ದಾವಣಗೆರೆ: ಸತ್ಯ ಶುದ್ಧ ಕಾಯಕ, ಸಮಾನತೆ, ಪ್ರಾಮಾಣಿಕ ಜೀವನವನ್ನು ಕಲಿಸಿಕೊಟ್ಟ ಬಸವಣ್ಣ ಎಲ್ಲ ಕಾಲಕ್ಕೂ ಸಲ್ಲುವ ಆದರ್ಶ ಶರಣ. ಅನುಭವದಿಂದ ರಚಿಸಿದ ಅನುಭಾವದ ವಚನಗಳ ಪರಿಪಾಲನೆಯು ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆತ್ಮಸಾಕ್ಷಿ, ಅಂತಃಪ್ರಜ್ಞೆಯನ್ನು ಜಾಗ್ರತಗೊಳಿಸಿದ ಬಸವಾದಿ ಶರಣರು, ಕೇವಲ ಬೋಧನೆ ಮಾಡಲಿಲ್ಲ, ಅನುಭವಿಸಿದ್ದನ್ನು ಹೇಳಿದ್ದಾರೆ. ಮೌಲ್ಯವನ್ನು ಎತ್ತಿ ಹಿಡಿಯುವ ಶರಣರ ವಚನಗಳು ಸಾಮಾಜಿಕ ಪರಿವರ್ತನೆಯ ಹಾದಿಯನ್ನು ತೋರುತ್ತವೆ ಎಂದು ನುಡಿದರು.
ಹನ್ನೆರಡನೇ ಶತಮಾನದಲ್ಲಿಯೇ ಕಾಯಕ ಪ್ರಜ್ಞೆ, ಸಾಮಾಜಿಕ ಭದ್ರತೆ, ಆರ್ಥಿಕ ಸಮೃದ್ಧಿಯನ್ನು ಚಿಂತನೆಯ ಮೂಲಕ ಕಂಡುಕೊAಡರು. ಅಸಾಧ್ಯವೆಂಬುದನ್ನು ಸಾಧ್ಯವಾಗಿಸಿದರು. ಜಾತಿ, ವರ್ಣ, ವರ್ಗರಹಿತ ಸಮಾಜದ ಮೂಲಕ ಜನರ ಏಳ್ಗೆಯನ್ನು ಕಂಡುಕೊಂಡರು. ಕಾಯಕ, ದಾಸೋಹ ತತ್ವಗಳ ಮೂಲಕ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ, ಸರ್ವ ಸಮಾನತೆಯ ಸಮಾಜ ನಿರ್ಮಾಣಕ್ಕೆ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಡಿಗಲ್ಲು ಹಾಕಿದ ಶ್ರೇಯಸ್ಸು ಬಸವಣ್ಣನಿಗೆ ಸಲ್ಲುತ್ತದೆ ಎಂದರು.
ಧಾರ್ಮಿಕ ಪರಿಕಲ್ಪನೆಯಲ್ಲಿ ಬುದ್ಧನ ನಂತರ ಸಮಾಜದ ಏಳ್ಗೆಗೆ ಶ್ರಮಿಸಿದ್ದು ಬಸವಣ್ಣ. ಬುದ್ಧ, ಬಸವಣ್ಣನ ವಿಚಾರಗಳಲ್ಲಿ, ಯೋಜನೆಗಳ ಅನುಷ್ಠಾನದಲ್ಲಿ ಸಮಾನ ಚಿಂತನೆಗಳು ವ್ಯಕ್ತವಾಗುತ್ತವೆ. ಇವರ ತತ್ವ, ಮೌಲ್ಯಗಳನ್ನೇ ಆಧರಿಸಿ ಡಾ.ಬಾಬಾಸಾಹೇಬ ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಭಾರತದ ಸಂವಿಧಾನವು ಜಗತ್ತಿನ ಶ್ರೇಷ್ಠತೆ ಮನ್ನಣೆ ಪಡೆಯಲು ಸಾಧ್ಯವಾಗಿದೆ. ಆದ್ದರಿಂದಲೇ ಬುದ್ಧ, ಬಸವಣ್ಣನ ನಂತರ ಸೇರಿಕೊಳ್ಳುವ ಮತ್ತೊಂದು ಹೆಸರು ಭೀಮ (ಡಾ.ಬಿ.ಆರ್.ಅಂಬೇಡ್ಕರ್) ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಅಶೋಕಕುಮಾರ ಪಾಳೇದ ಮಾತನಾಡಿ, ಹನ್ನೆರಡನೇ ಶತಮಾನದ ಶ್ರೇಣೀಕೃತ ಸಮಾಜದಲ್ಲಿ ಅಸ್ಪೃಶ್ಯತೆ, ಕರ್ಮ ಸಿದ್ಧಾಂತದ ಆಚರಣೆಯ ಶೋಷಣಾ ವ್ಯವಸ್ಥೆಗೆ ಪರ್ಯಾಯ ಸಮಾಜ ವ್ಯವಸ್ಥೆಯನ್ನು ನಿರ್ಮಿಸಿದ ಬಸವಣ್ಣನ ವಿಚಾರಗಳು ಜಗತ್ತಿನ ಸಾರ್ವಕಾಲಿಕ ಸರ್ವಶ್ರೇಷ್ಠ ಚಿಂತನೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಜಾತಿ, ಲಿಂಗ, ವರ್ಣ ಭೇದವಿಲ್ಲದ ಸಮಾಜ ನಿರ್ಮಿಸಿ, ಎಲ್ಲ ಮನುಷ್ಯರನ್ನೂ ಸಮಾನವಾಗಿ ಕಾಣುವ ಆಶಯ ಬಸವಣ್ಣನವರದಾಗಿತ್ತು. ದೇಹ ದಂಡಿಸಿ ದುಡಿದ ಶ್ರಮಕ್ಕೆ ಮನ್ನಣೆ, ಸತ್ಯ ಮಾರ್ಗದಲ್ಲಿ ನೀತಿಯುತವಾಗಿ ಗಳಿಸಿದ ಆದಾಯ, ಗಳಿಕೆಯ ಭಾಗವನ್ನು ಸಮಾಜಕ್ಕಾಗಿ ವಿನಿಯೋಗಿಸುವ ಯೋಜನೆಗಳನ್ನು ಜಾರಿಗೆ ತಂದಿದ್ದು ಬಸವಣ್ಣ ಮಾತ್ರ. ಕಲ್ಲು, ಮಣ್ಣು, ಗಿಡ, ಮರ ಬಳ್ಳಿ, ಪ್ರಾಣಿ ಪಕ್ಷಿಗಳ ಸ್ಥಾವರ ಚಿತ್ರಗಳಲ್ಲಿ ದೇವರನ್ನು ಕಾಣದೆ ಮನುಷ್ಯರಲ್ಲಿಯೇ ದೇವರನ್ನು ಕಾಣುವ, ದೇಹವನ್ನೇ ದೇಗುಲ ಮಾಡಿಕೊಂಡು, ಇಷ್ಟಲಿಂಗವನ್ನೇ ಸಾಕ್ಷಾತ್ ಪರಮಾತ್ಮನ ಕುರುಹಾಗಿ ಮಾಡಿಕೊಂಡು ಪೂಜಿಸಿದ ಬಸವಾದಿ ಶರಣರು ನುಡಿದಂತೆ ನಡೆದರು, ನಡೆದಂತೆ ಬದುಕಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಇಷ್ಟಲಿಂಗ ಪರಿಕಲ್ಪನೆಯು ದೇವರ ವ್ಯಕ್ತಿಗತ ಉಪಾಸನೆ ಮತ್ತು ಸಾಮಾಜಿಕ ಸಮತೆಯ ಸಮರ್ಥ ಸಾಧನವಾಗಿ ಪರಿಣಮಿಸಿತು. ದೇವರು ಮತ್ತು ಭಕ್ತರ ನಡುವೆ ನೇರವಾದ ಸಂಪರ್ಕವನ್ನು ಕಲ್ಪಿಸಿತು. ಇದರ ಜೊತೆಗೆ ಅನುಷ್ಠಾನಗೊಳಿಸಿದ ಕಾಯಕ ಸಿದ್ಧಾಂತವು ಇಡೀ ಸಮಾಜದ ಎಲ್ಲ ವರ್ಗದ ಜನರನ್ನೂ ಒಂದೇ ವೇದಿಕೆಗೆ ತಂದು ಸಮಾನತೆ ಸಾಧಿಸಲು ಸಾಧ್ಯವಾಯಿತು. ಸಮಾಜದ ತಳಸ್ತರದಲ್ಲಿ ಗುರುತಿಸುತ್ತಿದ್ದ ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ, ಹರಳಯ್ಯ ಅವರೊಂದಿಗೆ ಸ್ವತಃ ಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮಯ್ಯ ಅವರು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚಿಸಲು ಅವಕಾಶ ಮಾಡಿಕೊಟ್ಟ ಅನುಭವ ಮಂಟಪವು ಜಗತ್ತಿನ ಪ್ರಜಾ ಸಂಸತ್ತು ಎನಿಸಿದೆ ಎಂದು ಹೇಳಿದರು.
ಎಂಬಿಎ ವಿಭಾಗದ ಅಧ್ಯಕ್ಷ ಪ್ರೊ.ಜೆ.ಕೆ.ರಾಜು ಮಾತನಾಡಿ, ಬಸವಣ್ಣನವರ ವಚನಗಳನ್ನು ಇನ್ನೊಬ್ಬರ ತಪ್ಪನ್ನು ತಿದ್ದಲು ಬಳಸುತ್ತಿದ್ದೇವೆ. ಅಲ್ಲದೇ ಅವು ಸುಮಧುರ ಸಂಗೀತದಂತೆ ಕೇಳಲು ಉಪಯೋಗಿಸಲಾಗುತ್ತಿದೆ ಹೊರತು ಅವುಗಳಲ್ಲಿರುವ ಸತ್ವಯುತ ಮೌಲ್ಯ, ತತ್ವಗಳನ್ನು ಯಾರೂ ಅರ್ಥ ಮಾಡಿಕೊಳ್ಳದಿರುವುದು ವಿಷಾದನೀಯ. ಬಸವಣ್ಣನವರ ವಚನಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಿದ್ದರೆ ಸಮಾಜದ ಇಂದಿನ ದುಃಸ್ಥಿತಿ ಎದುರಾಗುತ್ತಿರುಲಿಲ್ಲ ಎಂದು ನುಡಿದರು.
ಸುಳ್ಳು, ಮೋಸ, ವಂಚನೆ, ನಿಂದನೆ, ಭ್ರಷ್ಟಾಚಾರ, ಕೊಲೆ ಮಾಡದಂತೆ ಬಸವಣ್ಣ ಹೇಳಿದ್ದರೆ, ಇಂದು ಅವುಗಳೇ ವಿಜೃಂಬಿಸುತ್ತಿವೆ. ಸಮಾಜದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡದಿರುವುದೇ ಇದಕ್ಕೆಲ್ಲ ಕಾರಣ. ಇನ್ನೊಬ್ಬರನ್ನು ತಿದ್ದುವ ಮೊದಲು ತಮ್ಮನ್ನು ತಾವು ತಿದ್ದಿಕೊಂಡರೆ, ಉತ್ತಮ ನಡೆ-ನುಡಿ, ಸಂಸ್ಕಾರಗಳನ್ನು ಅಳವಡಿಸಿಕೊಂಡರೆ ಬಸವಣ್ಣನ ಆಶಯದ ಸರ್ವ ಸಮಾನತೆಯ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಕುಲಸಚಿವೆ ಸರೋಜ ಬಿ.ಬಿ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕ ಡಾ.ಜೆ.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಿದ್ದಪ್ಪ ಕಕ್ಕಳಮೇಲಿ ಕಾರ್ಯಕ್ರಮ ನಿರೂಪಿಸಿದರು.
