ವಸತಿ ಇಲಾಖೆಯಲ್ಲಿ ನಡೆಯುವ ಎಲ್ಲಾ ಅಕ್ರಮ ನಿಲ್ಲಿಸಿದ್ದೇನೆ ಎಂದು ಹೇಳಲ್ಲ. ಅಕ್ರಮಕ್ಕೆ ಕಡಿವಾಣ ಹಾಕುತ್ತೆನೆ – ಸಚಿವ ವಿ ಸೋಮಣ್ಣ

IMG-20210821-WA0006

 

ದಾವಣಗೆರೆ: ಎಲ್ಲೋ ಕುಳಿತು ನಮ್ಮ ಸರ್ಕಾರದ ವಿರುದ್ಧ ಅಪಸ್ವರ ಎತ್ತುವ ಸಿದ್ದರಾಮಯ್ಯ ಅವರು ಜಿಂದಾಲ್‌ನ ಪ್ರಕೃತಿ ಚಿಕಿತ್ಸಾಲಯಕ್ಕೆ ಚಿಕಿತ್ಸೆಗೆ ಹೋಗುತ್ತಿದ್ದಾರಂತೆ, ಅಲ್ಲಿಗೆ ಹೋಗಿ ಬಂದ ಬಳಿಕವಾದರೂ ಸರಿಯಾಗಿ ಮಾತನಾಡಲಿ ಎಂದು ವಸತಿ ಸಚಿವ ವಿ. ಸೋಮಣ್ಣ ಕುಟುಕಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಟೇಕಾಫ್ ಆಗಿರುವುದರಲ್ಲಿ ಎರಡು ಮಾತಿಲ್ಲ. ಆದರೆ, ಸಿದ್ದರಾಮಯ್ಯ ಅವರಿಗೆ ಸಿಎಂ ಆಗಿ ಐದು ವರ್ಷಗಳ ಅನುಭವವಿದ್ದರು ನಮ್ಮ ಸರ್ಕಾರದ ಕುರಿತು ಎಲ್ಲೋ ಕುಳಿತು ತೋಚಿದ್ದನ್ನ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅವರ ನೇತೃತ್ವದ ರಾಜ್ಯ ಸರ್ಕಾರ ಕೊರೊನಾ, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಇಂಥ ವೇಳೆಯಲ್ಲಿ ಆರೋಪ ಮಾಡುವುದು ಸರಿಯಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಜಿಂದಾಲ್‌ನ ಪ್ರಕೃತಿ ಚಿಕಿತ್ಸಾಲಯಕ್ಕೆ ಚಿಕಿತ್ಸೆಗೆ ಹೋಗುತ್ತಿರುವ ಬಗ್ಗೆ ಮಾಹಿತಿ ಇದೆ. ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆದು ಬಂದ ನಂತರವಾದರೂ ತಿಳಿದು ಮಾತನಾಡುವಂತಾಗಲಿ ಎಂದು ಟಾಂಗ್ ಕೊಟ್ಟರು.

ಸಿದ್ದರಾಮಯ್ಯ ನನ್ನ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಕೇಳಿದರೂ ನಾನು ಕೊಡುತ್ತೇನೆ. ಅವರು ಚರ್ಚೆ ನಡೆಸುವುದಾದರೆ ನಾನು ಸಿದ್ದನಿದ್ದೇನೆ. ಅವರು ಚರ್ಚೆಗೆ ಬರಲಿ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡುತ್ತೇನೆ ಎಂದರು ಆಹ್ವಾನ ನೀಡಿದರು.

ಮುಖ್ಯಮಂತ್ರಿಯಾದ ಬಳಿಕ ಬಸವರಾಜ್ ಬೊಮ್ಮಾಯಿ ಅವರು ನಡೆಸಿರುವ ಮೊದಲ ಸ ವಸತಿ ಇಲಾಖೆಯದ್ದು. ಪ್ರಧಾನಿ ಮೋದಿ ಆಶಯದಂತೆ ರಾಜ್ಯದಲ್ಲಿನ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ನಿವೇಶನ ರಹಿತರಿಗೆ ನಿವೇಶನ ನೀಡುವ ಕೆಲಸ ಮಾಡಲಾಗುವುದು. ಅವಶ್ಯಕತೆ ಇರುವವರಿಗೆ ನಿವೇಶನ ದೊರಕುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಸತಿ ಇಲಾಖೆಯಲ್ಲಿ ನಡೆಯುವ ಎಲ್ಲಾ ಅಕ್ರಮ ನಿಲ್ಲಿಸಿದ್ದೇನೆ ಎಂದು ಹೇಳಲ್ಲ. ಆದರೆ ಕಡಿವಾಣವಂತೂ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ ಕಣ್ಗಾವಲು ಇಡಲಾಗುತ್ತದೆ. ಅಲ್ಲದೇ, ಪಾರದರ್ಶಕ ಆಡಳಿತ ನೀಡುವ ಮೂಲಕ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಜನಪರ ಕಾರ್ಯಗಳನ್ನು ಮಾಡಿ, ನಮ್ಮ ಸರ್ಕಾರ ಜನರಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿದ್ದಾರೆ. ಎಲ್ಲಾ ವರ್ಗದ ಜನರಿಗೆ ಆದ್ಯತೆ ನೀಡಿದ್ದರು. ಕೊರೊನಾ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಉತ್ತಮ ಆಡಳಿತ ನೀಡಿದ್ದರು. ಬೊಮ್ಮಾಯಿ ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಜ್ಯ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಇದೇ ೨೩ರಿಂದ ಶಾಲೆಗಳನ್ನು ಆರಂಭಿಸಿದೆ ಎಂದು ಮಾಹಿತಿ ನೀಡಿದ ಅವರು, ಜನಪರವಾಗಿರುವ ಕೆಲಸಗಳನ್ನು ನಾವು ಮಾಡುತ್ತೇವೆ. ಉಳಿದದ್ದು ಜನರು ತೀರ್ಮಾನ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಬರುವ ಜನಾದೇಶಕ್ಕೆ ನಾವು ಬದ್ಧರಿದ್ದೇವೆ ಎಂದು ಮುಂದಿನ ಚುನಾವಣೆ ಎದುರಿಸಲು ತಾವು ಸಿದ್ದರಿದ್ದೇವೆ ಎಂಬುದಾಗಿ ಸೋಮಣ್ಣ ಸೂಚನೆ ಕೊಟ್ಟರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!