ಉಕ್ರೇನ್ ದೇಶದಲ್ಲಿ ದಾವಣಗೆರೆ ಯುವಕ ವಿದ್ಯಾಭ್ಯಾಸ ಉಕ್ರೇನ್ ನಲ್ಲಿ ಯುದ್ಧ : ದಾವಣಗೆರೆಯಲ್ಲಿ ಪೋಷಕರ ಆತಂಕ

ದಾವಣಗೆರೆ: ದಾವಣಗೆರೆಯ ಭಗತ್ ಸಿಂಗ್ ನಗರ ನಿವಾಸಿ ಶೌಕತ್ ಅಲಿ ಎಂಬುವರ ಮಗ ಅಬೀದ್ ಅಲಿ ಉಕ್ರೇನ್ ದೇಶದ ಚರ್ನಿವಿತ್ಸಿ ಎಂಬಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಇದೀಗ ಉಕ್ರೇನ್ ನಲ್ಲಿ ಯುದ್ಧ ಆರಂಭವಾಗಿರುವ ಹಿನ್ನಲೆಯಲ್ಲಿ ಪೋಷಕರು ಆತಂಕದಲ್ಲಿದ್ದಾರೆ.
ಅಬೀದ್ ಅಲಿ ಚರ್ನಿವಿತ್ಸಿಯ ಬುಕವಿನಿಯನ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಮಾಡುತ್ತಿದ್ದಾರೆ.
ದೂರವಾಣಿ ಮೂಲಕ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಪೋಷಕರು ನನ್ನ ಪುತ್ರ ಮಹ್ಮದ್ ಅಬೀದ್ ಅಲಿ ಉಕ್ರೇನ್ ಗೆ ಹೋಗಿ ಆರು ತಿಂಗಳಾಗಿದೆ. ಒಂದು ಸೆಮ್ ಮುಕ್ತಾಯವಾಗಿದೆ. ಉಕ್ರೇನ್ ಪರಿಸ್ಥಿತಿ ನೋಡಿ ಕಳೆದ ತಿಂಗಳೇ ಮಗನನ್ನ ಕರೆತರುವ ಯೋಜನೆ ಇತ್ತು. ಆದರೆ, ವಿಶ್ವವಿದ್ಯಾಲಯದವರು ನಮಗೆ ಏನು ಆಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಹಾಗಾಗಿ ಸುಮ್ಮನಾಗಿದ್ದೆವು.
ನಾಳೆ 25ಕ್ಕೆ ಟಿಕೆಟ್ ಬುಕ್ ಆಗಿತ್ತು. ಆದರೆ ಆ ಫ್ಲೈಟ್ ಕ್ಯಾನ್ಸಲ್ ಆಗಿದೆ. ಆತಂಕ ಪಡುವ ಅಗತ್ಯವಿಲ್ಲ. ಮಗ ಸುರಕ್ಷಿತವಾಗಿ ಮನೆಗೆ ಬರುತ್ತಾನೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ವಿದೇಶಾಂಗ ಇಲಾಖೆ ಈ ವಿಚಾರದಲ್ಲಿ ಗಮನ ಹರಿಸಬೇಕಿದೆ. ಇನ್ನು ಮಗ ಅಬೀದ್ ಅಲಿಯೊಂದಿಗೆ ಇಡೀ ಕುಟುಂಬ ಸಂಪರ್ಕದಲ್ಲಿದೆ. ಈಗಾಗಲೇ ಫ್ಲೈಟ್ ಇಲ್ಲವೆ ರಸ್ತೆ ಮಾರ್ಗ ಮೂಲಕ ಬೇರೆ ದೇಶಗಳಿಗೆ ಕಳುಹಿಸಿ ಅಲ್ಲಿ ಭಾರತಕ್ಕೆ ಮಗ ಬರುವ ಸಾಧ್ಯತೆ ಇದೆ ಎಂದು ತಂದೆ ಶೌಕತ್ ಅಲಿ ಮಾಹಿತಿ ನೀಡಿದ್ದಾರೆ.