ಜಮೀನು ಖರೀದಿ ಪ್ರಕ್ರಿಯೆ ಪ್ರಾರಂಭಿಸದಿದ್ದರೆ ಜಮೀನು ಮಾರಾಟ ಮಾಡಲ್ಲ! ದೂಡಾ ಇಲಾಖೆ ರೈತರ ಗಡುವು

ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ದೂಡಾ ಇಲಾಖೆ ಹೊಸ ಬಡಾವಣೆ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ. ಆದರೆ ಎರಡೂವರೆ ವರ್ಷಗಳಿಂದ ರೈತರನ್ನು ಅಲೆದಾಡಿಸುತ್ತಾ ಜಮೀನು ಖರೀದಿ ಪ್ರಕ್ರಿಯೆಯನ್ನೆ ಶುರು ಮಾಡದೇ ರೈತರನ್ನ ಅಡಕತ್ತರಿಯಲ್ಲಿ ಸಿಲುಕಿಸಿದೆ. ಮೇ 31ರೊಳಗೆ ಖರೀದಿ ಪ್ರಕ್ರಿಯೆ ಶುರು ಮಾಡಬೇಕು, ಇಲ್ಲದಿದ್ದಲ್ಲಿ ರೈತರ ಜಮೀನು ಮಾರಾಟ ಮಾಡುವುದಿಲ್ಲ ಎಂದು ದೂಡಾ ಇಲಾಖೆಗೆ ರೈತರು ಅಂತಿಮ ಗಡುವು ನೀಡಿದ್ದಾರೆ.
ನಗರದ ದೂಡಾ ಕಚೇರಿಗೆ ಆಗಮಿಸಿದ ಹಳೇ ಕುಂದುವಾಡ ರೈತರು, ದೂಡಾ ಆಯುಕ್ತ ಕುಮಾರಸ್ಚಾಮಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತರು, ಹಳೇ ಕುಂದುವಾಡದಲ್ಲಿ ದೂಡಾ ಇಲಾಖೆ ಸುಮಾರು 53.19 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲು ತಯಾರಿ ನಡೆಸಿದೆ. ಈ ಪ್ರಕ್ರಿಯೆ ಸುಮಾರು ಎರಡುವರೆ ವರ್ಷದಿಂದ ನಡೆಯುತ್ತಲೇ ಇದೆ. ಮೊದಲು ರೈತರನ್ನು ಆಹ್ವಾನಿಸದೇ ದರ ನಿಗದಿ ಮಾಡಿ ವಿವಾದ ಸೃಷ್ಟಿಸಿತ್ತು. 53 ಎಕರೆ ಜಮೀನನ್ನೆ ಖರೀದಿ ಮಾಡಲು ಆಗುತ್ತಿಲ್ಲ, 53 ಎಕರೆ ಪ್ರದೇಶದ ಸುತ್ತಾಮುತ್ತಾ ಇರುವ 150 ಎಕರೆಯನ್ನ ಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಪ್ರಕಟಣೆ ಹೊರಡಿಸುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿತ್ತು. ಅದಾದ ಬಳಿಕ ರೈತರನ್ನು ಮನವರಿಕೆ ಮಾಡಿ ಬಳಿಕ ನಾಲ್ಕು ತಿಂಗಳ ಹಿಂದೆ ಡಿಸಿ ಮಹಾಂತೇಶ್ ಬೀಳಗಿಯವರ ಅಧ್ಯಕ್ಷತೆಯಲ್ಲಿ ಮರು ಸಭೆ ಕರೆದು ಒಂದು ಎಕರೆಗೆ 1.28 ಕೋಟಿ ರೂ. ಹಾಗೂ ಸರ್ಕಾರಿ ದರದಲ್ಲಿ ಒಂದು ನಿವೇಶನ ನೀಡಲು ರೈತರು ಹಾಗೂ ದೂಡಾ ಇಲಾಖೆ ನಡುವೆ ಅಂತಿಮ ಒಪ್ಪಂದ ನಡೆದಿತ್ತು. ಈ ವೇಳೆ ಎರಡೇ ತಿಂಗಳಲ್ಲಿ ಜಮೀನು ಖರೀದಿ ಮಾಡುತ್ತೇವೆ ಎಂದು ದೂಡಾ ಸಮಯ ಕೇಳಿತ್ತು. ಆದರೆ ನಾಲ್ಕು ತಿಂಗಳು ಕಳೆದರು ಖರೀದಿ ಪ್ರಕ್ರಿಯೆಯನ್ನೆ ಶುರು ಮಾಡಿಲ್ಲ, ಇತ್ತ ನಮ್ಮ ಜಮೀನು ನಮಗೆ ಬಿಟ್ಟುಕೊಡಿ ಎಂದರು ಬಿಡುತ್ತಿಲ್ಲ, ಎರಡುವರೆ ವರ್ಷದಿಂದ ರೈತರನ್ನು ಅಲೆದಾಡಿಸುತ್ತಾ ಮೂಗಿಗೆ ತುಪ್ಪ ಸವರುವ ಕೆಲಸವನ್ನು ದೂಡಾ ಇಲಾಖೆ ಮಾಡುತ್ತಿದೆ ಎಂದು ರೈತರು ದೂರಿದ್ದಾರೆ.
ಕೆಲವು ರೈತರು ಸಾಲಸೋಲಾ ಮಾಡಿ ಸಂಕಷ್ಟದಲ್ಲಿದ್ದಾರೆ. ಇನ್ನೂ ಕೆಲವರು ಜಮೀನು ಬೇರೆಯವರಿಗೆ ಮಾರಾಟ ಮಾಡಲಾಗದ ಸ್ಥಿತಿಯಲ್ಲಿದ್ದಾರೆ, ಇಲ್ಲಿ ಜಮೀನು ಮಾರಾಟ ಮಾಡಿ ಬೇರೆಡೆ ಜಮೀನು ಖರೀದಿಸಲು ಮುಂದಾದರೆ ಈಗಾಗಲೇ ಬೇರೆಡೆ ಜಮೀನು ದರ ಗಗನಕ್ಕೆ ಏರಿದೆ, ಇಲ್ಲಿ ಮಾರಾಟ ಮಾಡಿ ದುಬಾರಿ ಬೆಲೆಗೆ ಬೇರೆಡೆಗೆ ಜಮೀನು ಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕೆಲವು ರೈತರು ಗೊಂದಲಕ್ಕೆ ಈಡಾಗಿದ್ದಾರೆ. ಕೆಲವರು ಜಮೀನು ಕೊಡಲ್ಲ ಎಂದರೂ ಸಹ ಈಗಾಗಲೇ ಬಡಾವಣೆ ನಿರ್ಮಾಣಕ್ಕೆ ಸೇರ್ಪಡೆ ಮಾಡಿ ರೈತರಿಗೆ ದೂಡಾ ತೊಂದರೆ ನೀಡುತ್ತಿದೆ. ಈ ಹಿನ್ನಲೆ ಇದೇ ಮೇ.31 ರೊಳಗೆ ಜಮೀನು ಖರೀದಿ ಪ್ರಕ್ರಿಯೆ ಶುರು ಮಾಡಬೇಕು, ದಿನಾಂಕ ಮೀರಿದರೆ ಯಾವುದೇ ಕಾರಣಕ್ಕೂ ಜಮೀನು ಮಾರಾಟ ಮಾಡುವುದಿಲ್ಲ. ದೂಡಾ ಎಲ್ಲಾ ಜಮೀನುಗಳಿಗೆ ನಿರಪೇಕ್ಷಣ ಪತ್ರ(ಎನ್ಒಸಿ) ನೀಡಿ ನಮ್ಮ ಜಮೀನುಗಳಿಗೆ ಮುಕ್ತಿ ನೀಡಿ ಎಂದು ರೈತರು ಅಂತಿಮ ಗಡುವು ನೀಡಿದ್ದಾರೆ.
ಈ ಸಂದರ್ಭದಲ್ಲಿ ಹರಿಹರ ಶಾಸಕ ಎಸ್. ರಾಮಪ್ಪ ಮಾತನಾಡಿ, ಜಮೀನು ಖರೀದಿ ಮಾಡಲು ನಿಮಗೆ ಆಗದಿದ್ದರೆ ರೈತರಿಗೆ ಅಲೆದಾಡಿಸಿ ಯಾಕೆ ತೊಂದರೆ ನೀಡುತ್ತೀರಿ, ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ ಎಂದು ಆಯುಕ್ತರಿಗೆ ಸೂಚನೆ ನೀಡಿದರು. ರೈತ ಮುಖಂಡರಾದ ಮಿಟ್ಲಕಟ್ಟೆ ಚಂದ್ರಪ್ಪ, ನರಸಪ್ಪರ ಶಿವಪ್ಪ, ಹನುಮಂತಪ್ಪ, ಜಯ್ಯಪ್ಪ, ದೇವರಾಜ್, ರೇವಣಪ್ಪ, ಮಧುನಾಗರಾಜ್, ಆನಂದಪ್ಪ, ಜೆ. ಮಾರುತಿ ಸೇರಿದಂತೆ ಹಲವು ರೈತರು ಇದ್ದರು.