ದಾವಣಗೆರೆಯ ಚರ್ಚ್ ನಲ್ಲಿ ಗೋಧೂಲಿ ವೀಕ್ಷಿಸಿದ ೨೫ ಸಾವಿರ ಜ‌ನ

25 thousand people watched Godhuli in Davangere church

ದಾವಣಗೆರೆ: ನಗರದ ಸಂತ ಥಾಮಸರ ಚರ್ಚ್ ನಲ್ಲಿ ಯೇಸುಕ್ರಿಸ್ತನ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಚರ್ಚ್‌ಗಳಲ್ಲಿ ಪ್ರಾರ್ಥನೆ, ಕ್ರಿಸ್‌ಮಸ್ ಗೀತೆಗಳ ಗಾಯನ, ಮನೆ ಮನೆಗಳಲ್ಲಿ ಯೇಸುವಿನ ಸ್ಮರಣೆ ಮಾಡಲಾಯಿತು. ಕೇಕ್ ಹಂಚುವ ಮೂಲಕ ಶುಭಾಶಯ ಕೋರಲಾಯಿತು.ಮಧ್ಯರಾತ್ರಿ ಫಾದರ್ ಅಂಥೋನಿ ನಜರೆತ್ ಅವರು ಬಾಲಯೇಸುವನ್ನು ಗೋದಲಿಯಲ್ಲಿ ಪ್ರತಿಷ್ಠಾಪಿಸಿದರು. ಆ ಬಳಿಕ ಬಲಿ ಪೂಜೆ ನಡೆಯಿತು. ನಂತರ ಕೇಕ್ ಹಂಚಿ ಸಂಭ್ರಮಿಸಲಾಯಿತು.

ಸಂತ ಥಾಮಸರ ಚರ್ಚ್‌ನಲ್ಲಿ ಬಲಿಪೂಜೆಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಾವಿರಾರು ಮಂದಿ ಕ್ರಿಶ್ಚಿಯನ್‌ರು ಚರ್ಚ್‌ಗೆ ಬಂದು ಪ್ರಾರ್ಥಿಸಿದರು. ಚರ್ಚ್‌ನ ಪ್ರವೇಶ ದ್ವಾರದಲ್ಲಿರುವ ಮಾತೆ ಮರಿಯಾ ಪ್ರತಿಮೆಯ ಎದುರಿಗೆ ಮೋಂಬತ್ತಿಗಳನ್ನು ಬೆಳಗಿ ಪ್ರಾರ್ಥಿಸಿದರು.ಕ್ರಿಸ್‌ಮಸ್ ಪ್ರಯುಕ್ತ ಸಂತ ಥಾಮಸರ ಚರ್ಚ್‌ ಪಕ್ಕದಲ್ಲಿ ‘ಶಾಂತಿಯ ಅರಸರ ಶಾಶ್ವತ ಸಾಮ್ರಾಜ್ಯ’ ಶೀರ್ಷಿಕೆಯಡಿ ನಿರ್ಮಿಸಿ ರುವ ಗೋದಲಿ ಕಣ್ಮನ ಸೆಳೆಯಿತು. ಒಂದು ಬದಿಯಲ್ಲಿ ಸಾಂತಾಕ್ಲಾಸ್ ಪ್ರಾಣಿಗಳು, ಹಿಮದ ಮನುಷ್ಯ, ಮತ್ತೊಂದು ಬದಿಯಲ್ಲಿ ಕ್ರಿಸ್‌ಮಸ್‌ ಟ್ರೀಗಳು, ನಕ್ಷತ್ರಗಳು ಸೆಳೆದವು. ಯುವಕ–ಯುವತಿಯರು ಸಾಂತಾಕ್ಲಾಸ್‌, ಬಾಲ ಯೇಸುವಿನ ಗೋದಲಿ, ಚರ್ಚ್‌ನ ಎದುರಿಗೆ ನಿಂತು ‘ಸೆಲ್ಫಿ’ ಕ್ಲಿಕ್ಕಿಸಿ ಸಂಭ್ರಮಿಸಿದರು. ಸಾಂತಾಕ್ಲಾಸ್‌ನ ಟೋಪಿ ಹಾಕಿಕೊಂಡು ಖುಷಿಪಟ್ಟರು.

ಚರ್ಚ್ ರಸ್ತೆಯು ಜನರಿಂದ ತುಂಬಿ ಹೋಗಿತ್ತು. ರಸ್ತೆಯುದ್ದಕ್ಕೂ ತಿಂಡಿ ತಿನಿಸುಗಳು, ಕೇಕ್, ಸಾಂತಕ್ಲಾಸ್ ಕ್ಯಾಪ್, ಮೊಂಬತ್ತಿ, ಬಲೂನುಗಳ ವ್ಯಾಪಾರದ ಭರಾಟೆ ಇತ್ತು. ಹಬ್ಬದ ಹಿನ್ನೆಲೆಯಲ್ಲಿ ಮನೆಗಳಲ್ಲಿ ವಿಶೇಷ ಖಾದ್ಯ ತಯಾರಿಸಿ ಸವಿದರು. ಬಗೆ ಬಗೆಯ ಕೇಕ್ ತಯಾರಿಸಿ ಬಂಧುಗಳಿಗೆ ಹಂಚಿದರು.

‘ಬೆಳಿಗ್ಗೆಯಿಂದ ಸಂಜೆಯವರೆಗೂ 25 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿ ಚರ್ಚ್ ಹಾಗೂ ಗೋದಲಿ ವೀಕ್ಷಿಸಿದರು. ಸರ್ವ ಧರ್ಮದವರು ಚರ್ಚ್‌ ಎದುರು ಮೊಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ವಿಶ್ವ ಶಾಂತಿ ಹಾಗೂ ಕೊರೊನಾ ತೊಲಗಿಸುವಂತೆ ಪ್ರಾರ್ಥನೆ ಮಾಡಲಾಯಿತು’ ಎಂದು ಸಂತ ಥಾಮಸ್ ಚರ್ಚ್‌ನ ಫಾದರ್ ಅಂಥೋನಿ ನಜೆರತ್‌ ತಿಳಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!