ತಂತ್ರಜ್ಞಾನದ ಪಿತಾಮಹ ಶ್ರಿ ರಾಜೀವ್ ಗಾಂಧಿ, ಹಿಂದುಳಿದ ವರ್ಗಗಳ ನೇತಾರ ಶ್ರಿ ದೇವರಾಜ್ ಅರಸ್ – ಎಚ್.ಬಿ. ಮಂಜಪ್ಪ

ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿಗಳಾದ ಶ್ರೀ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ದೇವರಾಜ ಅರಸ್ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಮತ್ತು ಎನ್ಎಸ್ ಯು ಐ ವತಿಯಿಂದ ರಕ್ತ ದಾನ ಮಾಡುವ ಮೂಲಕ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಚ್.ಬಿ. ಮಂಜಪ್ಪನವರು ದೇಶ ಹಾಗೂ ರಾಜ್ಯ ಕಂಡಂತಹ ಮಹಾನ್ ನಾಯಕರುಗಳ ಹುಟ್ಟಿದ ಹಬ್ಬ ಒಂದೇ ದಿನ ಇರುವುದು ವಿಶೇಷ ಎಂದು ಬಣ್ಣಿಸಿದರು, ರಾಜೀವ್ ಗಾಂಧಿಯವರು ಆಧುನಿಕ ಭಾರತದ ಕನಸುಗಾರ, ತಂತ್ರಜ್ಞಾನದ ಪಿತಾಮಹ, ಯುವಜನತೆಗೆ ಮಾದರಿ ಎಂದು ತಿಳಿಸಿದರು. ದೇವರಾಜ್ ಅರಸು ರವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದಂತಹ ಮಹಾನ್ ನಾಯಕರಾಗಿದ್ದರು, ಅವರ ಆಡಳಿತದಲ್ಲಿ ಹಿಂದುಳಿದವರನ್ನೂ, ದೀನದಲಿತರನ್ನೂ ರಾಜಕೀಯವಾಗಿ, ಶೈಕ್ಷಣಿಕವಾಗಿ ಮುನ್ನೆಲೆಗೆ ತಂದರು ಎಂದರು.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಮಾತನಾಡಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸುರವರ ರಾಜಕೀಯ ತೀರ್ಮಾನ, ಜನಸಾಮಾನ್ಯರ ಬಗ್ಗೆ ಅವರಿಗಿದ್ದ ಆಲೋಚನೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ಪಾಲಿಕೆಯ ವಿಪಕ್ಷ ನಾಯಕ ಎ. ನಾಗರಾಜ್ ಮಾತನಾಡಿ ಹತ್ತಾರು ಹಿಂದುಳಿದ ವರ್ಗಗಳ ಸಮುದಾಯಗಳನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ದೇವರಾಜ ಅರಸು ರವರಿಗೆ ಸಲ್ಲುತ್ತದೆ ಎಂದರು, ರಾಜೀವ್ ಗಾಂಧಿಯವರ ಮುಂದಾಲೋಚನೆಯಿಂದ ಇಂದು ದೇಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಅವರು ಮಾತನಾಡಿ ಈ ಮಹಾನ್ ನಾಯಕರುಗಳು ಹಾಕಿಕೊಟ್ಟ ಬುನಾದಿಯೇ ಯುವಜನತೆಯ ಜೀವನಕ್ಕೇ ಹಾಗೂ ಹಿಂದುಳಿದ ವರ್ಗಗಳ ಸಂತೃಪ್ತಿಯ ಜೀವನಕ್ಕೆ ಸಾಕ್ಷಿಯಾಗಿದೆ ಎಂದರು.
ಓಬಿಸಿ ಜಿಲ್ಲಾಧ್ಯಕ್ಷ ಹಾಲೇಶ್ ಅವರು ಮಾತನಾಡಿ ನಮ್ಮಂತಹ ಸಮುದಾಯಗಳ ನಾಯಕರುಗಳು ರಾಜಕೀಯ ಪ್ರತಿನಿತ್ಯ ಪಡೆಯುವ ಕನಸನ್ನು ನನಸು ಮಾಡಿದ ಮಹಾನ್ ಚೇತನ ಶ್ರೀ ದೇವರಾಜ ಅರಸು ಎಂದು ತಮ್ಮ ಘಟಕದ ಪರವಾಗಿ ವಿಶೇಷ ಧನ್ಯವಾದ ತಿಳಿಸಿದರು. ದೇಶದಲ್ಲಿ ಯುವಕರು ತಂತ್ರಜ್ಞಾನ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೂ ರಾಜೀವ್ ಗಾಂಧಿಯವರ ಹೆಸರು ಚಿರಾಯುವಾಗಿ ಉಳಿಯಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ನ ಮಾಜಿ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಹಾಗೂ ಇನ್ನಿತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಸಾಮಾಜಿಕ ಜಾಲ ತಾಣದ ಕೆ.ಎಲ್.ಹರೀಶ್ ಬಸಾಪುರ, ಕಾರ್ಮಿಕ ಘಟಕದ ಸುಭಾನ್ ಸಾಬ್, ಇಂಟೆಕ್ ಮಂಜುನಾಥ್, ದಾದಾಪೀರ್, ಕಿಸಾನ್ ಘಟಕದ ಬಾತಿ ಶಿವಕುಮಾರ್, ಮೊಹಮದ್ ಜಿಕ್ರಿಯ, ಸೇವಾದಳದ ಅಬ್ದುಲ್ ಜಬ್ಬಾರ್, ಎನ್ಎಸ್ ಯು ಐ ನ ರಹಮತ್ ಅಲಿ, ಶಶಿಧರ್ ಪಾಟೀಲ್,ಸಾಗರ್, ಶಮಿ ದೇವರಟ್ಟಿ, ದಾದಾಪೀರ್, ಮಹಮ್ಮದ್ ಬಾಷಾ, ಯುವರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 20ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.