2022-23 ರ ಸಾಲಿನ ಕೇಂದ್ರ ಬಜೆಟ್.. ಜನ ವಿರೋಧಿ ಬಜೆಟ್ ಇದು….. ಕೆ.ರಾಘವೇಂದ್ರ ನಾಯರಿ, ಕಾರ್ಮಿಕ ಮುಖಂಡ, ದಾವಣಗೆರೆ

ದಾವಣಗೆರೆ: ದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ.6.6 ರ ಪ್ರಮಾಣದಲ್ಲಿದ್ದರೂ ಉದ್ಯೋಗ ಸೃಷ್ಟಿಸಲು ಯಾವುದೇ ಪರಿಣಾಮಕಾರಿ ಕ್ರಮವನ್ನು ಘೋಷಿಸದಿರುವುದು ನಿರಾಸೆ ತಂದಿದೆ. ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ 60 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಸಾಮರ್ಥವಿದೆ ಎಂದು ವಿತ್ತ ಸಚಿವೆ ಹೇಳಿರುವುದು ಕನ್ನಡಿಯೊಳಗಿನ ಗಂಟಾಗಿದೆ. ಆರ್ಥಿಕ ಅಸಮಾನತೆಯನ್ನು ಸರಿದೂಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಿ ಬಡತನ ತಗ್ಗಿಸಲು ದಿಟ್ಟವಾದ ಕ್ರಮ ಕೈಗೊಳ್ಳಬೇಕಾದ ಅಗತ್ಯವಿತ್ತು.
ಸ್ಟ್ಯಾಂಡರ್ಡ್ ಡಿಡಕ್ಷನ್ ವಿಸ್ತರಣೆ ಮತ್ತು ತೆರಿಗೆ ವಿನಾಯಿತಿ ಮಿತಿಯ ಹೆಚ್ಚಳ ಕಳೆದ ಹಲವಾರು ವರ್ಷಗಳಿಂದ ಆಗಿಯೇ ಇಲ್ಲ.
ಇದು ನೌಕರ ವರ್ಗದ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ.
ದೇಶದ ಸಂಪತ್ತು ವೃದ್ಧಿಸುವ ಆಸ್ತಿಗಳಾದ ಬ್ಯಾಂಕುಗಳು, ವಿಮೆ, ವಿದ್ಯುತ್ ನಿಗಮ ಇತ್ಯಾದಿ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರುವ ಹಾಗೂ ಅವುಗಳಲ್ಲಿನ ಸರಕಾರಿ ಬಂಡವಾಳವನ್ನು ಹಿಂತೆಗೆಯುತ್ತಿರುವ ಕ್ರಮವನ್ನು ಖಂಡಿಸಿ ಶ್ರಮಿಕ ವರ್ಗ ನಿರಂತರವಾಗಿ ಹೋರಾಡುತ್ತಿದೆ. ಇದರ ಬಗ್ಗೆ ಸರಕಾರ ಚಕಾರವೆತ್ತದೇ ದಿವ್ಯಮೌನ ತಾಳಿರುವುದು ಸರಿಯಲ್ಲ. ಇದು ಸರಕಾರದ ಮೇಕ್ ಇನ್ ಇಂಡಿಯಾ ಘೋಷಣೆಯನ್ನೇ ಅಣಕಿಸುವಂತಿದೆ.
ಜನಸಾಮಾನ್ಯರಿಂದ ಹಿಡಿದು ಸಣ್ಣ ಮತ್ತು ಮಧ್ಯಮ ವ್ಯವಹಾರಸ್ಥರು ತೀವ್ರಗತಿಯಲ್ಲಿ ಏರುತ್ತಿರುವ ಹಣದುಬ್ಬರದಿಂದ ಕಂಗಾಲಾಗಿದ್ದಾರೆ. ಈ ಕುರಿತಾಗಿ ಸರಕಾರ ಯಾವುದೇ ಸಕಾರಾತ್ಮಕ ಕ್ರಮ ಘೋಷಿಸದಿರುವುದು ಖಂಡನೀಯವಾಗಿದೆ.
ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೇತನ ಹೆಚ್ಚಳ, ಉದ್ಯೋಗ ಭದ್ರತೆ ನೀಡುವ ಉದಾರತೆ ತೋರಿಸದ ಈ ಬಜೆಟ್ ಖಂಡಿತವಾಗಿಯೂ ಜನ ವಿರೋಧಿ ಹಾಗೂ ಕಾರ್ಮಿಕ ವಿರೋಧಿಯಾಗಿದೆ.
ಕೆ.ರಾಘವೇಂದ್ರ ನಾಯರಿ
ಕಾರ್ಮಿಕ ಮುಖಂಡ
ದಾವಣಗೆರೆ
ಮೊ: 9844314543
ಮೈಲ್ ಐಡಿ: krnairycbeu@gmail.com