Sir MV ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದಿಗೆ ಆಗ್ರಹಿಸಿ ಕರ್ನಾಟಕ ಏಕತಾ ವೇದಿಕೆ ಪ್ರತಿಭಟನೆ

IMG-20211115-WA0139

ದಾವಣಗೆರೆ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಸರ್ ಎಂ.ವಿ. ಪದವಿ ಪೂರ್ವ ಕಾಲೇಜಿನ ಮಾನ್ಯತೆ ರದ್ದು ಮಾಡುವಂತೆ ಆಗ್ರಹಿಸಿ ನಗರದ ಜಯದೇವ ವೃತ್ತದಲ್ಲಿ ಇಂದು ಕರ್ನಾಟಕ ಏಕತಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿ ಮುಖಾಂತರ ಶಿಕ್ಷಣ ಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಈ ಶಿಕ್ಷಣ ಸಂಸ್ಥೆಯು ಹದಡಿ ರಸ್ತೆಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ತನ್ನ ಪದವಿ ಪೂರ್ವ ಕಾಲೇಜನ್ನು ನಡೆಸುತ್ತಿದ್ದು, ಆ ಕಟ್ಟಡವು ಜಿಲ್ಲಾ ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಅಲ್ಲಿನ ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಂದ ಆ ರಸ್ತೆಯ ವಾಹನ ಸಂಚಾರಕ್ಕೆ ಅನೇಕ ಬಾರಿ ಅಡಚಣೆ ಉಂಟಾಗಿ ಸಾಕಷ್ಟು ಬಾರಿ ಅಪಘಾತಗಳಾಗಿರುವ ನಿದರ್ಶನಗಳಿವೆ. ಜೊತೆಗೆ ಈ ಕಾಲೇಜಿಗೆ ಆ ಭಾಗದಲ್ಲಿ ಹೇಗೆ ಶಿಕ್ಷಣ ಇಲಾಖೆಯಿಂದ ಅನುಮತಿ ನೀಡಿದರೆಂಬ ಅನುಮಾನವಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎನ್.ಹೆಚ್. ಹಾಲೇಶ್ ಮಾತನಾಡಿ, ಸರ್ ಎಂವಿ ಕಾಲೇಜಿನಿಂದ ಅನೇಕ ಕಡೆಗೆ ವಸತಿ ನಿಲಯಗಳು ನಡೆಯುತ್ತಿದ್ದು ಆ ಎಲ್ಲಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವ ಅನುಮಾನಗಳಿವೆ. ಇದೇ ನ.13ರಂದು ಜಯನಗರದಿಂದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಹೋಗುವ ಮುಖ್ಯರಸ್ತೆಯಲ್ಲಿ ಈ ಕಾಲೇಜಿನ ಯುವತಿಯರ ವಸತಿ ನಿಲಯವಿದ್ದು, ಅಲ್ಲಿ ನಡೆದ ದೌರ್ಜನ್ಯದಿಂದ ಬೇಸತ್ತು ಯುವತಿಯೊಬ್ಬಳು ಕಟ್ಟಡದ ಮೇಲಿಂದ ಹಾರಿ ಕೆಳಗೆ ಬಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಕೈಕಾಲುಗಳನ್ನು ಮುರಿದುಕೊಂಡು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಆರೋಪಿಸಿದರು.

ಈ ಕೂಡಲೇ ಸರ್ ಎಂ.ವಿ. ಕಾಲೇಜಿನಲ್ಲಿ ನಡೆಯುತ್ತಿರುವ ಅನ್ಯಾಯ , ಅಕ್ರಮ ಹಾಗೂ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದರು.
ಕಾಲೇಜಿನ ಆಡಳಿತ ಮಂಡಳಿಯು ದಾವಣಗೆರೆಯ ಹೊರಭಾಗದಲ್ಲಿರುವ ಇಂಡಸ್ಟ್ರೀಯಲ್ ಏರಿಯಾದ ಪಕ್ಕದಲ್ಲಿರುವ ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಬೃಹತ್‌ಮಟ್ಟದ ದೊಡ್ಡ ಕಟ್ಟಡವನ್ನು ಅಕ್ರಮವಾಗಿ ಕಟ್ಟಿಸಿ ಅಲ್ಲಿ ವಸತಿ ನಿಲಯ ಹಾಗೂ ಪದವಿ ಪೂರ್ವ ಕಾಲೇಜನ್ನು ನಡೆಸುತ್ತಿದ್ದಾರೆ . ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಕಟ್ಟಡವನ್ನು ಕಟ್ಟಲು ಇವರಿಗೆ ಅನುಮತಿ ನೀಡಿದವರ ಮೇಲೆ ಹಾಗೂ ಸರ್ ಎಂ.ವಿ. ಕಾಲೇಜಿನ ಆಡಳಿತ ಮಂಡಳಿಯ ಮೇಲೆ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಆರ್.‌ ದೇವೇಂದ್ರಪ್ಪ, ಬಿ. ಮಲ್ಲಿಕಾರ್ಜುನ, ಬಿ. ಸುರೇಶ್, ಪ್ರಕಾಶ್ ಆವರಗೆರೆ, ನಾಗರಾಜ್, ಕುಮಾರ್‌, ಸುನೀಲ್, ಕೆ.ಬಿ. ಕಿರಣ್, ದರ್ಶನ, ಟಿ. ಮಂಜುನಾಥ, ಕೆ. ತರುಣ್, ಎಂ.ಆರ್. ಲಿಖಿತ್, ಸುನೀಲ್, ರವಿ ಸೇರಿದಂತೆ ಇತರರು ಇದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!