ಬಿಜೆಪಿ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆಕಾಂಕ್ಷಿಗಳ ಎದೆಯಲ್ಲಿ ಢವ ಢವ, ಮಾಧ್ಯಮಗಳತ್ತ ಚಿತ್ತ

ಬೆಂಗಳೂರು: ವಿಧಾನಸಭಾ ಚನಾವಣೆ ಘೋಷಣೆಯಾದಾಗಿನಿಂದಲೂ ಟೆಕೆಟ್ಗಾಗಿ ಹಲವು ಆಕಾಂಕ್ಷಿಗಳು ವರಿಷ್ಟರಿಗೆ ದುಂಬಾಲು ಬಿದ್ದಿದ್ದಾರೆ.
ಈಗಾಗಲೇ ಹಲವು ಸುತ್ತಿನ ಚರ್ಚೆಗಳನ್ನು ನಡೆಸಿರುವ ಬಿಜೆಪಿ ವರಿಷ್ಠರು ಇನ್ನೇನು ಪ್ರಥಮ ಪಟ್ಟಿ ರಿಲೀಸ್ ಮಾಡಲಿದ್ದಾರೆ. ಇಂದು ಬಹುತೇಕ ಪಟ್ಟಿ ಬಿಡುಗಡೆಯಾಗಲಿ ಎನ್ನಲಾಗಿದ್ದು, ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.
ಟಿಕೆಟ್ ಸಿಗುತ್ತದೋ ಇಲ್ಲವೋ? ಸಿಕ್ಕರೆ ಮುಂದಿನ ಚುನಾವಣಾ ಯುದ್ದಕ್ಕೆ ಹೇಗೆ ತಯಾರಾಗಬೇಕು? ಇಲ್ಲದಿದ್ದರೆ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಏನು ಮಾಡಬೇಕು? ಎಂಬಿತ್ಯಾದಿ ಆಲೋಚನೆಗಳು ಆಕಾಂಕ್ಷಿಗಳ ಮನದಲ್ಲಿವೆ.
ಪಟ್ಟಿ ಬಿಡುಗಡೆ ವಿಷಯ ಕೇಳಲು ಈಗಾಗಲೇ ಅಭ್ಯರ್ಥಿಗಳ ಚಿತ್ತ ಮಾಧ್ಯಮಗಳತ್ತ ಇದೆ. ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ಮಾತ್ರ ಬಿಡುಗಡ ಮಾಡಿಲ್ಲ.
ಭಾನುವಾರ ಸಂಜೆ ದೆಹಲಿಯಲ್ಲಿ ಸುಮಾರು 2 ಗಂಟೆಗಳ ಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ನೇತೃತ್ವದಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆದರೂ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಸಭೆಯಲ್ಲಿ ಮೋದಿ ಸೇರಿದಂತೆ ಹಲವು ನಾಯಕರು ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕೆಲವು ಸಲಹೆ ಸೂಚನೆಗಳನ್ನು ನೀಡಿರುವದರಿಂದ ಅವುಗಳನ್ನು ಮುಂದಿಟ್ಟುಕೊಂಡು ಇಂದು ಮತ್ತೊಮ್ಮೆ ಹಿರಿಯ ನಾಯಕರ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಅಲಿಖಿತ ನಿಯಮದಂತೆ 75 ವರ್ಷ ವಯಸ್ಸಾದವರಿಗೆ ಟಿಕೆಟ್ ನೀಡಬೇಕೆ ಅಥವಾ ಬೇಡವೇ? ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಟಿಕೆಟ್ ನೀಡಬೇಕೇ ಅಥವಾ ಗೆಲುವಿನ ಸಾಧ್ಯತೆ ನೋಡಿ ಸಡಿಲಿಕೆ ಮಾಡಬೇಕೇ? ಆಡಳಿತ ವಿರೋಧಿ ಅಲೆ ಹಿನ್ನೆಲೆಯಲ್ಲಿ ಹಲವು ಹಾಲಿ ಶಾಸಕರನ್ನು ಕೈಬಿಡಬೇಕೇ ಅಥವಾ ಅವರಿಗೇ ಮಣೆ ಹಾಕಬೇಕೆ ಎಂಬಿತ್ಯಾದಿ ಅಂಶಗಳ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ಕೆಲ ಗೊಂದಲಗಳು ಮುಂದುವರೆದಿದೆ. ಈ ಗೊಂದಲಗಳಿಗೆ ಸೋಮವಾರ ಪರಿಹಾರ ಕಂಡುಕೊಂಡ ಬಳಿಕ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.