ಪತ್ರಕರ್ತ ಸಂಘದ ಚುನಾವಣಾ ಪ್ರಚಾರ ಸಭೆ ಉದ್ಘಾಟನೆ: ಇ.ಎಂ. ಮಂಜುನಾಥ್ ಹಾಗೂ ಕೆ.ಚಂದ್ರಣ್ಣ, ವೀರಪ್ಪ ಬಾವಿ ತಂಡ ಸಮರ್ಥವಾಗಿದೆ – ಜನತಾವಾಣಿ ಸಂಪಾದಕ ಎಂ ಎಸ್ ವಿಕಾಸ್

ದಾವಣಗೆರೆ, ಫೆ. 19- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣಾ ಪ್ರಚಾರ ಸಭೆಯನ್ನು ಶನಿವಾರ ಸಂಜೆ ಜನತಾವಾಣಿ ಕಚೇರಿಯಲ್ಲಿ ಸಂಪಾದಕ ಎಂ.ಎಸ್. ವಿಕಾಸ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಚುನಾವಣೆಯನ್ನು ಒಪ್ಪಿಕೊಂಡ ಪತ್ರಕರ್ತರುಗಳಾದ ನಾವುಗಳು, ಚುನಾವಣೆ ಅನಿವಾರ್ಯವಾದಾಗ ಗೆಲವು ಬಯಸುವುದೂ ಅನಿವಾರ್ಯ ಎಂದರು. ಚುನಾವಣೆ ಕುರಿತು ಮಹಾಭಾರತದ ಕೆಲ ದುಷ್ಟಾಂತಗಳ ಮೂಲಕ ವಿಶ್ಲೇಷಿಸಿದ ಅವರು, ಶಾಂತಿಯುತ ಚುನಾವಣೆ ನಡೆಸುವಂತೆ ಸಲಹೆ ನೀಡಿದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿರುವ ಇ.ಎಂ. ಮಂಜುನಾಥ್ ಹಾಗೂ ಕೆ.ಚಂದ್ರಣ್ಣ, ವೀರಪ್ಪ ಬಾವಿ ಇವರ ತಂಡವು ಸಮರ್ಥವಾಗಿದೆ. ಈ ತಂಡವನ್ನು ಗೆಲ್ಲಿಸುವುದರ ಮೂಲಕ ಪುನಃ ಸಂಘದ ಧ್ಯೇಯೋದ್ಧೇಶಗಳನ್ನು ಸ್ಥಾಪಿಸಿ ಪತ್ರಕರ್ತರ ಸಂಘದ ಮೌಲ್ಯಗಳನ್ನು ಹೆಚ್ಚಿಸಬೇಕಿದೆ ಎಂದರು. ಹಿರಿಯ ಪತ್ರಕರ್ತರು, ವ್ಯಂಗ್ಯ ಚಿತ್ರಕಾರರೂ ಆದ ಹೆಚ್.ಬಿ. ಮಂಜುನಾಥ್ ಮಾತನಾಡಿ, ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅನುಭವ ಇರುವರು ಈ ಗುಂಪಿನಲ್ಲಿದ್ದು, ಎಲ್ಲಾ ರೀತಿಯಿಂದಲೂ ಸಮರ್ಥರಾಗಿದ್ದಾರೆ. ಸಮರ್ಥರಿಗೆ ಈ ಸ್ಥಾನಗಳು ದೊರೆಯಬೇಕೆಂದು ತಮ್ಮ ಹಿತ ನುಡಿಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ.ಭಾವಿ ಮಾತನಾಡುತ್ತಾ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಘದಲ್ಲಿ ಜಿಲ್ಲಾ ಸಂಘ ಅನೇಕ ರಚನಾತ್ಮಕ ಕಾರ್ಯಗಳನ್ನು ನಡೆಸಿದೆ. ಕೋವಿಡ್ ಸಂದರ್ಭಗಳಲ್ಲಿ ನೊಂದ ಪತ್ರಕರ್ತರಿಗೆ ಕಿಟ್ ಹಾಗೂ ಆಹಾರದ ಕಿಟ್ ಗಳನ್ನು ಕೊಡಿಸುವಲ್ಲಿ ಸಫಲವಾಗಿದೆ. ಸಂಘದ ಒತ್ತಾಯದ ಮೇಲೆ ಮಹಾನಗರ ಪಾಲಿಕೆಯು ಜಿಲ್ಲಾ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಂಘಕ್ಕೆ 10 ಲಕ್ಷ ರೂ.ಗಳ ಠೇವಣಿಯನ್ನು ಕಾಯ್ದಿರಿಸಿದೆ. ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ 45 ವಾಚನಾಲಯಗಳನ್ನು ಆರಂಭಿಸಬೇಕೆಂಬ ಸಂಘದ ಮನವಿಗೆ ಪಾಲಿಕೆಯು ಸ್ಪಂದಿಸಿ ಹೆಚ್ಚುವರಿ ವಾಚನಾಲಯಗಳನ್ನು ತೆರೆಯಲು ಮುಂದಾಗಿದೆ ಎಂದು ಹೇಳಿದರು.
ಪತ್ರಕರ್ತರಲ್ಲಿ ವ್ಯಾಕರಣ ಬಳಕೆ ಹಾಗೂ ಶಾಲಾ ಮಕ್ಕಳಲ್ಲಿ ಬರವಣಿಗೆ ಬಗ್ಗೆ ಜಾಗೃತಿ ಶಿಬಿರಗಳನ್ನು ನಗರದ ಅನೇಕ ಶಾಲಾ ಕಾಲೇಜುಗಳಲ್ಲಿ ನಡೆಸಲಾಗಿದೆ. ಹಿರಿಯ ಪತ್ರಕರ್ತರನ್ನು ಗುರುತಿಸಲು ಸಂಘ ಶ್ರಮಿಸುವುದೂ ಸೇರಿದಂತೆ ಈ ಎಲ್ಲಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಐವತ್ತಕ್ಕೂ ಹೆಚ್ಚು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದು ಇ.ಎಂ. ಮಂಜುನಾಥ್ ಅವರ ಗುಂಪನ್ನು ಗೆಲ್ಲಿಸುವಂತೆ ಪ್ರತಿಜ್ಞೆ ಮಾಡಿದ್ದಾರೆ ಎಂದರು. ಚುನಾವಣೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಇ.ಎಂ. ಮಂಜುನಾಥ ಅವರು ಮಾತನಾಡುತ್ತಾ, ನೆರೆದಿದ್ದ ಎಲ್ಲಾ ಪತ್ರಕರ್ತರಿಗೂ ತಮ್ಮ ತಂಡವನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರುಗಳಾದ ಕೆ.ಚಂದ್ರಣ್ಣ, ವಾಸುದೇವ್, ಎನ್.ಎಸ್. ಬಾಲಾಜಿ, ಜೆ.ಎಸ್. ವೀರೇಶ್, ಆರ್.ಎಸ್. ತಿಪ್ಪೇಸ್ವಾಮಿ, ಬಿ.ಎಸ್. ಮುದ್ದಯ್ಯ, ಕಾರೀಖ್ ನಕಾಶ್, ಬಿ. ರುದ್ರಪ್ಪ, ಎನ್.ಕೃಷ್ಣೋಜಿರಾವ್, ಎ.ಡಿ. ಪ್ರಕಾಶ್, ಇಂದೂಧರ ನಿಶಾನಿಮಠ, ಸಿ.ಹರೀಶ್, ಸಿ.ಸತೀಶ್, ಮುದ್ದಯ್ಯ, ಅನಿಲ್ ಕುಮಾರ್, ಹಾಲಿವಾಣ ಹನುಮಂತಪ್ಪ, ಶ್ರೀಕುಮಾರ ಆನೆಕೊಂಡ, ನಾಗರಾಜ್, ಬಸವರಾಜ್ ಮಟ್ಟಿ, ಎಸ್.ಎಂ. ಮಂಜುನಾಳ್ ಜಗದೀಶ್ ಇತರರು ಉಪಸ್ಥಿತರಿದ್ದರು.
ಮಾಗನೂರು ಮಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್.ಎಂ.ಪಿ. ಕುಮಾರ್ ಸ್ವಾಗತಿಸಿದರು. ಹೆಚ್.ಸಿ. ಮೃತ್ಯುಂಜಯಪಾಟೀಲ್ ನಿರೂಪಿಸಿದರು. ಚಿದಾನಂದ ಎಂ. ಕಂಚಿಕೆರೆ ವಂದಿಸಿದರು.
ತಿಳಿಯದೆ ಹೋಗಿದ್ದೆ, ತಿಳಿದು ಬಂದಿರುವೆ
ಬೆಳಿಗ್ಗೆ ಪತ್ರಕರ್ತರ ಸಂಘದ ಚುನಾವಣೆಯ ಮತ್ತೊಂದು ತಂಡ ಕರೆದಿದ್ದರು. ವಿಷಯ ಏನೆಂದು ಆಗ ತಿಳಿಯದೆ ಡಿ.ವಿ. ಗುಂಡಪ್ಪನವರ ಫೋಟೋಕ್ಕೆ ಹಾರ ಹಾಕಬೇಕೆಂದು ಹೋಗಿದ್ದೆ. ಅಲ್ಲಿಯೂ ಇದೇ ಪ್ರಚಾರ ಸಭೆ ಏರ್ಪಟ್ಟಿತ್ತು. ಆದರೆ, ಸಂಜೆ ಇಲ್ಲಿನ ಸಭೆ ಏನೆಂಬುದು ತಿಳಿದು ಬಂದಿರುವೆ. ಇ.ಎಂ. ಮಂಜುನಾಥ್ ಅವರ ತಂಡದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದೇನೆ. ನನ್ನದು ಮಹಾಭಾರತದ ವಿದುರನ ಸ್ಥಿತಿಯಾಗಿದೆ. ಅರ್ಹರು, ಸಮರ್ಥರು ಗೆಲ್ಲಲೇಬೇಕೆಂಬುದು ಧರ್ಮದ ಸಾರವಾಗಿದೆ ಎಂದು ಹೆಚ್.ಬಿ. ಮಂಜುನಾಥ್ ವಿಶ್ಲೇಷಿಸಿದ್ದು ವಿಶೇಷವಾಗಿತ್ತು.