ಮೇಯರ್ಗೆ ಮಲ್ಲಿಕಾರ್ಜುನ್ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ: ಗಡಿಗುಡಾಳ್ ಮಂಜುನಾಥ್ ಆಕ್ರೋಶ

ದಾವಣಗೆರೆ: ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಬಗ್ಗೆ ಮಾತನಾಡಲು ಮಹಾನಗರ ಪಾಲಿಕೆ ಮೇಯರ್ ಅವರಿಗೆ ನೈತಿಕತೆ ಇಲ್ಲ. ಪಾಲಿಕೆಯಲ್ಲಿ ಮೇಯರ್ ಯಾರು ಆಗಿದ್ದಾರೆ ಅಂತಾನೇ ಗೊತ್ತಾಗುತ್ತಿಲ್ಲ. ಜಯಮ್ಮ ಗೋಪಿನಾಯ್ಕ್ ಅವರಂತೂ ಏನೇ ಕೇಳಿದರೂ ಬೇರೆಯವರ ಬಳಿ ಮಾತನಾಡಿ ಅಂತಾರೆ. ಇಂಥವರು ದೊಡ್ಡವರ ಬಗ್ಗೆ ಮಾತನಾಡಿದರೆ ದೊಡ್ಡವರಾಗಿಬಿಡುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂಸಿಸಿ ಬಿ ಬ್ಲಾಕ್ ನ ಅನುದಾನ ಕೇಳಲು ಕರೆ ಮಾಡಿದರೆ ಮೇಯರ್ ಪತಿ ಗೋಪಿನಾಯ್ಕ್ ಸ್ವೀಕರಿಸುತ್ತಾರೆ. ಅವರಿಗೆ ಕೇಳಿದರೆ ಮಾಜಿ ಮೇಯರ್ ಎಸ್. ಟಿ. ವೀರೇಶ್ ಅವರ ಬಳಿ ಕೇಳಿ ಹೇಳುತ್ತೇನೆ ಎನ್ನುತ್ತಾರೆ. ಹಾಗಿದ್ದರೆ ಮೇಯರ್ ಆಗಿರುವುದು ಯಾರು ಎಂಬುದೇ ನಮಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಮೇಯರ್ ಅವರು ಮೊದಲು ತಮ್ಮ ಜವಾಬ್ದಾರಿ ಅರಿತು ಮಾತನಾಡಲಿ. ಮಲ್ಲಿಕಾರ್ಜುನ್ ಅವರು ರಾಜಕಾರಣಕ್ಕೆ ಬಂದು ಎಷ್ಟು ವರ್ಷವಾಯ್ತು? ಜಯಮ್ಮ ಅವರು ಮೇಯರ್ ಆಗಿದ್ದು ಈಗಷ್ಟೇ. ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ಯಾವೆಲ್ಲಾ ಅಭಿವೃದ್ಧಿ ಕೆಲಸ ಆಗಿವೆ ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಇನ್ನು ಎಸ್. ಟಿ. ವೀರೇಶ್ ಅವರು ಮೇಯರ್ ಆಗಿದ್ದಾಗ 34 ಸಾವಿರ ಗಿಡಗಳನ್ನು ನೆಟ್ಟಿದ್ದೇವೆ ಎಂದಿದ್ದರು. ಈ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಆಗ ಸ್ಥಾಯಿ ಸಮಿತಿ ಸದಸ್ಯರ ಜೊತೆ ಪರಿಶೀಲನೆಗೆ ಹೋಗೋಣ ಎಂದು ಮೇಯರ್ ಜಯಮ್ಮ ಹೇಳಿದ್ದರೂ ಇದುವರೆಗೆ ಆಗಿಲ್ಲ. ನಾಲ್ಕು ಬಾರಿ ಗಮನಕ್ಕೆ ತಂದರೂ ಮುಂದೂಡುತ್ತಲೇ ಇದ್ದಾರೆ. ಇದನ್ನು ನೋಡಿದರೆ ಭ್ರಷ್ಟಾಚಾರ ನಡೆದಿದೆ ಎಂಬುದು ಗೊತ್ತಾಗುತ್ತದೆ. ಮಲ್ಲಣ್ಣನವರ ಬಗ್ಗೆ ಮಾತನಾಡಿದರೆ ಮುಂದೆ ಶಾಸಕರಾಗಬಹುದು ಎಂಬ ಭ್ರಮೆಯಲ್ಲಿ ಎಸ್. ಟಿ. ವೀರೇಶ್ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪಿ. ಬಿ. ರಸ್ತೆ, ಎಲೆಬೇತೂರು ರಸ್ತೆ, ರಿಂಗ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮಲ್ಲಿಕಾರ್ಜುನ್ ಅವರ ಸಂಬ0ಧಿಕರು ಮಾತ್ರ ಓಡಾಡುತ್ತಾರಾ? ಬೇರೆ ಜನರು ಓಡಾಡುತ್ತಿಲ್ಲವಾ? ಕುಂದುವಾಡ ಕೆರೆಯ ನೀರನ್ನು ಮಲ್ಲಣ್ಣನವರ ಸಂಬ0ಧಿಕರು ಮಾತ್ರ ಕುಡಿಯುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಪಾಲಿಕೆಯ ಮುಂಭಾಗದ ರೈಲ್ವೆ ಕೆಳಸೇತುವೆ ಮೇಲೆ ಈಗಲೂ ನೀರು ನಿಲ್ಲುತ್ತಿದೆ. ಈ ಸಮಸ್ಯೆ ಪರಿಹರಿಸುವುದಾಗಿ ವೀರೇಶ್ ಅವರು ಹೇಳಿದ್ದರೂ ಲಕ್ಷಾಂತರ ರೂಪಾಯಿ ಖರ್ಚಾಗಿದ್ದರೂ ಸಮಸ್ಯೆ ಮಾತ್ರ ಹಾಗೆಯೇ ಇದೆ. ಮಳೆಗಾಲದಲ್ಲಂತೂ ಸಮಸ್ಯೆ ಹೇಳತೀರದ್ದು. ಮೂರ್ನಾಲ್ಕು ತಿಂಗಳ ಕಾಲ ಜನರು ಪಡುವ ಪರಿಪಾಟಲು ಅಷ್ಟಿಷ್ಟಲ್ಲ. ಇಂಥ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ಬದಲು ಸುಳ್ಳು ಆರೋಪ ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅದೇ ರೀತಿಯಲ್ಲಿ ಸಿದ್ಧವೀರಪ್ಪ ಬಡಾವಣೆಯಲ್ಲಿನ ನಿವೇಶನಗಳಲ್ಲಿ ಸ್ವಚ್ಛತೆ ಮಾಡುವುದಾಗಿ ಹೇಳಿ ಫೋಟೋಕ್ಕೆ ಫೋಸ್ ನೀಡಿದ್ದರು. ಎರಡು ನಿವೇಶನ ಮಾತ್ರ ಸ್ವಚ್ಛತೆ ಮಾಡಿ ಹೋದರು. ಕೇವಲ ಒಂದೇ ದಿನಕ್ಕೆ ಮಾತ್ರ ಈ ಕಾರ್ಯ ಸೀಮಿತವಾಗಿತ್ತು. ಸೈಟ್ ಗಳಲ್ಲಿ ಗಲೀಜು ಜಾಸ್ತಿಯಾಗಿದೆ. ಬಂದ ಪುಟ್ಟ ಹೋದ ಪುಟ್ಟ ಎಂಬ0ತೆ ಆರಂಭಿಸಿ ಹಾಗೆಯೇ ನಿಲ್ಲಿಸಿದ್ದಾರೆ. ದಿನೇ ದಿನೇ ಸೈಟ್ ಗಳಲ್ಲಿ ತ್ಯಾಜ್ಯ, ಕಸ ಹೆಚ್ಚಾಗುತ್ತಿದೆ. ನಿವೇಶನಗಳನ್ನು ಸ್ವಚ್ಚ ಮಾಡಿ ಮಾಲೀಕರಿಂದ ಪಾಲಿಕೆಗೆ ಕಂದಾಯ ಪಾವತಿಸುವಂತೆ ಮಾಡಲು ಮುಂದಾಗಿದ್ದ ಬಿಜೆಪಿಯವರು ಯಾಕೆ ಮುಂದುವರಿಸಿಲ್ಲ. ಈ ಯೋಜನೆ ಅಲ್ಲಿಗೆ ಯಾಕೆ ನಿಂತದ್ದು. ಬರೀ ಅರ್ಧಂಬರ್ಧ ಕೆಲಸಗಳನ್ನು ಮಾಡಿ ನಗರದ ಅಂದ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರಲ್ಲದೇ, ಕನ್ನಡದ ನಾಮಫಲಕ ಹಾಕುವುದಾಗಿ ಹೇಳಿದ್ದರೂ ಈ ಕಾರ್ಯ ಫೋಟೋಗಷ್ಟೇ ಸೀಮಿತವಾಗಿದೆ ಎಂದು ಆರೋಪಿಸಿದ್ದಾರೆ.
ಜಿಲ್ಲೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದವರು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು. ಅವರು ಸಚಿವರಾಗಿದ್ದಾಗ ದಾವಣಗೆರೆ ಅಭಿವೃದ್ಧಿ ಆಗಿದ್ದರ ಬಗ್ಗೆ ಪ್ರತಿಯೊಬ್ಬರು ಹೇಳುತ್ತಾರೆ. ಬಿಜೆಪಿಯವರು ಶೇ.40ರಷ್ಟು ಕಮೀಷನ್ ಪಡೆಯುವುದು ಜಗಜ್ಜಾಹೀರಾಗಿದೆ. ಮಲ್ಲಣ್ಣರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಬಿಜೆಪಿಯವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗಡಿಗುಡಾಳ್ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ಆದ ಕೆಲಸಗಳನ್ನೇ ಪೂರ್ಣಗೊಳಿಸಲು ಆಗಿಲ್ಲ. ಅಭಿವೃದ್ಧಿ ಮಾಡುವುದನ್ನು ಬಿಟ್ಟು ಮಲ್ಲಿಕಾರ್ಜುನ್ ಅವರ ವಿರುದ್ಧ ಸುಳ್ಳು ಆರೋಪ ಮಾಡುವ ಬಿಜೆಪಿ ನಾಯಕರು ಜನರಲ್ಲಿ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡಿದ್ದಾರೆ. ಅಭಿವೃದ್ಧಿ ವಿಚಾರ ಬಂದರೆ ಯಾರೂ ವಿರೋಧ ಮಾಡಲ್ಲ. ವಿರೋಧ ಇರುವುದು ಬಿಜೆಪಿಯವರ ಹಣದಾಹಕ್ಕೆ. ಜನರಿಗೆ ಇದು ಅರ್ಥವಾದರೆ ಬಿಜೆಪಿಯವರು ಏನಾಗುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಮಹಾನಗರ ಪಾಲಿಕೆಯ 28, 37 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ಆಮೀಷಕ್ಕೆ ಒಳಗಾಗಿ ಪಕ್ಷ ಬಿಟ್ಟು ಹೋದವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಪಾಲಿಕೆಯಲ್ಲಿ ಆಪರೇಷನ್ ಕಮಲ ಮಾಡುವ ಮೂಲಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಬಿಜೆಪಿಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
garudavoice21@gmail.com 9740365719