ಹೆಣ್ಣು ಭ್ರೂಣ ಹತ್ಯೆ ತಡೆವಲ್ಲಿ ಆಶಾಕಾರ್ಯಕರ್ತೆಯರ ಪಾತ್ರ ಹೆಚ್ಚಿದೆ : ಮಮತಾ ಹೊಸಗೌಡರ್

ದಾವಣಗೆರೆ: ಹೆಣ್ಣು ಭ್ರೂಣ ಹತ್ಯೆ ಕುರಿತು ಸಾರ್ವಜನಿಕರಿಗೆ ಹೆಚ್ಚಿನದಾಗಿ ಅರಿವು ಮೂಡಿಸಬೇಕಿದೆ. ಇದು ನಮ್ಮ ಕೆಲಸವಲ್ಲ ಎಂದು ಭಾವಿಸದೆ ಭ್ರೂಣ ಹತ್ಯೆ ತಡೆಗೆ ಎಲ್ಲರೂ ಕೈಜೋಡಿಸಬೇಕು ಎಂದು ತಾಲೂಕ್ ಪಂಚಾಯತ್ ಇಓ ಮಮತಾ ಹೊಸಗೌಡರ್ ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿನ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅರಿವು ಮೂಡಿಸುವ ಕಾರ್ಯಗಾರವನ್ನು ಇಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಬಳಿ ಇರುವ ಗಾಂಧಿ ಭವನದಲ್ಲಿ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಹೆಚ್ಚಿದೆ ಎಂದರು.
ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ನಗರ ಅಥವಾ ಗ್ರಾಮಗಳಲ್ಲಿ ಎಷ್ಟು ಜನ ಗರ್ಭಿಣಿ ಮಹಿಳೆಯರಿದ್ದಾರೆ?, ಎಷ್ಟು ಡಿಲೇವರಿಯಾಗಿದ್ದಾರೆ? ಗಂಡೋ, ಹೆಣ್ಣೋ? ಅಬಾಶನ್ ಆದರೆ ಯಾವ ಕಾರಣಕ್ಕೆ ಆಯಿತು? ಯಾವ ಆಸ್ಪತ್ರೆಯಲ್ಲಿ ಎಂಬುದು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಕಲೆಹಾಕಬೇಕು. ಅಷ್ಟೇಅಲ್ಲದೆ ಹಂತ-ಹಂತವಾಗಿ ಭ್ರೂಣ ಹತ್ಯೆ ಮಾಡದಂತೆ, ಅದಕ್ಕೆ ಇರುವ ಶಿಕ್ಷೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು. ಸ್ಕಾನಿಂಗ್ ಸೆಂಟರ್ಗಳಲ್ಲಿ ಲಿಂಗಪತ್ತೆಗೆ ಬಳಸಲಾಗುವ ಅಲ್ಟಾಸೆಟ್ ಟೆಕ್ನಾಲಜಿ ಉತ್ತಮ ಕಾರ್ಯಕ್ಕಾಗಿ ಬಳಕೆಯಲ್ಲಿದೆ. ಅಂದರೆ ಮಕ್ಕಳು ಗರ್ಭದಲ್ಲಿ ಆರೋಗ್ಯವಾಗಿದ್ದಾರಾ? ಅವರ ಬೆಳವಣಿಗೆ ಹೇಗೆ ನಡೆಯುತ್ತಿದೆ ಎಂಬುದನ್ನು ಅರಿಯುವ ಸಲುವಾಗಿ ಬಳಸಲಾಗುತ್ತದೆ. ಆದರೆ ವೈದ್ಯರು ಹಣದ ಆಸೆಗೆ ಅದನ್ನು ಭ್ರೂಣ ಲಿಂಗ ಪತ್ತೆಗೆ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರು.