8 ರೊಳಗೆ ಬೇಡಿಕೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ

ದಾವಣಗೆರೆ: ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಮಂಜೂರಾತಿ ಪತ್ರ ನೀಡುವುದು, 245 ಜನ ನೇರಪಾವತಿ ಪೌರ ಕಾರ್ಮಿಕರನ್ನು ಖಾಯಂಗೊಳಿಸುವುದು ಹಾಗೂ 6 ತಿಂಗಳು ಸಂಬಂಧವಿಲ್ಲದಂತೆ ಕೆಲಸ ಮಾಡಿರುವ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದೇವೆ ನಮ್ಮ ಬೇಡಿಕೆ ಈಡೇರಿಸುವ ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘದ ಜಿಲ್ಲಾಧ್ಯಕ್ಷ ಎಲ್.ಎಂ.ಹನುಮಂತಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಹಕ್ಕುಪತ್ರ ನೀಡಲು ಸಾಕಷ್ಟು ಬಾರಿ ಆಯುಕ್ತರಿಗೆ ಮನವಿ ನೀಡಲಾಗಿದ್ದು, ಅವರು ಸಬೂಬು ಹೇಳುತ್ತಲೆ ಬಂದಿದ್ದಾರೆ. ಕೂಡಲೇ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಖಾಯಂ ನೌಕರರಿಗೆ ಮಂಜೂರಾತಿ ಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಪೌರಕಾರ್ಮಿಕರನ್ನು ಖಾಯಂಗೊಳಿಸಲು ಹೈಕೋರ್ಟ್ ಆದೇಶವಿದ್ದರೂ ಸಹ ಸೌಲಭ್ಯ ನೀಡಲು ವಿಳಂಬವಾಗುತ್ತಿದೆ. ಈಗಾಗಲೇ ದಾವಣಗೆರೆ ಪಾಲಿಕೆಯಲ್ಲಿ ಲೋಡರ್ಸ್, ಹೆಲ್ಪರ್ಸ್ ಹಾಗೂ ಕಸ ವಿಂಗಡಣೆಗಾಗಿ ಟೆಂಡರ್ ಕರೆದಿದ್ದು, ನಮ್ಮ ಕಾರ್ಮಿಕರು ಖಾಯಂ ಆಗುವವರೆಗೂ ಎಲ್ಲ ಟೆಂಡರ್ ಅನ್ನು ತಡೆಹಿಡಿಯುವಂತೆ ಆಯುಕ್ತರಿಗೆ ಮನವಿ ಮಾಡಿದರು.
ಅಲ್ಲದೇ ಹಿಂದೆ 6 ತಿಂಗಳ ಕಾಲ ಕೆಲಸ ಮಾಡಿದ 89 ಕೆಲಸಗಾರರನ್ನು ಕೆಲಸದಿಂದ ಕೈಬಿಡಲಾಗಿತ್ತು. ಪ್ರತಿಭಟನೆ ನಂತೆ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ಪಾಲಿಕೆ ವಾಗ್ದಾನ ಮಾಡಿತ್ತು. ಅವರನ್ನು ಶೀಘ್ರವೇ ಕೆಲಸಕ್ಕೆ ನಿಯೋಜನೆ ಮಾಡಬೇಕೆಂದು ಒತ್ತಾಯಿಸಿದರು.
ನಮ್ಮ ಬೇಡಿಕೆಗಳನ್ನು ಇದೇ ಫೆ.8ರೊಳಗೆ ಈಡೇರಿಸಬೇಕು. ಇಲ್ಲದಿದ್ದರೆ ಹಂತಹಂತವಾಗಿ ಪಾಲಿಕೆಗೆ ಮುತ್ತಿಗೆ, ಧರಣಿ ಸತ್ಯಾಗ್ರಹ, ಪೊರಕೆ ಚಳುವಳಿ, ಸಿದ್ಧಿಗೆ ಮಾಡಿ ಪಾಲಿಕೆ ಮುಂಭಾಗದಲ್ಲಿ ಸಮಾಧಿ ಮಾಡುವುದು ಹಾಗೂ ಮೈ ಮೇಲೆ ಮಲಮೂತ್ರ ಸುರಿದುಕೊಂಡು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಿ.ಹೆಚ್.ವೀರಭದ್ರಪ್ಪ ಮಾತನಾಡಿ, ಸುಮಾರು ಶೇ.50ರಷ್ಟು ಕಾರ್ಮಿಕರು ನಿವೃತ್ತಿ ಆಗುತ್ತಿದ್ದು, ಅವರಿಗೂ ಮನೆಗಳನ್ನು ನೀಡಬೇಕು. ಕೂಡಲೇ ಮನೆಗಳು ಉದ್ಘಾಟನೆ ಆಗದಿದ್ದರೆ ಧರಣಿ, ಹೋರಾಟ ಮಾಡುತ್ತೇವೆ. ಜನಪ್ರತಿನಿಧಿಗಳು ನಮ್ಮ ಬೇಡಿಕೆ ಈಡೇರಿಕೆಗೆ ಮುಂದಾಗಿ, ಹೋರಾಟಕ್ಕೆ ದಾರಿ ಮಾಡಿಕೊಡಬೇಡಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್.ಹೆಚ್.ಸಾಗರ್, ಪ್ರಧಾನ ಕಾರ್ಯದರ್ಶಿ ನೀಲಗಿರಿಪ್ಪ, ಮಲ್ಲೇಶ್ ಕುಕ್ಕುವಾಡ ಉಪಸ್ಥಿತರಿದ್ದರು.