ಪೊಲೀಸ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಪನೋರಮ- 2023

ದಾವಣಗೆರೆ: ಪೊಲೀಸ್ ಪಬ್ಲಿಕ್ ಶಾಲೆಯು ಪ್ರಾರಂಭವಾಗಿ ಒಂದು ವರ್ಷ ಕಳೆಯುವುದರಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸನ್ನು ಗಳಿಸುತ್ತಿದೆ.ಸುಂದರ ಪರಿಸರ, ಸುಸಜ್ಜಿತ ಕಟ್ಟಡ, ಉತ್ತಮವಾದ ಬೋಧಕ ವರ್ಗವನ್ನು ಒಳಗೊಂಡು ಕಡಿಮೆ ಶುಲ್ಕದಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆ.ಇಲ್ಲಿ ಪಾಠದೊಂದಿಗೆ ಆಟ,ಕಲೆ, ಸಂಗೀತ ಮತ್ತು ಕರಾಟೆಯನ್ನು ಕಲಿಸುವುದರ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಟಿಬದ್ಧವಾಗಿದೆ.ಇದಕ್ಕೆ ಪೊಲೀಸ್ ಇಲಾಖೆಯ ಮತ್ತು ಸರ್ಕಾರದ ಸಂಪೂರ್ಣ ಸಹಕಾರವಿದೆ ಎಂದು ಪೂರ್ವ ವಲಯ ಐಜಿಪಿ ಡಾ ಕೆ.ತ್ಯಾಗರಾಜನ್ ಹೇಳಿದರು.
ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದ ಪೊಲೀಸ್ ಪಬ್ಲಿಕ್ ಶಾಲೆಯ “ವಾರ್ಷಿಕೋತ್ಸವ ಪನೋರಮ-2023” ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ರವರು ಪೊಲೀಸ್ ಪಬ್ಲಿಕ್ ಶಾಲೆಯ ಉದಯ, ಗುರಿ ಮತ್ತು ಉದ್ದೇಶಗಳ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳ ಶಿಸ್ತು ಮತ್ತು ಸಂಸ್ಕಾರದ ಬೆಳವಣಿಗೆಗೆ ಶಾಲೆಯೊಂದಿಗೆ ಪೋಷಕರ ಸಹಕಾರ ಅತಿ ಅಗತ್ಯ. ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಈ ಶಾಲಾ ವಾರ್ಷಿಕೋತ್ಸವ ಪೂರಕವಾಗಿದೆ ಎಂದರು. ವೇದಿಕೆಯಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ಹೆಚ್ಚುವರಿ ಅಧೀಕ್ಷಕರಾದ ಆರ್.ಬಿ.ಬಸರಗಿ, ಡಿವೈಎಸ್ಪಿ ಟಿ.ಪಿ.ಕೃಷ್ಣಮೂರ್ತಿ, ಹಾವೇರಿ ಡಿವೈಎಸ್ಪಿ ಪಿ.ಬಿ.ಪ್ರಕಾಶ್, ನಿವೃತ್ತ ಎಸ್ಪಿ ರವಿ ನಾರಾಯಣ ಮತ್ತು ಪ್ರಾಂಶುಪಾಲ ಯತೀಶ್.ಹೆಚ್.ವಿ ಉಪಸ್ಥಿತರಿದ್ದರು.
ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸೃಷ್ಟಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.ಶ್ರೀನಿಧಿ-ಪೃಥ್ವಿರಾಜ್ ಸ್ವಾಗತಿಸಿದರು. ಸಮರ್ಥ್- ಕುಶಾಲ್ ವಂದಿಸಿದರು.ಹರ್ಷಿಯ ಮತ್ತು ಗಾನವಿ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ “ಪನೋರಮ -2023” ಪೊಲೀಸ್ ಥೀಮ್ ನೊಂದಿಗೆ ಕಥಾ ನಿರೂಪಣೆ ಮತ್ತು ವಿದ್ಯಾರ್ಥಿಗಳ ನೃತ್ಯವು ದೃಶ್ಯ ವಿಹಂಗಮದೊಂದಿಗೆ ಪ್ರೇಕ್ಷಕರ ಮನಸೂರೆಗೊಂಡು ಮೆಚ್ಚುಗೆಗೆ ಪಾತ್ರವಾಯಿತು.ತನ್ಮೂಲಕ ಪೊಲೀಸ್ ಪಬ್ಲಿಕ್ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯವರ ಶ್ರಮ ಸಾಕಾರಗೊಂಡಿತು.