ಹಣವಿಲ್ಲದೆ ಭಾರತ, ಭೂತಾನ್, ನೇಪಾಳ ದೇಶ ಸೈಕಲ್ನಲ್ಲಿ ಸುತ್ತುತ್ತಾನಂತೆ ಸುದರ್ಶನ್! ಹಣವಿಲ್ಲದೆ ಸುದರ್ಶನ್ ಸಂಚಾರ ಹೊರ ದೇಶದ ಕಡೆಗೆ?

ವಿದ್ಯಾನಾಯ್ಕ್ ಅರೇಹಳ್ಳಿ
ದಾವಣಗೆರೆ : ಸಾಮಾನ್ಯವಾಗಿ 10 ಕಿಲೋ ಮೀಟರ್ ದೂರ ಇರುವ ಪಕ್ಕದ ಊರಿಗೆ ಪ್ರಯಾಣ ಬೆಳೆಸಬೇಕಾದರೆ ಈಗಿನ ವ್ಯವಸ್ಥೆಯಲ್ಲಿ ಕೊನೆಪಕ್ಷ 50 ರೂಪಾಯಿಯಾದರೂ ಇರಬೇಕು. ಆದರೆ ಚಿತ್ರದುರ್ಗ ಜಿಲ್ಲೆಯ ಹನುಮನಹಳ್ಳಿ ಗ್ರಾಮದ ಯುವಕನೊಬ್ಬ ದೇಶಬಿಟ್ಟು ಹೊರದೇಶಗಳಾದ ಭೂತಾನ್, ನೇಪಾಳ ಮತ್ತು ಭಾರತ ದೇಶವನ್ನು ಕೇವಲ ಸೈಕಲ್ನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ದೇಶ ಸುತ್ತು ಕೋಶ ಓದು ಎಂಬ ಮಾತೊಂದಿದೆ. ಅದರಂತೆ ಚಿತ್ರದುರ್ಗ ಜಿಲ್ಲೆಯ ಹನುಮನಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ಮತ್ತು ಗಿರಿಜಮ್ಮ ದಂಪತಿಯ ಮಗ ಸುದರ್ಶನ್ ಸೈಕಲ್ನಲ್ಲಿ ಪ್ರವಾಸ ಆರಂಭಿಸಿ ಇದೀಗ 7 ತಿಂಗಳು ಅಂದರೆ 228 ದಿನ ಆಗಿದ್ದು, ಈಗಾಗಲೇ ತಮಿಳ್ನಾಡು, ಕೇರಳ, ಪಾಂಡಿಚೇರಿಯ ಎಲ್ಲಾ ಜಿಲ್ಲೆಗಳ ಪ್ರವಾಸ ಮಾಡಿ ಕರ್ನಾಟಕಕ್ಕೆ ಬಂದಿದ್ದಾನೆ. ಈಗ ಮತ್ತೇ ಏ.4ರಂದು ವಿವಿಧ ಕಡೆ ಪ್ರವಾಸ ಕೈಗೊಳ್ಳಲಿದ್ದಾನೆ. ಅಂದರೆ ಶಿವಮೊಗ್ಗ, ಉಡುಪಿ, ಕಾರವಾರ, ಗೋವಾದ ಕಡೆ ಪ್ರವಾಸ ಕೈಗೊಳ್ಳಲಿರುವುದಾಗಿ ಸುದರ್ಶನ್ ಗರುಡವಾಯ್ಸ್ಗೆ ಮಾಹಿತಿ ನೀಡಿದರು.
ಸುದರ್ಶನ್ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದಾನೆ. ಸ್ಟೀಲ್ ಕಂಪನಿ, ಮೈಕ್ರೋ ಫೈನಾನ್ಸ್, ಗೊಬ್ಬರದ ಕಂಪನಿ ಹೀಗೆ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದು, ದಾವಣಗೆರೆ ನಗರದಲ್ಲಿಯೂ ಜುಮೋಟೋದಲ್ಲಿ ಫುಡ್ ಡಿಲೇವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಸುದರ್ಶನ್ ತೃತೀಯ ವರ್ಷದ ಬಿ.ಎ. ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಹಣವಿಲ್ಲದೆ ಹೇಗೆ ದೇಶ ಸುತ್ತುತ್ತಾರೆ?
ಪೀಠಿಕೆಯಲ್ಲಿ ಹೇಳಿದಂತೆ ಒಬ್ಬ ವ್ಯಕ್ತಿ ಪಕ್ಕದ ಊರಿಗೆ ಹೋಗಬೇಕಾದರೆ ಕೊನೆಪಕ್ಷ 50 ರೂಗಳಾದರೂ ಇರಬೇಕು. ಆದರೆ ದೇಶ ಬಿಟ್ಟು ಹೊರ ದೇಶಕ್ಕೇ ಹೋಗಲು ಹಣವಿಲ್ಲದಿದ್ದರೆ ಹೇಗೆ ಎಂಬ ಅನುಮಾನ ಕಾಡುವುದು ಸಹಜ.! ಈತ ಹನುಮನಹಳ್ಳಿಯಿಂದ ಹೊರಡಬೇಕಾದರೆ 2 ಅಥವಾ 3 ಸಾವಿರ ರೂಗಳನ್ನು ಮಾತ್ರ ಕೊಂಡೊಯ್ಯುತ್ತಾನೆ. ಪ್ರಯಾಣ ಬೆಳೆಸುತ್ತಾ ಮಾರ್ಗ ಮಧ್ಯೆ ಸಿಗುವ ಊರು, ನಗರಗಳಲ್ಲಿ ಕೆಲಸ ಅಗತ್ಯವಿರುವ ವ್ಯಕ್ತಿಗಳ ಮನೆ, ಅಂಗಡಿ, ಹೋಟೆಲ್ ಹೀಗೆ ಅಲ್ಲಲ್ಲಿ ಕೆಲಸ ಮಾಡಿ ಊಟ ಅಥವಾ ಕೂಲಿ ರೂಪದಲ್ಲಿ ಕೆಲಸ ಮಾಡಿ ಹಣ ಪಡೆದು ಮತ್ತೇ ಪ್ರಯಾಣ ಮುಂದುವರೆಸುತ್ತಾರೆ.
ಇವರ ಪ್ರಯಾಣ ಇದೇ ಮೊದಲೇನಲ್ಲ!:
ಸುದರ್ಶನ್ ಈ ರೀತಿಯ ಪ್ರಯಾಣವನ್ನು ಇದೇ ಮೊದಲ ಬಾರಿಗೆ ಆಯೋಜಿಸಿಲ್ಲ. ಈ ಹಿಂದೆ ಹಲವಾರು ಕಡೆ ಸೈಕಲ್ನಲ್ಲಿ ರಾಜ್ಯದ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರಯಾಣ ಕೈಗೊಂಡಿದ್ದರು. ಇವರು ಈ ರೀತಿಯ ಸೈಕಲ್ನಲ್ಲಿ ದೇಶ ಸುತ್ತುವ ಪ್ರಯಾಣ ಪ್ರಾರಂಭಿಸಿ 228 ದಿನವಾಯಿತು. 2021ರ ಆಗಸ್ಟ್ 18ರಂದು ಮೊದಲ ಬಾರಿಗೆ ಪ್ರಯಾಣ ಪ್ರಾರಂಭಿಸಿ ತಮಿಳ್ನಾಡು, ಕೇರಳ, ಪಾಂಡಿಚೇರಿಯ ಎಲ್ಲಾ ಜಿಲ್ಲೆಗಳ ಪ್ರೇಕ್ಷಣೀಯ ಸ್ಥಳಗಳನ್ನು ಕಣ್ತುಂಬಿಕೊ0ಡಿದ್ದರು.
ಇದೀಗ ಏ. 4ರಿಂದ (ನಾಳೆ) ಪ್ರಯಾಣ ಬೆಳೆಸಲು ಸಿದ್ದರಾಗಿದ್ದು, ಶಿವಮೊಗ್ಗ, ಉಡುಪಿ, ಕಾರವಾರ, ಗೋವಾದ ಕಡೆ ಪ್ರಯಾಣಿಸಲಿದ್ದಾರೆ. ಹೋಗುವ ಸ್ಥಳಗಳ ಬಗ್ಗೆ, ಅಲ್ಲಿನ ಆಚಾರ ವಿಚಾರ, ಸಂಪ್ರದಾಯ, ಆಹಾರ ಪದ್ದತಿ, ಪ್ರೇಕ್ಷಣೀಯ ಸ್ಥಳ ಹೀಗೆ ಪ್ರತಿಯೊಂದು ತಿಳಿದುಕೊಳ್ಳುವ ಸಲುವಾಗಿ ಸೈಕಲ್ನಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇವರು ಭೂತಾನ್ ಮತ್ತು ನೇಪಾಳದ ಪ್ರವಾಸ ಮುಗಿಸಿ ಬರಲು 3 ರಿಂದ 4 ವರ್ಷ ಆಗಬಹುದು ಎಂದು ಅಂದಾಜಿಸಲಾಗಿದೆ.
ಪ್ರತಿಯೊಂದಕ್ಕೂ ಹಣ ಬೇಕೆಬೇಕು ಎನ್ನುವ ಈ ಕಾಲದಲ್ಲಿ ಮನುಷ್ಯರಲ್ಲಿರುವ ಮನುಷ್ಯತ್ವವನ್ನು ನಂಬಿ ಏನು ಕೊಡದಿದ್ದರೂ ಕೊನೆ ಪಕ್ಷ ಒಂದೋತ್ತು ಊಟ ಕೊಟ್ಟೇ ಕೊಡುತ್ತಾರೆ ಜನ ಎಂಬ ನಂಬಿಕೆಯಲ್ಲಿ ಸೈಕಲ್ನಲ್ಲಿ ಭಾರತ, ನೇಪಾಳ ಮತ್ತು ಭೂತಾನ್ ದೇಶ ಸುತ್ತಲು ಮುಂದಾಗಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಹಣವಿದ್ದರೆ ಮಾತ್ರ ದೇಶ ಸುತ್ತೋಕೆ ಸಾಧ್ಯ ಎನ್ನುವ ಕಾಲದಲ್ಲಿ ಹಣವಿಲ್ಲದೆ ಹೊರದೇಶ ಪ್ರಯಾಣ ಪ್ರಾರಂಭಿಸುವುದು ಸಾಮಾನ್ಯವಾದ ವಿಷಯವಲ್ಲ. ಒಟ್ಟಾರೆ ಇವರ ಕಾರ್ಯ ಸುಗಮವಾಗಿ ಸಾಗಲಿ ಎಂದು ಗರುಡವಾಯ್ಸ್ ಹಾರೈಸುತ್ತದೆ.