ಮೃತದೇಹ ಹಸ್ತಾಂತರಿಸಲು ನಿರಾಕರಿಸಿದರೆ ಆಸ್ಪತ್ರೆ ನೋಂದಣಿ ರದ್ದು: ಕೆಪಿಎಂಇ ಕಾಯ್ದೆಯಡಿ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ

ಬೆಂಗಳೂರು: ಆಸ್ಪತ್ರೆ ಬಿಲ್ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಕೊರೋನಾದಿಂದ ಮೃತಪಟ್ಟಂತಹ ಶವ ಹಸ್ತಾಂತರಿಸಲು ನಿರಾಕರಿಸಿದಲ್ಲಿ ಅಂತಹ ಆಸ್ಪತ್ರೆಯ ನೊಂದಣಿ ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ವಿಷಯದಲ್ಲಿ ಕೆಪಿಎಂಇ ಕಾಯ್ದೆಯನ್ನು ಜಾರಿಗೊಳಿಸಲು ಸರಕಾರ ಆದೇಶ ಹೊರಡಿಸಿದ್ದು, ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅಲ್ಲದೆ ಈ ರೀತಿ ಪ್ರಕರಣಗಳ ಕುರಿತು ವಾರಕ್ಕೊಮ್ಮೆ ವರದಿ ನೀಡುವಂತೆಯೂ ಆದೇಶಿಸಲಾಗಿದೆ.
ರಾಜ್ಯದಲ್ಲಿ ಅನೇಕ ಕಡೆ ಬಿಲ್ ಪಾವತಿಸಿದ ನಂತರವೇ ಶವ ಹಸ್ತಾಂತರಿಸುವುದಾಗಿ ಆಸ್ಪತ್ರೆಗಳು ಸತಾಯಿಸುತ್ತಿರುವ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬಿಲ್ ಪಾವತಿಸಲು ಒತ್ತಾಯುಸುವಂತಿಲ್ಲ ಅಥವಾ ಒತ್ತಡ ಹೇರುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇಂತಹ ಪ್ರಕರಣ ವರದಿಯಾದಲ್ಲಿ ತಕ್ಷಣ ಆಸ್ಪತ್ರೆಯ ನೊಂದಣಿಯನ್ನು ರದ್ದುಪಡಿಸಬೇಕು ಎಂದು ಆರೋಗ್ಯ ಇಲಾಖೆಯ ಅಪರ ಕಾರ್ಯದರ್ಶಿ ಜಾವೇದ್ ಅಕ್ತರ್ ಆದೇಶಿಸಿದ್ದಾರೆ.