ಚಿತ್ರದುರ್ಗ: ಕುಡಿದು ವಾಹನ ಚಲಾಯಿಸಿದ್ದಲ್ಲದೇ, ದಂಡ ಪಾವತಿಸದ ಸವಾರನಿಗೆ ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಲಾಗಿದೆ.
ವೃತ್ತಿಯಲ್ಲಿ ಹಮಾಲಿಯಾಗಿರುವ ಚಿತ್ರದುರ್ಗ ನಗರದ ಸಂಪಿಗೆ ಸಿದ್ಧೇಶ್ವರ ಶಾಲೆಯ ಹಿಂಭಾಗದ ಬಡಾವಣೆಯ ನಿವಾಸಿ ಟಿ.ರವಿಕುಮಾರ್, ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದಡಿ ಫೆ.2ರಂದು ಮೆದೇಹಳ್ಳಿ ರಸ್ತೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.
ಪೊಲೀಸರು ಕುಡಿದು ವಾಹನ ಚಾಲನೆ ಮಾಡಿದ್ದಕ್ಕೆ 10 ಸಾವಿರ ರೂ. ಅಪಾಯಕಾರಿ ಚಾಲನೆಗೆ 10 ಸಾವಿರ ರೂ. ಹಾಗೂ ಹೆಲ್ಮೆಟ್ ಧರಿಸದೇ ಇರುವುದಕ್ಕೆ 500 ರೂ. ದಂಡ ವಿಧಿಸಿದ್ದರು. ನ್ಯಾಯಾಲಯಕ್ಕೆ ಹಾಜರಾಗಿ ದಂಡ ಪಾವತಿಸುವಂತೆ ತಾಕೀತು ಮಾಡಲಾಗಿತ್ತು.
ಸಿಜೆಎಂ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾದ ರವಿಕುಮಾರ್ಗೆ ದಂಡದ ಮೊತ್ತದಲ್ಲಿ ಶೇ 50ರಷ್ಟು ವಿನಾಯಿತಿ ನೀಡಿದ ನ್ಯಾಯಾಧೀಶ ಕೆಂಪರಾಜು ಅವರು 10,250 ಪಾವತಿಸುವಂತೆ ಸೂಚಿಸಿದ್ದರು. ತನ್ನ ಬಳಿ 2 ಸಾವಿರ ರೂ. ಮಾತ್ರ ಇದೆ, ಉಳಿದ ದಂಡ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ರವಿಕುಮಾರ್ ಮನವಿ ಮಾಡಿದ್ದ. ದಂಡ ಪಾವತಿಸಲು ಸಾಧ್ಯವಾಗದ ಸವಾರನಿಗೆ ನ್ಯಾಯಾಧೀಶರು ಒಂದು ವರ್ಷ ಸಾಧಾರಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
