ಕಾಂಗ್ರೆಸ್ 85ನೇ ಮಹಾಧಿವೇಶನದ ಉಪ ಸಮಿತಿಗಳಲ್ಲಿ ಮೋಯ್ಲಿ, ಸಿದ್ಧರಾಮಯ್ಯ

ಮೋಯ್ಲಿ, ಸಿದ್ಧರಾಮಯ್ಯ
ನವದೆಹಲಿ: ಇದೇ ಫೆಬ್ರವರಿ 24 ರಿಂದ 26ರವರೆಗೆ ಛತ್ತೀಸಗಢದ ರಾಯಪುರದಲ್ಲಿ ನಡೆಸಲು ಉದ್ದೇಶಿಸಿರುವ ಕಾಂಗ್ರೆಸ್ ಪಕ್ಷದ 85ನೇ ಮಹಾಧಿವೇಶನಕ್ಕಾಗಿ ಶನಿವಾರ ಕರಡು ಸಮಿತಿ ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ.
ರಾಜಕೀಯ ವ್ಯವಹಾರಗಳ ಉಪ ಸಮಿತಿಗೆ ವೀರಪ್ಪ ಮೊಯ್ಲಿ ಅವರು ಮುಖ್ಯಸ್ಥರಾಗಿದ್ದಾರೆ. ಪಿ.ಚಿದಂಬರಂ ಅವರು ಮುಖ್ಯಸ್ಥರಾಗಿರುವ ಆರ್ಥಿಕ ವ್ಯವಹಾರಗಳ ಉಪ ಸಮಿತಿಯಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸದಸ್ಯರಾಗಿದ್ದಾರೆ.
ಯುವ, ಶಿಕ್ಷಣ ಮತ್ತು ಉದ್ಯೋಗ ಸಮಿತಿಗೆ ಅಮರಿಂದರ್ ಸಿಂಗ್ ರಾಜಾ ಬ್ರಾರ್ ಅವರು ಮುಖ್ಯಸ್ಥರಾಗಿದ್ದು, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಸದಸ್ಯರಾಗಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರನ್ನು ಕರಡು ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪಿ.ಚಿದಂಬರಂ, ಭೂಪಿಂದರ್ ಸಿಂಗ್ ಹೂಡಾ, ಎಂ.ವೀರಪ್ಪ ಮೊಯ್ಲಿ, ಅಶೋಕ್ ಚೌಹಾಣ್, ಶಶಿ ತರೂರ್, ಪೃಥ್ವಿರಾಜ್ ಚೌಹಾಣ್ ಮತ್ತು ಮುಕುಲ್ ವಾಸ್ನಿಕ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.
ಅಂತರರಾಷ್ಟ್ರೀಯ ವ್ಯವಹಾರಗಳ ಉಪ ಸಮಿತಿಗೆ ಸಲ್ಮಾನ್ ಖುರ್ಷಿದ್, ರೈತರು ಹಾಗೂ ಕೃಷಿ ಸಮಿತಿಗೆ ಭೂಪಿಂದರ್ ಸಿಂಗ್ ಹೂಡಾ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿಗೆ ಮುಕುಲ್ ವಾಸ್ನಿಕ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.