ದಾವಣಗೆರೆ :ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೀಯೋ ಓಎಫ್ಸಿ ಕೇಬಲ್ ಅಳವಡಿಸಲು ನೀಡಿದ್ದ ಅನುಮತಿ ದಿನಾಂಕ ಮುಗಿದಿದ್ದರೂ ಕೇಬಲ್ ಅಳವಡಿಸುತ್ತಿದ್ದವರಿಗೆ ಪಾಲಿಕೆ ಇಂಜಿನಿಯರ್ ಶಾಕ್ ನೀಡಿದ್ದಾರೆ.
ನಗರದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಅನುಮತಿ ನೀಡಿದ್ದ ದಿನಾಂಕ ಮುಗಿದ ಹಿನ್ನೆಲೆಯಲ್ಲಿ ಪರವಾನಿಗೆಯನ್ನು ನವೀಕರಿಸದೇ ಕೇಬಲ್ ಅಳವಡಿಸುವ ಕಾರ್ಯವನ್ನು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿ ಕಾಮಗಾರಿ ಮಾಡುತ್ತಿದ್ದರು, ಇದೀಗ ಪಾಲಿಕೆ ಅಧಿಕಾರಿಗಳು ಕೇಬಲ್ ಗಳನ್ನು ಸೀಜ್ ಮಾಡಿರುವ ಘಟನೆ ಗುರುವಾರ ನಡೆದಿದೆ.
ನಗರದ ಜಯದೇವ ವೃತ್ತದ ಬಳಿಯಿಂದ ಕೆ ಟಿಜಂಬಣ್ಣ ವೃತ್ತದ ಮಾರ್ಗ ಮಧ್ಯದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲಯ ಮುಂದೆ ಹಾಗೂ ಇ ಎಸ್ ಐ ಕಚೇರಿ ಬಳಿಯ ಮುಂಬಾಗದ ರಸ್ತೆಯಲ್ಲಿ ಓ.ಎಫ್.ಸಿ. ಕೇಬಲ್ ಅಳವಡಿಕೆ ಕಾರ್ಯ ನಡೆಯುತ್ತಿತ್ತು. ಈ ಕಾರ್ಯವನ್ನು ಸಮರ್ಪಕವಾಗಿ ನಡೆಸದ ಕುರಿತು ಸ್ಥಳೀಯರಿಂದ ವಿರೋಧವೂ ವ್ಯಕ್ತವಾಗಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಸ್ಥಳಕ್ಕೆ ಬಂದ ಇಂಜಿನಿಯರ್ ಪರವಾನಿಗೆ ನೋಡಿದ ನಂತರ ಅಕ್ರಮವಾಗಿ ಕೇಬಲ್ ಅಳವಡಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ, ಇದರ ಬಗ್ಗೆ ಪಾಲಿಕೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳದಲ್ಲಿ ಇದ್ದ ಓ ಎಫ್ ಸಿ ಕೇಬಲ್ ಗಳನ್ನ ಸೀಜ್ ಮಾಡಲಾಗಿದೆ.
ಕೆಟಿಜೆ ನಗರ, ಶಿವಪ್ಪಯ್ಯ ಸರ್ಕಲ್, ಜಯದೇವ ವೃತ್ತ, ನಿಟುವಳ್ಳಿ ರಸ್ತೆ, ಡಾಂಗೆ ಪಾರ್ಕ್, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಭಾಗ, ಚರ್ಚ್ ರಸ್ತೆ, ಸರಸ್ವತಿ ಬಡಾವಣೆ ಸೇರಿ ಒಟ್ಟು 8450 ಮೀಟರ್ ಓಎಫ್ಸಿ ಕೇಬಲ್ ಅಳವಡಿಕೆಗೆ ಕಳೆದ 2022ರ ಡಿಸೆಂಬರ್ 26ರಂದು ಮಹಾನಗರ ಪಾಲಿಕೆಯಿಂದ ಅನುಮತಿ ನೀಡಲಾಗಿತ್ತು. ಅನುಮತಿ ನೀಡಿದ ದಿನಾಂಕದಿಂದ 120 ದಿನಗಳಲ್ಲಿ ಕೇಬರ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸುವಂತೆ ಕರಾರಿನಲ್ಲಿ ಸೂಚಿಸಲಾಗಿತ್ತು.
ಆದರೆ ಅನುಮತಿ ದಿನಾಂಕ ಮುಗಿದ್ದರೂ ಕೇಬಲ್ ಅಳವಡಿಕೆ ಕಾರ್ಯ ನಿರಂತರವಾಗಿ ನಡೆದಿತ್ತು. ಈ ಕುರಿತು ಸಾರ್ವಜನಿಕರು ಪ್ರಶ್ನಿಸಿದರೆ, ಗುತ್ತಿಗೆದಾರರ ಕಡೆಯವರು ಸಾರ್ವಜನಿಕರಿಗೇ ಸರಿಯಾದ ಮಾಹಿತಿ ನೀಡದೆ ಉಢಾಫೆ ಉತ್ತರ ನೀಡುತ್ತಾರೆ ಎಂದು ಕೆಲ ಸಾರ್ವಜನಿಕರು ಆರೋಪಿಸಿದ್ದರು. ಇದೀಗ ಮಹಾನಗರ ಪಾಲಿಕೆ ಅಧಿಕಾರಿಗಳೇ ಜಯದೇವ ವೃತ್ತದಿಂದ ಕೆಟಿ ಜಂಬಣ್ಣ ರಸ್ತೆಯ ಮಧ್ಯ ರಸ್ತೆಯಲ್ಲಿ ಕೇಬಲ್ ಅಳವಡಿಕೆ ಕೆಲಸ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ಕೇಬಲ್ ಜಪ್ತಿ ಮಾಡಿ ಪಾಲಿಕೆಗೆ ತೆಗೆದುಕೊಂಡು ಹೋಗಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಪ್ರತಿಷ್ಟಿತ ಜಿಯೋ ಕಂಪನಿಯ ಓ ಎಫ್ ಸಿ ಕೇಬಲ್ ಅಳವಡಿಸುವ ಕಾರ್ಯದಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಪಾಲಿಕೆಯ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ಮಾತುಗಳು ಇದೀಗ ನಿಜವಾಗುತ್ತಿವೆ, ಇನ್ನೂ ಕೂಡ ದಾವಣಗೆರೆ ನಗರದಲ್ಲಿ ಇದೇ ರೀತಿ ಕೆಲಸ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ, ಸಾರ್ವಜನಿಕರು ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡುಬಹುದಾಗಿದೆ.
