ಬಿಎಸ್ ಎನ್ ಡಿಪಿಯಿಂದ ದಿ.ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಜನ್ಮ ದಿನಾಚರಣೆ. ನೂರು ಮಂದಿ ವಾಹನ ಚಾಲಕರಿಗೆ ಉಚಿತ ವಿಮೆ ವಿತರಣೆ.
ಬೆಂಗಳೂರು– ಬ್ರಹ್ಮ ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘದ ವತಿಯಿಂದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ರವರ ಜನ್ಮದಿನದ ಪ್ರಯುಕ್ತ ನೂರು ಮಂದಿ ವಾಹನ ಚಾಲಕರಿಗೆ ಉಚಿತ ಜೀವ ವಿಮಾ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ಖ್ಯಾತ ಉದ್ಯಮಿ, ಶ್ರೀ ನಾರಾಯಣಗುರು ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ , ಬಂಗಾರಪ್ಪ ಕೇವಲ ನಮ್ಮ ಜನಾಂಗಕ್ಕೆ ಸೀಮಿತವಲ್ಲ. ಎಲ್ಲ ಜನಾಂಗದವರಿಗೆ ತಮ್ಮ ಅವಧಿಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಜಾರಿ ತಂದಿದ್ದಾರೆ. ವಿಶೇಷವಾಗಿ ದಿವಂಗತ ಬಂಗಾರಪ್ಪ ಅವರ ಜನ್ಮದಿನದ ಸಂದರ್ಭದಲ್ಲಿ ವಾಹನ ಚಾಲಕರಿಗೆ ಉಚಿತ ವಿಮೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಉಡುಪಿಯ ಶಂಕರಪುರದ ಈಶ್ವರಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ನನ್ನ ಬಾಲ್ಯದ ದಿನಗಳಲ್ಲಿ ಬಂಗಾರಪ್ಪ ಅವರ ಕಾರ್ಯಗಳನ್ನು ದೂರದಿಂದ ಗಮನಿಸಿದೆ. ಅವರ ಚುನಾವಣಾ ಪ್ರಚಾರ ಬಿತ್ತಿಪತ್ರಗಳ ಟೋಪಿಗಳನ್ನು ಹಾಕಿಕೊಂಡು ಆಟವಾಡಿದ್ದೇವು. ಈಗ ಅವರ ಜನ್ಮದಿನದಂದು ವಾಹನ ಚಾಲಕರಿಗೆ ವಿಮೆ ವಿತರಿಸುವ ಭಾಗ್ಯ ದೊರೆತಿದೆ. ಇದು ಅತ್ಯಂತ ಖುಷಿ ತಂದಿದೆ ಎಂದರು.
ಇತೀಚಿನ ದಿನಗಳಲ್ಲಿ ಮತಾಂತರ ನಡೆಯುತ್ತಿದೆ. ಹಿಂದೂ ಹೆಣ್ಣು ಮಕ್ಕಳು ಇಂತಹ ಕೃತ್ಯಗಳಿಗೆ ಬಲಿಯಾಗುತ್ತಿರುವುದು ವಿಷಾದೀನಿಯ. ಹಿಂದೂ ಧರ್ಮ ವನ್ನು ಉಳಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ. ಬಿಎಸ್ ಎನ್ ಡಿಪಿ ಸಂಘಟನೆ ನಾರಾಯಣ ಗುರುಗಳ ತತ್ವ, ಸಿದ್ದಾಂತ ಪ್ರಚುರಪಡಿಸಬೇಕು ಎಂದು ಹೇಳಿದರು.
ಆರ್ಯ ಈಡಿಗ ರಾಜ್ಯ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಬಂಗಾರಪ್ಪ ಅವರು ಬಡವರ ಪರವಾಗಿ ಆಶ್ರಯ ಯೋಜನೆಯನ್ನು ಜಾರಿ ತಂದಿದ್ದರಿಂದ ಇಂದು ಲಕ್ಷಾಂತರ ಬಡವರು ಮನೆಗಳನ್ನು ಹೊಂದುವಂತಾಗಿದೆ. ಇದೊಂದು ಉತ್ತಮ ಕಾರ್ಯವಾಗಿದೆ. ಅವರ ಹುಟ್ಟುಹಬ್ಬದ ದಿವಸ ವಾಹನ ಚಾಲಕರಿಗೆ ವಿಮೆ ನೀಡುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು.
ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು ತಮ್ಮ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಜನಮನಗೆದ್ದ ಅಪರೂಪದ ನಾಯಕರು. ಬಡವರು, ದೀನದಲಿತರ ಪರವಾಗಿ ಕೆಲ ಕಾರ್ಯಕ್ರಮಗಳನ್ನು ಜಾರಿತಂದಿದ್ದರು. ಈ ಹಿನ್ನಲೆಯಲ್ಲಿ ಅವರ ನೆನಪಿಗಾಗಿ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ನೋವು ಅನುಭವಿಸಿದ ನೂರು ಮಂದಿ ವಾಹನ ಚಾಲಕರಿಗೆ ಉಚಿತವಾಗಿ ಜೀವವಿಮಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರ ಪ್ರೀಮಿಯಂ ಮೊತ್ತವನ್ನು ನಮ್ಮ ಸಂಘದವತಿಯಿಂದ ಭರಿಸಲಾಗುವುದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಪ್ರಕಾಶ್ ಕೊಟ್ಯಾನ್, ಖಚಾಂಚಿ ಲೋಹಿತ್ ನಾಯಕ, ರವಿದಾಸ್ ಮತ್ತಿತರರು ಹಾಜರಿದ್ದರು.