ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸೇವಾದಳ ಶಿಕ್ಷಣ ಅಗತ್ಯ: ಬಿ ಇ ಒ ನಿರಂಜನಮೂರ್ತಿ

ದಾವಣಗೆರೆ : ಶಾಲಾ ಪಠ್ಯಕ್ರಮ ಹೊರತುಪಡಿಸಿ ಸಾಂಸ್ಕøತಿಕವಾಗಿ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಂಡು ಆಟ ಪಾಠದ ಜೊತೆಗೆ ಯೋಗ ಧ್ಯಾನದೊಂದಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ವ್ಯಕ್ತಿತ್ವ ವಿಕಸನಗೊಳ್ಳಲು ಮಕ್ಕಳಿಗೆ ಸೇವಾದಳದ ಶಿಬಿರಗಳು ತುಂಬಾ ಅಗತ್ಯವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನಮೂರ್ತಿ ಅವರು ತಿಳಿಸಿದರು. ದಾವಣಗೆರೆಯ ಭಾರತ ಸೇವಾದಳ ಭವನದಲ್ಲಿ ಭಾರತ ಸೇವಾದಳ ಸಾರ್ವಜನಿಕ ಶಿಕ್ಷಣ ಇಲಾಖೆ, ಫ್ಲೈಯಿಂಗ್ ಬಡ್ರ್ಸ್ ಶಾಲೆ, ಕರಾಟೆ ಕಿಡ್ಸ್ ಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ತಿಂಗಳ ಚಿಣ್ಣರ ಸಂಭ್ರಮ ಮಕ್ಕಳ ಬೇಸಿಗೆ ಶಿಬಿರವನ್ನು ಅವರು ಉದ್ಘಾಟಿಸಿ ಮಾತಾನಾಡಿದ ಅವರು ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಸೇವಾದಳವು ಪ್ರತಿ ವರ್ಷ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳುತ್ತದೆ ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಭಾರತ ಸೇವಾದಳ ವಲಯ ಸಂಘಟಕರಾದ ಅಣ್ಣಯ್ಯ ಎಂ ಪ್ರಸ್ತಾವಿಕವಾಗಿ ಮಾತನಾಡಿ ಮಕ್ಕಳು ವರ್ಷವಿಡೀ ಶಾಲೆಗಳಲ್ಲಿ ಪಠ್ಯಕ್ರಮ ಅಭ್ಯಾಸ ಮಾಡಿ, ಆರಂಭದಿಂದಲೂಟ ಪರೀಕ್ಷೆಗಳ ಒತ್ತಡದಲ್ಲಿ ಅಭ್ಯಾಸವನ್ನು ಮಾಡಿರುತ್ತಾರೆ. ಪರೀಕ್ಷೆಗಳು ಮುಗಿದು ಬೇಸಿಗೆ ಕೂಡ ಆರಂಭವಾಗಿದ್ದರಿಂದ ಮನೆಯಲ್ಲಿ ಏನು ಮಾಡಬೇಕು ಎಂಬ ಜಿಜ್ಞಾಸೆಗೆ ಒಳಗಾಗುತ್ತಾರೆ. ಟಿವಿ ಮೊಬೈಲ್ ಕಡೆ ಹೆಚ್ಚು ಗಮನವನ್ನು ಕೊಟ್ಟು ಮಾನಸಿಕ ಸ್ವಾಸ್ಥ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬೇಸಿಗೆಯ ಅವಧಿಯಲ್ಲಿ ಅವರಿಗೆ ಈಜು ಯೋಗ ಧ್ಯಾನ ಚಿತ್ರಕಲೆ ಸಂಗೀತ ಕರಾಟೆ ನೃತ್ಯ,ನಾಟಕದಂತಹ ಅಭ್ಯಾಸಗಳನ್ನು ಕಲಿಯಲು ಅವಕಾಶ ಮಾಡಿ ಕೊಟ್ಟರೆ ಅವರಲ್ಲಿನ ಒಳಗಿನ ಪ್ರತಿಭೆಯನ್ನು ಹೊರಗೆ ತರಲು ಸಹಕಾರವಾಗುತ್ತದೆ. ಸೇವಾದಳ ಈ ನಿಟ್ಟಿನಲ್ಲಿ ಪ್ರತಿವರ್ಷ ದಾವಣಗೆರೆಯಲ್ಲಿ ಬೇಸಿಗೆ ಶಿಬಿರವನ್ನು ನಡೆಸುತ್ತಿದೆ ಎಂದರು.
ಆಲೂರು ವಿಜಯಕುಮಾರ್ ಅವರು ಮಕ್ಕಳಿಗೆ ಸೇವಾದಳದ ಶಾರೀರಿಕ ಯೋಗ ನೈತಿಕ ಶಿಕ್ಷಣ ಪುಸ್ತಕವನ್ನು ವಿತರಿಸಿದರು. ತಾಲೂಕು ಅಧ್ಯಕ್ಷರಾದ ನಾಗರಾಜ ರವರು ಮಕ್ಕಳಿಗೆ ಸೇವಾದಳ ಬ್ಯಾಡ್ಜ್ಗಳನ್ನು ವಿತರಣೆ ಮಾಡಿದರು.ಕೆ. ಬಿ. ಪರಮೇಶ್ವರ್ ಅವರು ಮಕ್ಕಳಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಣೆ ಮಾಡಿದರು. ಶ್ರೀಮತಿ ಶೈಲಜಾ ರವರು ಮಕ್ಕಳಿಗೆ ಲಘು ಉಪಹಾರ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಶುರಾಮ್ ಕಟವ್ಕಾರ್ ರವರು ವಹಿಸಿದ್ದರು. ಗೋಪಾಲಪ್ಪ, ನೀಲಗುಂದ ಜಯಮ್ಮನವರು ಅತಿಥಿಯಾಗಿ ಭಾಗವಹಿಸಿದ್ದರು.