ಕೆಯುಡಬ್ಲ್ಯೂಜೆ ಚುನಾವಣೆ: ಹನ್ನೆರಡು ಜಿಲ್ಲೆಗಳಿಗೆ ಅವಿರೋಧ ಆಯ್ಕೆ ದಾಖಲೆ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) 2022-2025 ನೇ ಸಾಲಿನ ಚುನಾವಣೆಯಲ್ಲಿ ಹನ್ನೆರಡು ಜಿಲ್ಲೆಗಳಿಗೆ ಪೂರ್ಣ ಅವಿರೋಧ ಆಯ್ಕೆಯಾಗಿರುವುದು ಹೊಸ ದಾಖಲೆ ಸೃಷ್ಟಿಸಿದೆ.
ಅಧ್ಯಕ್ಷ ಶಿವಾನಂದ ತಗಡೂರು ಅವರ ತವರು ಜಿಲ್ಲೆ ಹಾಸನ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಬಾಗಲಕೋಟೆ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲಾ ಘಟಕಗಳಿಗೆ ಅವಿರೋಧ ಆಯ್ಕೆಯಾಗಿದೆ.
ಇನ್ನುಳಿದ 18 ಜಿಲ್ಲೆಗಳ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ
ಚುನಾವಣೆ ನಡೆಯಲಿದೆ.
ರಾಜ್ಯ ಘಟಕ:
ರಾಜ್ಯ ಘಟಕದ 9 ಪದಾಧಿಕಾರಿಗಳ ಹುದ್ದೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿ.ಸಿ.ಲೋಕೇಶ್, ಕಾರ್ಯದರ್ಶಿ ಸ್ಥಾನಗಳಿಗೆ ಮತ್ತಿಕೆರೆ ಜಯರಾಂ, ನಿಂಗಪ್ಪ ಚಾವಡಿ, ಸೋಮಶೇಖರ ಕೆರಗೋಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಮೂರು ಹುದ್ದೆಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದ್ದು, ನಾಲ್ವರು ಸ್ಪರ್ಧಾ ಕಣದಲ್ಲಿದ್ದಾರೆ.
27 ಕ್ಕೆ ಚುನಾವಣೆ:
ದಿನಾಂಕ 27-02-2022 ರಂದು ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆ ತನಕ ಚುನಾವಣೆ ನಡೆಯಲಿದೆ.
ಬೆಂಗಳೂರು ಸೇರಿದಂತೆ
ಮೂವತ್ತು ಜಿಲ್ಲೆಯಲ್ಲಿ
7 ಸಾವಿರಕ್ಕೂ ಹೆಚ್ಚು ಅರ್ಹ ಪತ್ರಕರ್ತ ಮತದಾರರು ಮತ ಚಲಾವಣೆ ಮಾಡಲಿದ್ದಾರೆ.
ಮತ ಎಣಿಕೆ:
ಚುನಾವಣೆ ಮುಗಿಯುತ್ತಿದ್ದಂತೆ ಅಂದೇ ಮತ ಎಣಿಕೆ ಆಯಾ ಜಿಲ್ಲಾ ಘಟಕಗಳಲ್ಲಿ ನಡೆಯಲಿದ್ದು, ಫಲಿತಾಂಶ ಪ್ರಕಟ ಮಾಡಲಾಗುವುದು.
ಚುನಾವಣಾಧಿಕಾರಿಗಳು:
ಕೆಯುಡಬ್ಲ್ಯೂಜೆ ಚುನಾವಣೆಯ ರಾಜ್ಯ ಮುಖ್ಯ ಚುನಾವಣಾಧಿಕಾರಿಯಾಗಿ ಸು.ತ.ರಾಮೇಗೌಡ, ರಾಜ್ಯ ಸಹಾಯಕ ಚುನಾವಣಾಧಿಕಾರಿಯಾಗಿ ಎನ್.ರವಿಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿ ಅವರು ಚುನಾವಣೆ ನಡೆಸುತ್ತಿದ್ದಾರೆ.
ನೀತಿಸಂಹಿತೆ:
ಚುನಾವಣೆ ಘೋಷಣೆ ಮಾಡಿದ 7.2.2022 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, 28.2.2022ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.