ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಜಾತಿ ತಿರುಚಿ ಮಠದಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ – ಎಸ್.ಹೆಚ್. ಸುಭಾಷ್ ಆರೋಪ

ದಾವಣಗೆರೆ: ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಜಾತಿ ತಿರುಚಿ ಮಠದಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘ ಆರೋಪಿಸಿದೆ.
ಸಂಘದ ರಾಜ್ಯಾಧ್ಯಕ್ಷ ಎಸ್.ಹೆಚ್. ಸುಭಾಷ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರಸನ್ನಾನಂದ ಸ್ವಾಮೀಜಿ ಮೂಲತಃ ಬೆಸ್ತ ತಳವಾರ ಸಮುದಾಯಕ್ಕೆ ಸೇರಿದ್ದು, ಮಠಕ್ಕೆ ಸರ್ಕಾರದಿಂದ ಬರುವ ಅನುದಾನ, ಕಾಣಿಕೆ ಸೇರಿದಂತೆ ಎಲ್ಲವನ್ನೂ ತಮ್ಮ ಸ್ವಂತಕ್ಕೆ ಬಳಸಿಕೊಂಡು ಅವ್ಯವಹಾರ ನಡೆಸುತ್ತಿದ್ದಾರೆ.ಕೂಡಲೇ ಅವರು ತಮ್ಮ ಸ್ಥಾನ ತ್ಯಜಿಸದಿದ್ದರೆ ಅವರ ವಿರುದ್ಧ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ವಾಮೀಜಿ ತಮ್ಮ ಜಾತಿ ತಿರುಚಿ, ಮಠದ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡು ಅವ್ಯವಹಾರ ನಡೆಸುತ್ತಿದ್ದಾರೆ. ವಾಲ್ಮೀಕಿ ನಾಯಕ ಸಮಾಜಕ್ಕೆ ಕಂಠಕವಾಗಿರುವ ಪ್ರಸನ್ನಾನಂದ ಸ್ವಾಮೀಜಿ ಜಾತಿ ತಿರುಚಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು. ಅವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ವಾಮೀಜಿ ತಾವು ಹೇಳಿದಂತೆ ಸರಕಾರಗಳು ಕೇಳದಿದ್ದರೆ ಸಮಾಜದ ಸಂಸದರು, ಶಾಸಕರಿಂದ ರಾಜೀನಾಮೆ ಕೊಡಿಸುವುದಾಗಿ ಬ್ಲಾಕ್ಮೇಲ್ ಮಾಡುತ್ತಾರೆ. ಸತ್ಯಾಂಶವೆಂದರೆ ಸಮಾಜದ ಯಾವ ಸಂಸದರು, ಶಾಸಕರು ಈ ಸ್ವಾಮೀಜಿಯ ಮಾತಿಗೆ ಬೆಲೆ ನೀಡುವುದಿಲ್ಲ. ರಾಜೀನಾಮೆ ಬಗ್ಗೆ ಉಸಿರೆತ್ತುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ವಾಲ್ಮೀಕಿಪೀಠದ ಬ್ರಹ್ಮಾನಂದ ಗುರೂಜಿ, ವಿಶ್ವಾರಾಧ್ಯ ನಾಯಕ, ಅಂಜಿ ನಾಯಕ, ಸುರೇಶ್ ತಾತ ಇದ್ದರು.