ದೇವಸ್ಥಾನಕ್ಕೆ ಪ್ರವೇಶ ನಿರ್ಬಂಧ: ಉಚ್ಚಂಗಿದುರ್ಗ ದೇವಸ್ಥಾನದ ಗ್ರಾಮದ ಹೊರಗೆ ಪೂಜೆ ಸಲ್ಲಿಸಿದ ಭಕ್ತರು

ಬಳ್ಳಾರಿ: ಬಳ್ಳಾರಿ ಜಿಲ್ಲಾಧಿಕಾರಿಗಳ ಆದೇಶದಂತೆ ಕೊರೋನಾ 3 ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸಲು ಶ್ರಾವಣ ಮಾಸದಲ್ಲಿ ಪ್ರತಿ ಶುಕ್ರವಾರ ಮಂಗಳವಾರ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ಭಕ್ತಾದಿಗಳಿಗೆ ದೇವಸ್ಥಾನದ ಒಳಗಡೆ ದೇವಿಯ ದರ್ಶನಕ್ಕೆ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು.
ಈ ಆದೇಶದಂತೆ ನೂಲು ಹುಣ್ಣಿಮೆಯ ಪ್ರಯುಕ್ತ ಸಾವಿರಾರು ಜನ ಭಕ್ತಾದಿಗಳು ಗ್ರಾಮದ ಉಚ್ಚೆಂಗೆಮ್ಮನ ದರ್ಶನಕ್ಕೆ ಬರುತ್ತಾರೆ ಎನ್ನುವ ಮುನ್ನೆಚ್ಚರಿಕೆಯಿಂದ ಬಳ್ಳಾರಿ ಜಿಲ್ಲಾ ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಅರಸೀಕೆರೆ ಪೊಲೀಸ್ ಠಾಣೆ, ಉಚ್ಚಂಗಿದುರ್ಗ ಗ್ರಾಮ ಪಂಚಾಯ್ತಿ,ದೇವಸ್ಥಾನದ ಸಮಿತಿ,ನೇತೃತ್ವದಲ್ಲಿ ಗ್ರಾಮದಲ್ಲಿರುವ ಎಲ್ಲಾ ದೇವಸ್ಥಾನಗಳು ಹಾಗೂ ಗುಡ್ಡದ ಮೇಲೆ ಹೋಗುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಗ್ರಾಮದ ಹೊರಗಡೆ ಜನರು ಎಲ್ಲೆಂದರೆ ಕಾಯಿಗಳನ್ನು ಒಡೆದು ಪೂಜೆ ಸಲ್ಲಿಸಿ ತಮ್ಮ ಗ್ರಾಮಗಳಿಗೆ ವಾಪಸು ತೆರಳಿದರು.
ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕೆಯಿಂದ ಶ್ರಾವಣ ಮಾಸದ ಹುಣ್ಣಿಮೆ,ಅಮಾವಾಸ್ಯೆ, ಶುಕ್ರವಾರ, ಮಂಗಳವಾರ ದೇವಿಯ ದರ್ಶನ ಅವಕಾಶವಿಲ್ಲ ಎಂದು ಧ್ವನಿವರ್ಧಕ,ಬ್ಯಾನರ್,ಮಾಧ್ಯಮದ ಮೂಲಕ ಜಾಗೃತಿ ಮೂಡಿಸಲಾಗಿದೆ ಭಕ್ತರೂ ಕರೋನ ನಿಯಮಗಳನ್ನು ಪಾಲಿಸಿ ಕೋವಿಡ್ ಸೋಂಕು ಹೆಚ್ಚಾಗದಂತೆ ಸಹಕರಿಸಬೇಕು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾದ ಪ್ರಕಾಶ್ ರಾವ್ ತಿಳಿಸಿದರು