ಬೀದಿನಾಯಿ, ಹಂದಿಗಳ ಹಾವಳಿ ತಡೆಗಟ್ಟಲಾಗದ ಪಾಲಿಕೆ ಮೇಯರ್ ರಾಜೀನಾಮೆಗೆ ಆಗ್ರಹ

ದಾವಣಗೆರೆ: ಪಾಲಿಕೆ ವ್ಯಾಪ್ತಿಯಲ್ಲಿ ಹಂದಿ, ನಾಯಿಗಳ ಹಾವಳಿ ಮಿತಿ ಮೀರಿದ್ದು, ಇದನ್ನು ಕಂಡು ಕಾಣದಂತಿರುವ ವಿಪಕ್ಷದವರೇನು ಒಳ ಒಪ್ಪಂದ ಮಾಡಿಕೊಂಡಿದ್ದಾರೇನು ಎಂದು ಕರ್ನಾಟಕ ಸೋಷಿಯಲ್ ಸರ್ವಿಸ್, ಇಂಡಿಯನ್ ಹೆಲ್ಸಿಂಗ್ ಹ್ಯಾಂಡ್ ಸಂಘಟನೆಗಳು ಪ್ರಶ್ನಿಸಿವೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಕರ್ನಾಟಕ ಸೋಷಿಯಲ್ ಸರ್ವಿಸ್ ಸಂಘಟನೆಯ ಮಹಮ್ಮದ್ ಹಯಾತ್, ದಾವಣಗೆರ ಮಹಾನಗರ ಪಾಲಿಕೆಯಲ್ಲಿ ವಿರೋಧ ಪಕ್ಷಗಳು ಇವೆಯೊ ಅಥವಾ ಇಲ್ಲವೊ ಗೊತ್ತಿಲ್ಲ. ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಂತೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬಿಜೆಪಿ ಒಳಒಪ್ಪಂದ ಮಾಡಿಕೊಂಡಿವಿಯೇ ಎಂದು ಸಂಶಯ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಹಂದಿ, ನಾಯಿ, ಬಿಡಾಡಿ ದನಗಳ ಉಪಟಳ ಅಧಿಕವಾಗಿದ್ದು, ಈ ಸಂಬಂಧ ಹಲವು ಭಾರಿ ಪಾಲಿಕೆಗೆ ಮನವಿ ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಸಮಸ್ಯೆಯನ್ನು ತಹಬದಿಗೆ ತರಲಾಗದ ಮೇಯರ್ ರಾಜೀನಾಮೆ ನೀಡಬೇಕು ಜತೆಗೆ ಪಾಲಿಕೆ ಆಯುಕ್ತರ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ನಾಯಿ ಹಾಗೂ ಹಂದಿಗಳ ವೈಜ್ಞಾನಿಕ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಬಜೆಟ್ನಲ್ಲಿ 40 ಲಕ್ಷ ಮಿಸಲಿಟ್ಟಿದ್ದು, ಅದರಲ್ಲಿ ಎಷ್ಟು ಖರ್ಚು ಆಗಿದೆ ಎಷ್ಟು ಬಾಕಿ ಇದೆ ಎಂದು ದಾವಣಗೆರೆ ಜನತೆಗೆ ಮಹಾನಗರ ಪಾಲಿಕೆ ಕಮಿಷನರ್ ಹಾಗೂ ಮೇಯರ್ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಆದಿಲ್ ಖಾನ್, ಬಸವರಾಜ್ ಇತರರು ಇದ್ದರು.