ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಖಂಡನೆ : ಭಾವಸಾರ ಕ್ಷತ್ರಿಯ ಸಮಾಜದ ಕುಲಗುರು ಶ್ರೀ ಪ್ರಭಾಕರ ದಾದಾ ಬೋಧಲೇ ಮಹಾರಾಜ

ದಾವಣಗೆರೆ- ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯನ್ನು ಭಾವಸಾರ ಕ್ಷತ್ರಿಯ ಸಮಾಜದ ಕುಲಗುರು ಶ್ರೀ ಪ್ರಭಾಕರ ದಾದಾ ಬೋಧಲೇ ಮಹಾರಾಜರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮಹಾರಾಷ್ಟ್ರದ ಶ್ರೀಕ್ಷೇತ್ರ ಪಂಡರಪುರದಿಂದ ವೀಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಭಾವಸಾರ ಕ್ಷತ್ರಿಯ ಸಮಾಜದ ಹಿಂದೂ ಯುವ ಕಾರ್ಯಕರ್ತ ಹರ್ಷ ಜಿಂಗಾಡೆ ಎಂಬುವರನ್ನು ಭೀಕರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಭಾರತ ದೇಶದಲ್ಲಿ ಸರ್ವ ಸಮಭಾವದಲ್ಲಿ ಬದುಕುತ್ತಿರುವ ಹಿಂದೂಗಳ ಮೇಲೆ ಆತಂಕವಾದ ನಡೆಯುತ್ತಿರುವುದು ಸರಿಯಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಭಾವಸಾರ ಕ್ಷತ್ರಿಯ ಸಮಾಜದವರು ಸಂಕಷ್ಟದಲ್ಲಿರುವ ಹರ್ಷನ ಕುಟುಂಬಕ್ಕೆ ನೆರವು ನೀಡಲಿದ್ದಾರೆ. ಇನ್ನೆರೆಡು ದಿನದಲ್ಲಿ ಮುಖ್ಯಮಂತ್ರಿಗಳು, ಗೃಹಸಚಿವರು ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಪ್ರತಿ ಊರಿನಲ್ಲಿ ಸಮಾಜದವರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ. ಆತಂಕವಾದಿಗಳಿಗೆ ಸಮಾಜವೇ ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.