಟಿ ಮಾತನಾಡಿ, ದೇಶದಲ್ಲಿ ಯುವಕರು ಈಗಲಾದರೂ ಎಚ್ಚೆತ್ತುಕೊಂಡು ಹೋರಾಟ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ತುಂಬಾ ಕಷ್ಟ ಅನುಭವಿಸ ಬೇಕಾಗುತ್ತದೆ, ಕೇವಲ ಯುವಕರನ್ನು ಚುನಾವಣೆಯಲ್ಲಿ ದ್ವೇಷ ಬಿತ್ತಿ ಮತಗಳಿಸಲು ಬಳಸಲಾಗುತ್ತದೆ ವಿನಹ ಅವರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ಲಾಕ್ ಅಧ್ಯಕ್ಷರಾದ ಅಯೂಬ್ ಪೈಲ್ವಾನ್, ಇಂಟಕ್ ಅಧ್ಯಕ್ಷರಾದ ಮಂಜುನಾಥ್, ಮೊಹಮ್ಮದ್ ಜಿಕ್ರಿಯಾ,ಹರೀಶ್.ಕೆ.ಎಲ್, ವಿನಯ್,ನವೀನ್ ನಾಲವಾಡಿ ಶಶಿಧರ್ ಪಾಟೀಲ್,ಮಹಬೂಬ್ ಬಾಷಾ, ರಾಘವೇಂದ್ರ ಗೌಡ ಅಣ್ಣೇಶ್, ದೀಪಕ್, ಶಮಿ ದೇವರಹಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.