ದಾವಣಗೆರೆಯ 2 ವೈಧ್ಯಕೀಯ ಕಾಲೇಜುಗಳು ಸರ್ಕಾರದ ಸೂಚನೆ ಪಾಲಿಸುತ್ತಿಲ್ಲ: ಸಹಕಾರ ನೀಡದವರ ವಿರುದ್ಧ ಡಿಸಿ ಹಾಗೂ ಡಿಹೆಚ್ಒ ಸಾಂಕ್ರಾಮಿಕ ರೋಗ ನಿರ್ವಹಣೆ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವರಿಂದ ಸೂಚನೆ

ದಾವಣಗೆರೆಯ 2 ವೈಧ್ಯಕೀಯ ಕಾಲೇಜುಗಳು ಸರ್ಕಾರದ ಸೂಚನೆ ಪಾಲಿಸುತ್ತಿಲ್ಲ:ಖಾಸಗಿ ಮೆಡಿಕಲ್ ಕಾಲೇಜುಗಳು ನಿಗದಿತ ಬೆಡ್ಗಳನ್ನು ಕೊಡಲೇಬೇಕು: ಸಹಕಾರ ನೀಡದವರ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಡಿಹೆಚ್ಒ ಸಾಂಕ್ರಾಮಿಕ ರೋಗ ನಿರ್ವಹಣೆ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವರಿಂದ ಸೂಚನೆ
ದಾವಣಗೆರೆ : ರಾಜ್ಯದಲ್ಲಿ ಸದ್ಯ ಕೋವಿಡ್ ತುರ್ತು ಸ್ಥಿತಿ ಇದೆ. ಎಲ್ಲ ಖಾಸಗಿ ಮೆಡಿಕಲ್ ಕಾಲೇಜುಗಳು ಶೇ. 75 ಹಾಗೂ ಖಾಸಗಿ ಆಸ್ಪತ್ರೆಗಳು ಶೇ. 50 ರಷ್ಟು ಬೆಡ್ಗಳನ್ನು ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸು ಮಾಡಲಾದ ರೋಗಿಗಳಿಗಾಗಿ ಒದಗಿಸಲೇಬೇಕು. ಇದರಲ್ಲಿ ಯಾವುದೇ ರಿಯಾಯಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಜನರ ಪ್ರಾಣ ರಕ್ಷಿಸುವುದು ನನ್ನ ಕರ್ತವ್ಯ. ಆದರೆ ದಾವಣಗೆರೆಯಲ್ಲಿ 850 ಬೆಡ್ ಸಾಮಥ್ರ್ಯ ಹೊಂದಿರುವ ಎಸ್ಎಸ್ ಮೆಡಿಕಲ್ ಕಾಲೇಜಿನಲ್ಲಿ ಕೇವಲ 54 ಹಾಗೂ 850 ಬೆಡ್ ಸಾಮಥ್ರ್ಯದ ಬಾಪೂಜಿ ಜೆಜೆಎಂಸಿ ಕಾಲೇಜಿನಲ್ಲಿ ಕೇವಲ37 ಬೆಡ್ಗಳನ್ನು ಮಾತ್ರ ನೀಡಿದ್ದು, ಸರ್ಕಾರದ ಸೂಚನೆ ಪಾಲಿಸುತ್ತಿಲ್ಲ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ ಅವರು ಆರೋಗ್ಯಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ರಾಜ್ಯ ಮಟ್ಟದಲ್ಲಿ ಸರ್ಕಾರ ಕೈಗೊಂಡ ನಿರ್ಧಾರವನ್ನು ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜುಗಳು ಪಾಲಿಸದಿರುವುದು ನಿಜಕ್ಕೂಅಚ್ಚರಿ ಹಾಗೂ ನೋವು ತಂದಿದೆ. ಸರ್ಕಾರ ಖಾಸಗಿ ಆಡಳಿತ ಮಂಡಳಿಯೊಂದಿಗೆ ಘರ್ಷಣೆಯನ್ನು ಬಯಸುವುದಿಲ್ಲ. ರಾಜ್ಯದಲ್ಲಿ ಎಲ್ಲ ಖಾಸಗಿ ಮೆಡಿಕಲ್ ಕಾಲೇಜಗಳೂ ಕೂಡ ನಿಗದಿತ ಪ್ರಮಾಣದಲ್ಲಿ ಬೆಡ್ ನೀಡುವ ಮೂಲಕ ಸ್ಪಂದಿಸಿದ್ದಾರೆ. ಎಲ್ಲಿಯೂ ಕೂಡ ಈ ರೀತಿಯ ಅಸಹಾಕಾರ ಕಂಡುಬಂದಿಲ್ಲ. ರಾಜ್ಯದ ಜನರ ಆರೋಗ್ಯ ಹಾಗೂ ಪ್ರಾಣ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಸರ್ಕಾರಿಆಸ್ಪತ್ರೆಗಳಿಂದ ಶಿಫಾರಸ್ಸು ಮಾಡುವ ರೋಗಿಗಳಿಗೆ ನಿಗದಿತ ಸಂಖ್ಯೆಯಷ್ಟು ಬೆಡ್ ನೀಡಲೇಬೇಕು. ನಾವೇನು ಉಚಿತವಾಗಿ ಚಿಕಿತ್ಸೆ ನೀಡಿ ಎಂದು ಹೇಳುತ್ತಿಲ್ಲ. ಪ್ರತಿ ರೋಗಿಗೂ ಸರ್ಕಾರದಿಂದ ಹಣ ಪಾವತಿಸುತ್ತೇವೆ. ಇದು ಹೆಲ್ತ್ ಎಮರ್ಜೆನ್ಸಿ ಕಾಲವಾಗಿದ್ದು ಅತ್ಯಂತ ತುರ್ತು ನಾನ್ ಕೋವಿಡ್ ರೋಗಿಗಳಿಗೆ ಮಾತ್ರ ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳು ಚಿಕಿತ್ಸೆ ನೀಡಬೇಕು. ಇತರೆ ಚಿಕಿತ್ಸೆಗಳನ್ನು2-3 ತಿಂಗಳು ಮುಂದೂಡಬೇಕು. ಕೋವಿಡ್ ರೋಗಿಗಳಿಗೇ ಬೆಡ್ಗಳನ್ನು ಒದಗಿಸಬೇಕು. ಖಾಸಗಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳು ನಿಗದಿಯಂತೆ ಕ್ರಮವಾಗಿ ಶೇ. 75 ಹಾಗೂ ಶೇ. 50 ರಷ್ಟು ಬೆಡ್ಗಳನ್ನು ನೀಡಲೇಬೇಕು ಹಾಗೂ ಬೆಡ್ ಲಭ್ಯತೆಯ ಸ್ಥಿತಿಗತಿಯ ಬೋರ್ಡ್ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಕಾನೂನು ಪ್ರಕಾರ ನಾವು ತೆಗೆದುಕೊಳ್ಳಬೇಕಾಗುತ್ತದೆ. ನಿಗದಿಯಂತೆ ಬೆಡ್ಗಳನ್ನು ಪಡೆಯದಿದ್ದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಸಹಕಾರ ನೀಡದವರ ವಿರುದ್ಧ ಜಿಲ್ಲಾಧಿಕಾರಿ ಹಾಗೂ ಡಿಹೆಚ್ಒ ಅವರು ಸಾಂಕ್ರಾಮಿಕರೋಗ ನಿರ್ವಹಣೆ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವರು ಸೂಚನೆ ನೀಡಿದರು.
2150 ವೈದ್ಯರ ನೇಮಕ : ಜಿಲ್ಲೆಯಲ್ಲಿನ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್, ವೆಂಟಿಲೇಟರ್ಗಳನ್ನು ಒದಗಿಸಲಾಗಿದ್ದು, ಕೆಲವೆಡೆ ತಜ್ಞ ವೈದ್ಯರು ಹಾಗೂ ನುರಿತ ಸಿಬ್ಬಂದಿ ಕೊರತೆ ಕಾರಣ ಬಳಕೆಗೆ ತೊಂದರೆಯಾಗಿದೆ ಎಂಬುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ರಾಜ್ಯದಲ್ಲಿ 2150 ವೈದ್ಯರು, 780 ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಅವರಿಗೆ ಸ್ಥಳ ನಿಯುಕ್ತಿ ಆದೇಶ ಆಗಲಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನೀಗಲಿದೆ.
ಆಕ್ಸಿಜನ್ ಬೆಡ್, ವೆಂಟಿಲೇಟರ್ ಬಳಕೆಗೆ ಸಂಬಂಧಿಸಿದಂತೆ ಲಭ್ಯವಿರುವ ಸಿಬ್ಬಂದಿಗಳಿಗೆ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಸೂಕ್ತ ತರಬೇತಿಯನ್ನು ಕೊಡಿಸಬೇಕು, ಜಿಲ್ಲೆಯಲ್ಲಿ ಕೂಡಲೆ ಈ ಕಾರ್ಯ ಆಗಬೇಕು ಎಂದು ಸಚಿವರು ತಾಕೀತು ಮಾಡಿದರು.