ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾಯಕ್ರಮ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ವರಿ ಎನ್ ಹೆಗಡೆ

ದಾವಣಗೆರೆ: ಅಸಮಾನತೆಯನ್ನು ಅಳಿಸಿ, ಸಮಾನತೆಯ ಸಮಾಜ ನಿರ್ಮಾಣ ಮಾಡುವ ಧ್ಯೇಯ ವಾಕ್ಯದೊಂದಿಗೆ ಸಾಗುವ ಮೂಲಕ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆ ಕರೆನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂತರಾಷ್ಟ್ರೀಯ ಮಾನವ ಹಕ್ಕುಗಳ ಘೋಷಣೆ ಒಂದು ಐತಿಹಾಸಿಕ ಮುನ್ನುಡಿಯಾಗಿದ್ದು, ಜಾತಿ , ಧರ್ಮ, ವರ್ಗ, ರಾಷ್ಟ್ರೀಯತೆ ಭೇದವನ್ನು ಅಳಿಸಿ ಮಾನವ ಕುಲದ ಘನತೆಗೆ ಮಾನವ ಹಕ್ಕುಗಳು ಸಹಕಾರಿಯಾಗಿದೆ. ಮಾನವ ಹಕ್ಕುಗಳ ಅಡಿಯಲ್ಲಿ ಹಲವಾರು ಕಾನೂನುಗಳು ಒಳಂಬಡಿಕೆಗಳು ಮತ್ತು ಜಾಗತೀಕ ಘೋಷಣೆಗಳು ಜಾರಿಗೆ ಬಂದಿದ್ದು, ಅವುಗಳ ಸಮರ್ಪಕ ಅನುಷ್ಠಾನ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಪಾದ್.ಎನ್ ಮಾತನಾಡಿ, ಮಾನವ ಹಕ್ಕುಗಳು ಮೂಲ ಭೂತ ಹಕ್ಕುಗಳಾಗಿದ್ದು, ನಮ್ಮ ಸಂವಿಧಾನದಲ್ಲಿ ಅವುಗಳನ್ನು ಸೇರಿಸಲಾಗಿದೆ. ಮಾಣವ ಹಕ್ಕುಗಳು ನೈಸರ್ಗಿಕ ಹಕ್ಕುಗಳಾಗಿದ್ದು, ಹುಟ್ಟಿನೊಂದಿಗೆ ಬರುವ ಹಕ್ಕಕುಗಳಾಗಿವೆ. ಜನಾಂಗೀಯ ಭೇದವನ್ನು ಅಳಿಸಿ ಮಾನವತೆಯ ತಳಹದಿಯ ಮೇಲೆ ಸಮ ಸಮಾಜ ನಿರ್ಮಿಸುವ ಮೂಲಕ ನಾವೆಲ್ಲಾರು ಮಾನವ ಹಕ್ಕುಗಳಿಗೆ ಗೌರವ ನೀಡಬೇಕು. ಎಲ್ಲಾ ಕಾನೂನುಗಳಿಗೂ ಹಾಗೂ ತೀರ್ಪುಗಳಿಗೂ ಮಾನವ ಹಕ್ಕುಗಳು ಪ್ರೇರಣೆಯಾಗಿದ್ದು, ಅವುಗಳ ಉಲ್ಲಂಘನೆ ಆಗದಂತೆ ತಡೆಯುವ ಅನಿವಾರ್ಯತೆ ಸಮಾಜದ ಮೇಲಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್ನಾಯಕ್ ಮಾತನಾಡಿ, ಮಾನವ ಹಕ್ಕುಗಳ ವ್ಯಾಪ್ತಿ ಅತ್ಯಂತ ವ್ಯಾಪಕವಾಗಿದ್ದು, ಶೀಘ್ರ ನ್ಯಾಯಾದಾನ ಮಾಡುವುದು ಸಹ ಮಾನವ ಹಕ್ಕಾಗಿದ್ದು, ಆನಿಟ್ಟಿನಲ್ಲಿ ಲೋಕ ಅದಾಲತ್ಗಳು ಕಾರ್ಯನಿರ್ವಹಿಸುತ್ತಿದೆ ಎಂದರು.
ಹಿರಿಯ ವಕೀಲರಾದ ಎಲ್.ಹೆಚ್. ಅರುಣ್ಕುಮಾರ್ ಮಾತನಾಡಿ, ಕಳೆದ ಏಳು ದಶಕದಿಂದ ಮುಕ್ತ ಮತ್ತು ಪ್ರಜಾಸತ್ತಾತ್ಮಕ ಜಗತ್ತಿನಲ್ಲಿ ಮಾನವ ಹಕ್ಕುಗಳು ಶಕ್ತಿಶಾಲಿಯಾಗಿ ಮಿಡಿಯುತ್ತಾ ಬಂದಿದೆ. ಪ್ರತಿಯೊಬ್ಬ ನಾಗರೀಕರನ್ನು ಶೋಷಣೆ, ಅನ್ಯಾಯ ಮತ್ತು ದಬ್ಬಾಳಿಕೆಗಳಿಂದ ರಕ್ಷಿಸುವ ಪ್ರತಿನಿಧಿಯಾಗಿ ಕಾರ್ಯನಿರ್ವಸುವಲ್ಲಿ ನಿರತವಾಗಿದೆ. ಇಂದಿನ ಸಂದರ್ಭದಲ್ಲಿ ಅಹಾರ, ವಸತಿ, ಉದ್ಯೋಗ ಹಾಗೂ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕುಗಳಾಗಿ ಘೋಷಣೆ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಡಿ.ಪಿ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಕೌಟುಂಬಿಕ ನ್ಯಾಯಾಲದ ನ್ಯಾಯಾಧೀಶರಾದ ದಶರಥ. ಬಿ., ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಲ್.ಹೆಚ್.ಪ್ರದೀಪ್, ಸಹಕಾರ್ಯದರ್ಶಿ ಜಿ.ಕೆ.ಬಸವರಾಜ್, ಕೆ.ಎಸ್.ರೇಖಾ ಸೇರಿದಂತೆ ಸಂಘದ ಪದಾಧಿಕಾರಿಗಳು, ವಕೀಲರು ಪಾಲ್ಗೊಂಡಿದ್ದರು.