ಸಿಎಂ ಬೊಮ್ಮಾಯಿ ಬಜೆಟ್ ರಾಜ್ಯದ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿದೆ – ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ

ಹಾವೇರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ರಾಜ್ಯದ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿದೆ ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾದ ಸಿದ್ದರಾಜ ಕಲಕೋಟಿ ಹೇಳಿದರು. ದುರ್ಬಲ ವರ್ಗದವರು, ರೈತರು. ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದ ಜನರು ಸ್ವಾಭಿಮಾನದಿಂದ ಬದುಕಲು ಯೋಜನೆಗಳನ್ನು ರೂಪಿಸಿದ್ದಾರೆ. ಪ್ರಾದೇಶಿಕ ಸಮತೋಲನ ನಿವಾರಣೆಯೊಂದಿಗೆ ೨,೬೫,೭೨೦ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಮೋದಿ ಆಶಯದಂತೆ ರೈತರ ಬಗ್ಗೆ ಕಾಳಜಿ ತೋರಿಸಿದ್ದಾರೆ. ಹೈನುಗಾರಿಗೆ, ಕೃಷಿ, ಕೈಗಾರಿಕೆ, ಮೂಲಸೌಕರ್ಯ, ಪ್ರವಾಸೋದ್ಯಮ, ಸೇವಾ ವಲಯಗಳಿಗೆ ಉತ್ತೇಜನ ನೀಡುವಲ್ಲಿ ಬಜೆಟ್ ಸಹಕಾರಿಯಾಗಲಿದೆ. ಕರೋನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಯಾವುದೇ ತೆರಿಗೆ ಭಾರ ಹಾಕದೇ ಆರ್ಥಿಕ ಶಿಸ್ತು ಕಾಪಾಡಿಕೊಂಡು ಶಿಕ್ಷಣ, ಉದ್ಯೋಗಕ್ಕೆ ಒತ್ತು ನೀಡಿದ್ದಾರೆ, ಗೋವುಗಳ ಸಂರಕ್ಷಣೆಗೂ ಆದ್ಯತೆ ನೀಡಿದ್ದಾರೆ. ಹೊಸ ಚಿಂತನೆ, ಹೊಸ ಚೈತನ್ಯ ಹಾಗೂ ಹೊಸ ಮುನ್ನೋಟದೊಂದಿಗೆ ನವ ಭಾರತಕ್ಕಾಗಿ ನವ ಕರ್ನಾಟಕ ಎಂಬ ಘೋಷಣೆಯೊಂದಿಗೆ ರಾಜ್ಯದ ಸರ್ವಾಂಗೀಣ ಅಭಿವೃದ್ದಿಯ ದೂರದೃಷ್ಟಿಯನ್ನು ಇಟ್ಟುಕೊಂಡು ಮಂಡಿಸಿದ ಪ್ರಗತಿಪರ ಬಜೆಟ್ ಇದಾಗಿದೆ. ಜಿಲ್ಲೆಗೂ ಬರಪೂರ ಯೋಜನೆಗಳನ್ನು ಘೋಷಿಸಿದ್ದಾರೆ ಮೆಕ್ಕೆಜೋಳ, ಮಾವು, ಮೇಣಸಿನಕಾಯಿ ಸಂಶೋಧನಾ ಕೇಂದ್ರ ಸ್ಥಾಪನೆ, ಹೊಸ ವಿಶ್ವವಿದ್ಯಾಲಯ, ಆಯುರ್ವೇದ ಕಾಲೇಜ, ಕೈಗಾರಿಕಾ ಸ್ಥಾಪನೆ, ರೇಷ್ಮೆ ಗೂಡು ಮಾರುಕಟ್ಟೆ, ಸಾಂಸ್ಕೃತಿಕ ಭವನ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ತವರು ಜಿಲ್ಲೆಯಾದ ಹಾವೇರಿಗೆ ನೀಡಿದ್ದು, ಇದು ಜಿಲ್ಲೆಯ ಅಭಿವೃದ್ದಿಗೆ ನೆರವಾಗಲಿದೆ ಎಂದು ಸಿದ್ದರಾಜ ಕಲಕೋಟಿ ಬಜೆಟ್ ಪ್ರಕ್ರಿಯೆ ತಿಳಿಸಿದ್ದಾರೆ.