ದಾವಣಗೆರೆ ಜಿಲ್ಲೆಯಾದ್ಯಂತ ಭಾರಿ ಮಳೆ.! ಮೇ.16 ರ ಮಳೆಗೆ 55.16 ಲಕ್ಷ ನಷ್ಟ

heavy rain in Davanagere

ದಾವಣಗೆರೆ : ದಾವಣಗೆರೆ ಜಿಲ್ಲೆ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಜಿಟಿಜಿಟಿ ಮಳೆ ಮುಂದುವರೆದಿದೆ. ಜಿಲ್ಲೆಯ ಅರೇಹಳ್ಳಿ – ಕದರನಹಳ್ಳಿ, ಮತ್ತಿ, ತ್ಯಾವಣಿಗೆ, ಕಾರಿಗನೂರು, ಕುಕ್ಕವಾಡ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮಳೆ ಜಿನುಗುವುದು ಮುಂದುವರೆದಿದೆ. ಅರೇಹಳ್ಳಿ – ಕದರನಹಳ್ಳಿ ಸೇರಿದಂತೆ ಇನ್ನಿತರೇ ಹಲವು ಗ್ರಾಮಗಳಲ್ಲಿ ರಾತ್ರಿ 2 ಗಂಟೆಯಿ0ದ ಆರಂಭವಾದ ಮಳೆ ಇನ್ನು ಮುಂದುವರೆಯುತ್ತಲೇ ಇತ್ತು. ಮಳೆ ಜಿನುಗುವುದರ ಜೊತೆಗೆ ತಂಪಾದ ವಾತಾವರಣವಿದ್ದು, ಕೆಲಸ ಕಾರ್ಯಗಳಿಗೆ ಹೋಗುವ ಜನ, ಶಾಲೆಗೆ ಹೋಗುವ ಮಕ್ಕಳು ಇತರೆ ಕೆಲಸಗಳಿಗೆ ಹೋಗುವ ಜನ ಮಳೆಯಲ್ಲಿಯೇ ಕೆಲಸ ಕಾರ್ಯಗಳಿಗೆ ಧಾವಿಸುತ್ತಿದ್ದರು.

ಮಧ್ಯ ಕೇರಳ ಕಡಲ ತೀರದಲ್ಲಿ ವಾಯುಭಾರ ಕುಸಿತದಂತಹ ತಿರುಗುವಿಕೆ ಉಂಟಾದ ಕಾರಣ ಕೇರಳದ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಇದರ ಪ್ರಭಾವದಿಂದ ದಕ್ಷಿಣ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಬೆಂಗಳೂರು, ರಾಮನಗರ, ತುಮಕೂರು, ಉತ್ತರ ಕನ್ನಡ, ಹಾಸನ, ಕೊಡಗು, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಶಿವಮೊಗ್ಗ ದಾವಣಗೆರೆ, ಚಿತ್ರದುರ್ಗ, ಪಾವಗಢ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ.

ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ ವಿಜಯಪುರ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಬೀದರ್ ಹಾಗೂ ಗುಲ್ಬರ್ಗ ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇರುವುದಾಗಿ ಹವಮಾನ ಇಲಾಖೆ ವರದಿಯಿಂದ ತಿಳಿದುಬಂದಿದೆ. ಈ ವಾತಾವರಣವು ಮೇ. 19ರ ತನಕ ಇರಲಿದ್ದು ಆಮೇಲೆ ಕರಾವಳಿ ಸೇರಿದಂತೆ ರಾಜ್ಯದಲ್ಲಿ ಮಳೆ ಕಡಿಮೆ ಆಗುವ ಮುನ್ಸೂಚನೆ ಇದೆ ಹಾಗೂ ಈಗಿನ ಈ ವಿದ್ಯಮಾನದಿಂದ ಮತ್ತೆ ಮುಂಗಾರು ಆರಂಭವಾಗುವ ಸಮಯ ವ್ಯತ್ಯಾಸವಾಗುವ ಸಾಧ್ಯತೆ ಎನ್ನಲಾಗಿದೆ.

ದಾವಣಗೆರೆಯಲ್ಲಿ ಮಳೆಯಿಂದ 55.16 ಲಕ್ಷ ರೂ.ನಷ್ಟ:
ದಾವಣಗೆರೆ ಜಿಲ್ಲೆಯಲ್ಲಿ ಮೇ.16 ರಂದು 24.9 ಮಿ.ಮೀ. ಸರಾಸರಿ ಮಳೆಯಾಗಿದ್ದು, 55.16 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿ 27.3 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 24.7, ಹರಿಹರದಲ್ಲಿ 30.6 ಮಿ.ಮೀ, ಹೊನ್ನಾಳಿ 28.0 ಮಿ.ಮೀ ಮಳೆಯಾಗಿದೆ. ಜಗಳೂರು 8.5 ಮಿ.ಮೀ, ನ್ಯಾಮತಿಯಲ್ಲಿ 48.8 ಮಿ.ಮೀ ಮಳೆೆಯಾಗಿದೆ.
ದಾವಣಗೆರೆ ತಾಲ್ಲೂಕಿನ ವ್ಯಾಪ್ತಿಯಲ್ಲಿ 02 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ಅಂದಾಜು ರೂ. 60 ಸಾವಿರ ಮತ್ತು 205-00 ಎಕರೆ ಭತ್ತದ ಬೆಳೆ ಹಾಗೂ 20 ಗುಂಟೆ ಅಡಿಕೆ ಬೆಳೆ ಹಾನಿಯಾಗಿದ್ದು, ರೂ.4.40 ಲಕ್ಷ, ಒಂದು ಜಾನುವಾರು ಮೃತಪಟ್ಟಿದ್ದು ರೂ.30 ಸಾವಿರ ಸೇರಿ ಒಟ್ಟು ರೂ.5.30 ಲಕ್ಷ ನಷ್ಟ ಸಂಭವಿಸಿದೆ. ಹರಿಹರ ತಾಲ್ಲೂಕಿನ ವ್ಯಾಪ್ತಿಯಲ್ಲಿ 05 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ಅಂದಾಜು ರೂ 1.10 ಲಕ್ಷ ಮತ್ತು 285-00 ಎಕರೆ ಭತ್ತದ ಬೆಳೆ ಮತ್ತು 1 ಎಕರೆ ಬಾಳೆ ಬೆಳೆ ಹಾನಿಯಾಗಿದ್ದು, ರೂ.17.61 ಲಕ್ಷ, ಒಂದು ಕುರಿ ಮೃತಪಟ್ಟಿದ್ದು ರೂ. 5 ಸಾವಿರ ಸೇರಿ ಒಟ್ಟು ರೂ.18.76 ಲಕ್ಷ ನಷ್ಟ ಸಂಭವಿಸಿದೆ.

ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ಹಾನಿಯಾಗಿದ್ದು, ಅಂದಾಜು ರೂ 5.00 ಲಕ್ಷ, 40 ಎಕರೆ ಭತ್ತದ ಬೆಳೆ ಹಾಗೂ 16 ಎಕರೆ ಭತ್ತ ಮತ್ತು ಅಡಿಕೆ ಬೆಳೆ ಹಾನಿಯಾಗಿದ್ದು, ಒಟ್ಟು ರೂ.18.20 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಪಕ್ಕಾ ಮನೆ ಭಾಗಶ: ಹಾನಿಯಾಗಿದ್ದು, ರೂ. 1.00 ಲಕ್ಷ ಹಾಗೂ 1 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ರೂ. 50 ಸಾವಿರ ಅಂದಾಜು ನಷ್ಟ ಸಂಭವಿಸಿರುತ್ತದೆ. 1 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, ರೂ. 50 ಸಾವಿರ, ಒಟ್ಟು 2.00 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 2 ಕಚ್ಚಾ ಮನೆ ಭಾಗಶ: ಹಾನಿಯಾಗಿದ್ದು, ರೂ. 1.00 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. 6.30 ಎಕರೆ ಪಪ್ಪಾಯಿ ಬೆಳೆ, 3.00 ಎಕರೆ ಎಲೆಬಳ್ಳಿ, 2.00 ಎಕರೆ ಟೋಮಾಟೋ ಹಾನಿಯಾಗಿದ್ದು, ರೂ.50 ಸಾವಿರ ಸೇರಿ, ಒಟ್ಟು 10.90 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಜಿಲ್ಲೆಯಲ್ಲಿ ಒಟ್ಟಾರೆ ರೂ.55.16 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!