ಯುವಕನ ಕೊಲೆ, ನ್ಯಾಯಕ್ಕಾಗಿ ಕುಟುಂಬಸ್ಥರ ಆಗ್ರಹ, ಪೊಲೀಸರ ಮೊರೆ

ಯುವಕನ ಕೊಲೆ
ದಾವಣಗೆರೆ : ಜಮೀನು ವಿಚಾರದಲ್ಲಿ ಮಾತುಕತೆಗೆ ತೆರಳಿದ್ದ ಜನರ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೇ ಮಾಡಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ದಾವಣಗೆರೆಯ ಗಾಂಧಿನಗರದ ಚೌಡೇಶ್ವರಿ ದೇವಸ್ಥಾನದ ಬಳಿ ನಡೆದಿದ್ದು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೊಲೆಗೀಡಾದ ಯುವಕನ ಕುಟುಂಬದವರು ಗ್ರಾಮಾಂತರ ಠಾಣೆಯ ಪೊಲೀಸರ ಮೊರೆ ಹೋಗಿದ್ದಾರೆ.
ದಾವಣಗೆರೆ ತಾಲೂಕಿನ ಕಿತ್ತೂರು ಗ್ರಾಮದ 28 ವರ್ಷ ಮೈಲಾರಿ ಕೊಲೆಯಾದ ಯುವಕ. ಆತನ ಕುಟುಂಬಸ್ಥರು ಕೊಲೆ ಮಾಡಿದವರನ್ನ ಕೂಡಲೇ ಬಂಧಿಸಿ ಕ್ರಮ ತೆಗೆದುಕೋಳ್ಳಬೇಕು ಎಂದು ಒತ್ತಾಯಿಸಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಮೃತ ದೇಹ ಇಟ್ಟು ಪ್ರತಿಭಟನೆ ನಡೆಸಲು ಯೋಚಿಸಿದ್ದರು. ಆದರೆ, ಪೊಲೀಸರು ಈ ರೀತಿ ಮಾಡಬಾರದು ಎಂದು ತಿಳುವಳಕೆ ಹೇಳಿದ ಕಾರಣ ಪ್ರತಿಭಟನೆಯನ್ನು ಕೈಬಿಟ್ಟ ಕುಟುಂಬಸ್ಥರು ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.
ಘಟನೆ ವಿವರ: ಕಿತ್ತೂರು ಗ್ರಾಮದ ಶ್ರೀಮೈಲಾರ ಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ 6 ಎಕರೆ ಗೋಮಾಳದ ವಿಚಾರವಾಗಿ ಕಳೆದು ಕೆಲವಾರು ವರ್ಷದಿಂದ ಜಗಳ ನಡೆದೇ ಇತ್ತು. ಆರು ಎಕರೆಯಲ್ಲಿ ತಲಾ ಒಂದೂವರೆ ಎಕರೆ ಜಮೀನು ನಮಗೆ ಬೇಕು ಎಂಬುದಾಗಿ ಇತರರು ತಗಾದೆ ತೆಗೆಯುತ್ತಿದ್ದರು. ಇದೇ ವಿಚಾರವಾಗಿ ಆಗಾಗ ಜಗಳ, ಪೊಲೀಸ್ ಠಾಣೆ ಮೆಟ್ಟಿಲೇರುವುದು ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸು ಮುಂದುವರೆದಿತ್ತು.
ಇದೇ ವಿಚಾರದಲ್ಲಿ ದ್ವೇಷ ಸಾಧಿಸುತ್ತಿದ್ದ ಹಂತಕರು ದಾವಣಗೆರೆಯಲ್ಲಿ ಕೆಲಸ ಮಾಡುತ್ತಿದ್ದ ಮೈಲಾರಿಯನ್ನು ಮಾರಕಾಸ್ತ್ರಗಳಿಮದ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ದೂರಿದ್ದಾರೆ.
ಮೃತ ಮೈಲಾರಿ ವಿವಾಹ ತುಂಬಿಗೆರೆ ಗ್ರಾಮದ ಯುವತಿಯೊಂದಿಗೆ ನಿಶ್ಚಯವಾಗಿದ್ದು, ಇನ್ನು 15 ದಿನ, ತಿಂಗಳಲ್ಲಿ ಮದುವೆ ಮಾಡುವುದಕ್ಕೆ ಕುಟುಂಬದವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ನಡುವೆಯೇ ಮದು ಮಗನ ಕೊಲೆಯಾಗಿರುವುದು ಕುಟುಂಬ ಸದಸ್ಯರು, ಗೆಳೆಯರನ್ನು ದಿಗ್ಬ್ರಾಂತಿ ಉಂಟು ಮಾಡಿದೆ.