ಈ ಮದುವೆಗಿಂತ ಇನ್ನೂ ಸರಳ ಮದುವೆ ಎಲ್ಲಿಯಾದರೂ ನಡೆದಿದೆಯೇ? ಮಂತ್ರ ಮಾಂಗಲ್ಯದ ಮೂರು ಗಂಟಿನೊಂದಿಗೆ ಘಟ್ಟಿಯಾಯ್ತು ಪ್ರೇಮಬಂಧ

2

ವಿದ್ಯಾನಾಯ್ಕ್ ಅರೇಹಳ್ಳಿ
ದಾವಣಗೆರೆ : ಮದುವೆ ಅಂದ್ರೆ ನಮ್ಮೇಲ್ಲರ ಕಲ್ಪನೆಗೆ ಬರೋದು ಮದುವೆ ದಿನಾಂಕಕ್ಕೂ ಒಂದು ತಿಂಗಳು ಮುಂಚಿತವಾಗಿಯೇ ಬಟ್ಟೆ, ಬರೆ, ಒಡವೆ ಇತ್ಯಾದಿ ವಸ್ತುಗಳನ್ನು ಕೊಂಡು, ಹುಡುಗ-ಹುಡುಗಿ ಮನೆಗೆ ಬಣ್ಣ ಬಳಿದು ಸಿಂಗರಿಸಿ, ಮದುವೆ ಕಾರ್ಡ್ ಮಾಡಿಸಿ ಬಂಧು-ಬಾಂಧವರಿಗೆ, ಸ್ನೇಹಿತರಿಗೆ ನೀಡಿ ಆಹ್ವಾನಿಸಿ ಮದುವೆ ದಿನಕ್ಕೂ ಒಂದು ದಿನ ಮುಂಚೆ ಮನೆ ಮುಂದೆ ಚಪ್ಪರ ಹಾಕಿ, ಪುರೋಹಿತರನ್ನು ಗೊತ್ತುಪಡಿಸಿ ಸಂಬಂಧಿಕರು, ಸ್ನೇಹಿತರೆಲ್ಲರ ಮುಂದೆ ಮಂತ್ರ ಘೋಷಗಳೊಂದಿಗೆ ಮಧುಮಗಳಿಗೆ ತಾಳಿಕಟ್ಟಿ ಮನೆ ತುಂಬಿಸಿಕೊಳ್ಳುವ ಪದ್ದತಿ. ಈ ರೀತಿಯ ಮದುವೆ ನಡೆಸಬೇಕಾದರೆ ಲಕ್ಷಾಂತರ ಹಣ ವ್ಯಯಿಸಿ ಮಾಡಬೇಕು. ಕಾಲಬದಲಾದಂತೆ ಯುವಕರು ಬದಲಾಗುತ್ತಿದ್ದಾರೆ. ದುಂದುವೆಚ್ಚ ಮಾಡುವ ಬದಲು ಪ್ರಾಕೃತಿಕವಾಗಿ ಕೆಲವೇ ಜನರ ಸಮ್ಮುಖದಲ್ಲಿ ಮದುವೆ ಮಾಡುವ ಪರಿಪಾಠ ಶುರುವಾಗುತ್ತಿದೆ. ಇಂತಹ ಬದಲಾವಣೆ ಸದ್ಯದ ಪರಿಸ್ಥಿತಿಯಲ್ಲಿ ಅತ್ಯವಶ್ಯಕ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನಲ್ಲಿ ವಿವೇಕ್‌ಗೌಡ ಮತ್ತು ಶಿವಾನಿ ಶೆಟ್ಟಿ ಎಂಬುವರ ಮದುವೆ ಸರಳವಾಗಿ ಏ.3ರಂದು ನಡೆಯಿತು. ಈ ಮದುವೆಯಲ್ಲಿ ಪುರೋಹಿತರು, ಯಾವುದೇ ಬೇಡವಾದ ಖರ್ಚು-ವೆಚ್ಚ, ಗಲಾಟೆ-ಗದ್ದಲ, ವಿಪರೀತ ಸಂಭ್ರಮಾಚರಣೆ ಇಲ್ಲದೆ ಕೇವಲ 50 ಜನರ ಸಮ್ಮುಖದಲ್ಲಿ ನಡೆಯಿತು. ವಿವೇಕ್‌ಗೌಡ ಫೊಟೋಗ್ರಾಫರ್ ಆಗಿ ಮತ್ತು ಶಿವಾನಿ ಶೆಟ್ಟಿ ಇಂಟಿರಿಯರ್ ಡೆಕೊರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ ಪ್ರೀತಿ-ವಿಶ್ವಾಸ, ನಂಬಿಕೆ ಹಾಗು ಭರವಸೆಗಳ ಅಡಿಪಾಯದಲ್ಲಿ ನಿಂತ ಜೀವನವೆಂಬ ಸಾಗರದಲ್ಲಿ ಈಜಲು ಮುಂದಾದ ನವಜೋಡಿಗಳು ಒಬ್ಬರನ್ನೊಬ್ಬರು ಸಂಪೂರ್ಣ ಒಪ್ಪಿ ಸರಳವಾಗಿ ಮದುವೆ ನಡೆಸಲಾಯಿತು.

ಪ್ರೀತಿ-ವಿಶ್ವಾಸದ ತಳಹದಿಯ ಮೇಲೆ ನಡೆದ ಮದುವೆ:

ಈ ಮದುವೆಯ ಮತ್ತೊಂದು ವಿಶೇಷವೆಂದರೆ ಪೋಷಕರು, ಪುರೋಹಿತರು, ಸಂಬಂಧಿಕರು ಹಾಗು ಸಮಾಜ ಗೊತ್ತುಪಡಿಸಿದ ಮದುವೆ ಇದಲ್ಲ. ಕೇವಲ ಹುಡುಗ-ಹುಡುಗಿಯ ಒಪ್ಪಿಗೆ ಮೇರೆಗೆ ದೃಢಪಡಿಸಿಕೊಂಡ ಮದುವೆ. ಹುಡುಗ-ಹುಡುಗಿ ದೃಢ ಮನಸ್ಸಿನ ಆಧಾರದ ಮೇಲೆ ನಡೆದ ಮದುವೆ ಇದಾಗಿದ್ದು, ಪೋಷಕರು ಶುಭ ಹಾರೈಸಿದರು. ಯಾವುದೇ ಆಡಂಬರ ಇಲ್ಲದೆ, ಬೇರೆಯವರ ಹಸ್ತಕ್ಷೇಪವಿಲ್ಲದೆ ಕೇವಲ ಗಂಡು-ಹೆಣ್ಣಿನ ಸಹಮತಿಯೊಂದಿಗೆ ನಡೆದ ಮದುವೆ ಇದಾಗಿದ್ದು, ಇಬ್ಬರ ಮನ ಮಂತ್ರ ಮಾಂಗಲ್ಯದ ಮೂರು ಗಂಟಿನೊಂದಿಗೆ ಘಟ್ಟಿಯಾಯ್ತು ಪ್ರೇಮಬಂಧ.

ಮಂತ್ರಘೋಷ ಏನು ಗೊತ್ತಾ?:
ಇಲ್ಲಿ ನೆರೆದಿರುವ ನಮ್ಮ ಗುರುಹಿರಿಯರು, ತಂದೆ,ತಾಯಿಯರು, ಸ್ನೇಹಿತರ ಸಾಕ್ಷಿಯಾಗಿ ಮಲ್ಲೇಶ್ ಮತ್ತು ಸುಶೀಲ ಅವರ ಮಗನಾದ ವಿವೇಕ್‌ಗೌಡ ಆದ ನಾನು, ರವಿ ಮತ್ತು ವಿದ್ಯಾ ಅವರ ಮಗಳಾದ ಶಿವಾನಿ ಶೆಟ್ಟಿ ಆದ ನಾನು, ನಾವಿಂದು ಪತಿ ಪತ್ನಿಯರಾಗಿ ದಾಂಪತ್ಯ ಜೀವನವನ್ನು ಸ್ವೀಕರಿಸುತ್ತಿದ್ದೇವೆ. ದಂಪತಿಗಳಾಗುವ ನಾವಿಬ್ಬರು ಮೇಲೂ ಕೀಳೆನ್ನದೆ ಸಮಾನತೆಯಿಂದ ಬಾಳ್ವೆ ನಡೆಸುತ್ತೇವೆ ಹಾಗೂ ನಮ್ಮ ಮದುವೆಯಿಂದ ಹೆತ್ತವರಿಗೆ ಹೊರೆಯಾಗದಂತೆ ಸರಳವಾಗಿ ಮದುವೆಯಾಗುತ್ತಿದ್ದೇವೆ. ಸಮಾಜದಲ್ಲಿ ಇಂತಹ ಸರಳ ಮದುವೆಗೆ ಪ್ರೋತ್ಸಾಹಿಸುತ್ತೇವೆ ಮತ್ತು ದಂಪತಿಗಳಾದ ನಾವಿಬ್ಬರು ಪರಸ್ಪರ ಪ್ರೀತಿ, ಮಮತೆಯಿಂದ ಜೀವನ ನಡೆಸುತ್ತೇವೆ ಎಂದು ಪ್ರಕೃತಿ ಮತ್ತು ನೆರೆದಿದ್ದ ಬಂಧು ಬಾಂಧವರ ಸಮ್ಮುಖದಲ್ಲಿ ನವಜೋಡಿಗಳು ಪರಸ್ಪರ ಘೋಷಿಸಿಕೊಂಡರು. ಇದು ಅತಿ ವಿಶೇಷವಾಗಿತ್ತು. ಹೆಣ್ಣು-ಗಂಡು ಸಂಪೂರ್ಣ ಒಪ್ಪಿ, ಯಾವುದೇ, ಸಂಪತ್ತು, ಆಸ್ತಿ, ಅಂತಸ್ತು, ಪ್ರತೀಷ್ಟೆಗಳಿಗೆ ಅವಕಾಶ ಕೊಡದೆ ಶುಧ್ಧ ಎರಡು ಮನಸ್ಸಿನ ಮಿಲನದೊಂದಿಗೆ ವಿಶ್ವಾಸ, ನಂಬಿಕೆ ಭರವ¸ಯ ತಳಹದಿಯ ಮೇಲೆ ವಿವಾಹ ನಡೆಯಿತು.

ಆಹ್ವಾನ ಪತ್ರಿಕೆಯ ವಿಶೇಷ ಗೊತ್ತಾ?


ಆಹ್ವಾನ ಪತ್ರಿಕೆಯೂ ಇನ್ನೂ ವಿಶೇಷವಾಗಿತ್ತು. ಸಾಮಾನ್ಯ ಮದುವೆಗಳಲ್ಲಿ ಇರುವಂತೆ ದೇವರು, ತಂದೆ, ತಾಯಿ, ಸಂಬಂಧಿಕರು, ಬಂಧುಬಾಂಧವರ ಹೆಸರಿಲ್ಲದೆ ವಿಚಾರಗಳ ಪ್ರಚಾರದ ಸಮ್ಮಿಲನದೊಂದಿಗೆ ವಧುವರರ ಹೆಸರು ಮಾತ್ರ ಹಾಕಿಸಿ ಆಹ್ವಾನ ಪತ್ರಿಕೆ ಸಿದ್ದಪಡಿಸಿದ್ದರು. ಅಂದರೆ ಆಹ್ವಾನ ಪತ್ರಿಕೆಯ ಮೇಲ್ಭಾಗದಲ್ಲಿ “ಇಲ್ಲಿ ಎಲ್ಲದಕ್ಕೂ ಅರ್ಥ ಇದೆ, ಯಾವುದು ಅಲ್ಲ ವ್ಯರ್ಥ, ನೀರೆಲ್ಲವೂ ತೀರ್ಥ” ಎಂಬ ಸಂದೇಶ ಸಾರಿ ವಧುವರರ ಹೆಸರು, ದಿನಾಂಕ, ಸ್ಥಳ, ಸಮಯ ಹಾಕಿ ಕೊನೆಗೆ ರಾಷ್ಟçಕವಿ ಕುವೆಂಪು ಅವರ “ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವವೆಲ್ಲ ಮೀರಿ ನಿರ್ದಿಗಂತವಾಗಿ ಏರಿ, ಓ ನನ್ನ ಚೇತನ, ಆಗು ನೀ ಅನಿಕೇತನ” ಎಂಬ ಸಂದೇಶದೊಂದಿಗೆ ಮುಕ್ತಾಯ ಮಾಡಿರುವ ಆಹ್ವಾನ ಪತ್ರಿಕೆಯೂ ಸಹ ವಿಶೇಷವಾಗಿತ್ತು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!