E-Office: ರಾಜ್ಯದ ಎಲ್ಲಾ ಡಿಸಿ ಗಳು, ಜಿಪಂ ಸಿ ಇ ಓ ಗಳು e – office ತಂತ್ರಾಂಶದಲ್ಲಿ ಸೃಜಿಸಿದ ನಂತರ ಎಲ್ಲಾ ಪ್ರಕ್ರಿಯೆಗೆ ಸರ್ಕಾರ ಆದೇಶ
ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಮತ್ತು ಜಿಪಂ ಸಿಇಓಗಳು ಹಾಗೂ ಎಲ್ಲಾ ಇಲಾಖಾ ಮುಖ್ಯಸ್ಥರುಗಳ ಕಛೇರಿಗಳಲ್ಲಿ ಇನ್ನುಮುಂದೆ e- office ತಂತ್ರಾಂಶದಲ್ಲಿಯೇ ಹೊಸ ಕಡತಗಳನ್ನು ಸೃಜಿಸಿ ನಂತರದ ಪ್ರಕ್ರಿಯೆಗಳನ್ನು ಸಹ ಈ ತಂತ್ರಾಂಶದಲ್ಲಿಯೇ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇತ್ತೀಚೆಗೆ ಜರುಗಿದ ಕಾರ್ಯದರ್ಶಿಗಳ ಸಭೆಯಲ್ಲಿ ಕಡತಗಳ ಚಲನವಲನ ಮತ್ತು ಕಡತಗಳ ನಿರ್ವಹಣಾ ಹಂತಗಳನ್ನು ಕಡಿಮೆ ಮಾಡುವ ಕಾರಣಕ್ಕಾಗಿ ಜಿಲ್ಲಾಧಿಕಾರಿಗಳು, ಇಲಾಖಾ ಮುಖ್ಯಸ್ಥರುಗಳಿಂದ ಸ್ವೀಕರಿಸಲಾಗುವ ಪ್ರಸ್ತಾವನೆಗಳನ್ನು ಕಾರ್ಯದರ್ಶಿಗಳ ಹಂತದಲ್ಲಿಯೇ ನಿರ್ವಹಿಸಬೇಕೆಂದು ಮುಖ್ಯಮಂತ್ರಿಗಳು ನಿರ್ದೇಶಿಸಿದ್ದಾರೆ.
ಡಿಸಿ, ಸಿಇಓ ಹಾಗೂ ಇಲಾಖೆಗಳ ಮುಖ್ಯಸ್ಥರು ಕಳಿಸುವ ಪ್ರಸ್ತಾವನೆಗಳು, ಪತ್ರಗಳು ಹಾಗೂ ವರದಿಗಳನ್ನು ಸಂಬಂಧಪಟ್ಟ ಸರ್ಕಾರದ ಕಾರ್ಯದರ್ಶಿಗೆ e – office ಮೂಲಕವೇ ಚಲನವಲನಗೊಳಿಸುವುದು, ಅಧಿಕಾರಿಯು ಸಂಬಂಧಿಸಿದ ಕಾರ್ಯದರ್ಶಿಗೆ ಪ್ರಸ್ತಾವನೆಗಳನ್ನು ಏಕ ಕಡತ ರೀತಿಯಲ್ಲಿಯೇ ಕಳುಹಿಸಬೇಕು. ಕಾರ್ಯದರ್ಶಿಗಳು ಸಾಧ್ಯವಾದಷ್ಟು ತಮ್ಮ ಮಟ್ಟದಲ್ಲೇ ವಿಷಯವನ್ನು ವಿಲೇಗೊಳಿಸಬೇಕು ಅಥವಾ ಸಂಬಂಧಿಸಿದ ಸಚಿವರಿಗೆ ಆದೇಶಕ್ಕಾಗಿ ಸಲ್ಲಿಸಬೇಕು. ಸಚಿವ ಸಂಪುಟದ ಮುಂದೆ ತರಬೇಕಾಗುವಂತ ವಿಷಯಗಳಿಗೆ ಸಂಬಂಧಿಸಿದ ಕಡತಗಳನ್ನು ಮಾತ್ರ ಕಾರ್ಯದರ್ಶಿಯವರು ಸಂಬಂಧಿಸಿದ ಉಪ ಕಾರ್ಯದರ್ಶಿಗಳಿಗೆ ಕಳುಹಿಸಬಹುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ತಿಳಿಸಿದ್ದಾರೆ.