ಬೆಳೆವಿಮೆ ತಿರಸ್ಕಂತ ಪ್ರಸ್ತಾವನೆಗಳಿಗೆ ರೈತರಿಂದ ಆಕ್ಷೇಪಣೆ ಆಹ್ವಾನ

ದಾವಣಗೆರೆ : ಬೆಳೆ ವಿಮೆ ಯೋಜನೆಯಡಿ 2021-22ರ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಿಗೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಿಂದ ತಿರಸ್ಕಂತಗೊಂಡ ಪ್ರಸ್ತಾವನೆಗಳಿಗೆ ರೈತರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ವಿಮಾ ಪರಿಹಾರ ಪಡೆಯಲು ಅರ್ಹರಿದ್ದು ಬೆಳೆಯ ಸಮೀಕ್ಷೆ ವಿವರದೊಂದಿಗೆ ಬೆಳೆ ಹೋಲಿಕೆ ಮಾಡಿದ ನಂತರ ತಾಳೆಯಾಗದ ಕೆಲ ಪ್ರಸ್ತಾವನೆಗಳನ್ನು ಸಂಬಂಧಿಸಿದ ವಿಮಾ ಕಂಪನಿಯವರು ತಿರಸ್ಕರಿಸಿ ವಿಮಾ ಮೊತ್ತ ಜಮೆ ಮಾಡಿರುವುದಿಲ್ಲ. ಈ ರೀತಿ ಬೆಳೆ ಸಮೀಕ್ಷೆ ವಿವರಗಳೊಂದಿಗೆ ಹೊಂದಾಣಿಕೆಯಾಗದೇ ತಿರಸ್ಕಂತಗೊಂಡ ಪ್ರಸ್ತಾವನೆಗಳನ್ನು ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ ಪ್ರದರ್ಶಿಸಲಾಗಿರುತ್ತದೆ.
ರೈತರು ಆಕ್ಷೇಪಣೆಯೊಂದಿಗೆ ವಿಮಾ ಕಂತು ಪಾವತಿಸಿದ ರಸೀದಿ, 2021-22ರ ಪಹಣಿಯಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರಬೇಕು, ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಸೀದಿ, ವಿಮೆಗೆ ನೋಂದಾಯಿತ ಬೆಳೆ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಲ್ಲಿ ರಸೀದಿ ಲಗತ್ತಿಸಿ ಏಪ್ರಿಲ್ 15ರ ಒಳಗೆ ಅರ್ಜಿ ಸಲ್ಲಿಸಬೇಕು. ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.