ನ್ಯಾಯಾಧೀಶರ ಹುದ್ದೆಯಿಂದ ವಜಾ ಮಾಡದಿದ್ದರೆ ಕರ್ನಾಟಕ ಬಂದ್.

ದಾವಣಗೆರೆ: ಗಣರಾಜ್ಯೋತ್ಸವ ದಿನದಂದು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರಕ್ಕೆ ಅಪಮಾನ ಮಾಡಿದ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಪಾಟೀಲರನ್ನು ಸಂವಿಧಾನಿಕ ಹುದ್ದೆಯಿಂದ ವಜಾಗೊಳಿಸ ಬೇಕು ಇಲ್ಲವಾದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು ಎಂದು ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವೇ 75ನೇ ವರ್ಷದ ಗಣರಾಜ್ಯೋತ್ಸವವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ರಾಯಚೂರಿನ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರವನ್ನು ಇಡಲಾಗಿತ್ತು . ಈ ಸಂದರ್ಭದಲ್ಲಿ ಧ್ವಜಾರೋಹಣ ನೇರವೇರಿಸಲು ಆಗಮಿಸಿದ್ದ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ಬಾಬಾಸಾಹೇಬ , ಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರವನ್ನು ತೆಗೆದರೆ ಮಾತ್ರ ಧ್ವಜಾರೋಹಣ ಮಾಡುತ್ತೆನೆಂದು ಪಟ್ಟು ಹಿಡಿದು . ಭಾವಚಿತ್ರವನ್ನು ತೆಗೆಸಿ ಧ್ವಜಾರೋಹಣ ಮಾಡಿದ್ದಾರೆ ಈ ಘಟನೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ ಎಂದರು.
ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ ಸಂವಿಧಾನಿಕ ಹುದ್ದೆಯಂತಹ ಪ್ರಮುಖ ಜಾಗದಲ್ಲಿರಲು ಯೋಗ್ಯತೆ ಮತ್ತು ನೈತಿಕತೆ ಇಲ್ಲದಿರುವ ಕಾರಣ ಈ ಕೂಡಲೇ ಉಚ್ಛನ್ಯಾಯಾಲಯವು ಇವರ ಹುದ್ದೆಯಿಂದ ಪದಚ್ಯುತಗೊಳಿಸಿ ಸ್ವಯಂ ಪ್ರೇರಿತವಾಗಿ ಎಸ್.ಸಿ. ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸ ಬೇಕು ಎಂದು ಒತ್ತಾಯಿಸಿದರು.
ಅಂಬೇಡ್ಕರ್ ರಚಿಸಿದ ಸಂವಿಧಾನದ ವ್ಯವಸ್ಥೆಯಲ್ಲಿಯೇ ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ವ್ಯಕ್ತಿಗೆ ಅಪಮಾನ ಮಾಡಿರುವುದು ಖಂಡನೀಯ. ತಪ್ಪು ಮಾಡಿ ಇದೀಗ ಮಾಧ್ಯಮಗಳಲ್ಲಿ ಸಮರ್ಥನೆಯ ಹೇಳಿಕೆ ನೀಡುತ್ತಿದ್ದಾರೆಂದು ಆರೋಪಿಸಿದರು.
ಈ ಕೂಡಲೇ ನ್ಯಾಯಾಧೀಶರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಡಿಎಸ್ ಎಸ್ ಸಂಘಟನೆ ವತಿಯಿಂದ ಕರ್ನಾಟಕ ಬಂದ್ ಗೆ ಕರೆನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಟಿ.ರವಿಕುಮಾರ್, ರಾಜಶೇಖರ್ ವಂದಾಲಿ, ಎಂ ರವಿ, ರಾಘವೇಂದ್ರ, ಹೆಚ್.ಆನಂದ್, ಮಲ್ಲಿಕಾರ್ಜುನ, ಆರ್. ಪ್ರಭಾಕರ್ ಇದ್ದರು.