ಅನ್ನದಾತನನ್ನು ಕಡೆಗಣಿಸಿದ ಬಜೆಟ್: ಛತ್ರಿಗೆ ತೆರಿಗೆ, ವಜ್ರಕ್ಕೆ ಸುಂಕ ಕಡಿತ : ಎಲ್.ಹೆಚ್.ಅರುಣ್ಕುಮಾರ್

ದಾವಣಗೆರೆ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ಎಂದಿನಂತೆ ದೇಶದ ಅನ್ನದಾತನನ್ನು ಕಡೆಗಣಿಸಿರುವಂತೆ ಭಾಸವಾಗಿದೆ ಎಂದು ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್ಕುಮಾರ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಭಾರತ ಹಳ್ಳಿಗಳಿಂದ ಕೂಡಿದ ದೇಶ, ರೈತನೇ ಈ ದೇಶದ ಬೆನ್ನೆಲುಬು ಎಂದು ಪುಂಖಾನುಪುಂಖಾ ಭಾಷಣಗಳು ಬಜೆಟ್ ಮುಂದೆ ಸೊರಗಿವೆ. ರೈತರ ಖಾತೆಗೆ ಪ್ರತಿವರ್ಷ 6ಸಾವಿರ ರೂಪಾಯಿ ನೀಡುವ ಕಿಸಾನ್ ಸಮ್ಮಾನ್ ಮತ್ತೆ ಮುಂದುವರೆದಿರುವುದು ಬಿಟ್ಟರೆ ಬೇರೆ ಏನೂ ಸತ್ವ ಇಲ್ಲ. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿ ಖರೀದಿಸುವ ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ.
ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಆಹಾರ ಭದ್ರತೆ, ರಸಗೊಬ್ಬರ, ಬೆಳೆ ವಿಮೆ, ಪೌಷ್ಠಿಕಾಂಶ ಆಧಾರಿತ ಉತ್ಪನ್ನಗಳ ಮೇಲಿನ ಸಹಾಯಧನ ಹಾಗೂ ಅನುದಾನ ಕಡಿತ ಮಾಡಿರುವುದು ಅಘಾತಕಾರಿ ಸಂಗತಿ. ನರೇಗಾ ಯೋಜನೆ ಅನುಷ್ಟಾನದಲ್ಲಿ ಲೋಪವಿದ್ದಲ್ಲಿ ಸರಿಪಡಿಸುವುದನ್ನು ಬಿಟ್ಟು 25ಸಾವಿರ ಕೋಟಿ ರೂ., ಅನುದಾನ ಕಡಿಮೆ ಮಾಡಲಾಗಿದೆ.
ಕಾರ್ಪೊರೇಟ್ ವಲಯಗಳು ಈ ಬಜೆಟ್ನಲ್ಲಿ ಹಬ್ಬ ಆಚರಿಸಿಕೊಂಡಿವೆ. ಬಡವರು ಬಳಸುವ ಛತ್ರಿ ಮೇಲೆ ತೆರಿಗೆ, ಶ್ರೀಮಂತರು ಬಳಸುವ ವಜ್ರದ ಮೇಲೆ ಸುಂಕ ಕಡಿತ ಮಾಡಲಾಗಿದೆ. ರೂಪಾಯಿ ಹಂಚಿಕೆ ಸಮರ್ಪಕವಾಗಿಲ್ಲ. ದೇಶದ ಶೇ.10ರಷ್ಟು ಶ್ರೀಮಂತರು ಶೇ.80ರಷ್ಟು ಸಂಪತ್ತು ಹೊಂದಿದ್ದಾರೆ. ಕೆಳ ಮಟ್ಟದಲ್ಲಿರುವ ಶೇ. 60ರಷ್ಟು ಮಂದಿ ಶೇ. 5ಕ್ಕಿಂತಲೂ ಕಡಿಮೆ ಸಂಪತ್ತು ಹೊಂದಿದ್ದಾರೆ. ನಿರುದ್ಯೋಗ ಬಡತನ ಇದೀಗ ಹೆಚ್ಚಿದೆ. ಇಂತಹ ಕೋವಿಡ್ ಕಾಲದಲ್ಲಿ ಶ್ರೀಮಂತರಿಗೆ ಏಕೆ ಹೆಚ್ಚು ತೆರಿಗೆ ವಿಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.