ಕುವೆಂಪು ಅವರು ಬರೆದ ನಾಡಗೀತೆಗೆ ಅವಮಾನಿಸಿದವರ ವಿರುದ್ದ ಕ್ರಮಕೈಗೊಳ್ಳಲು ಮನವಿ

ದಾವಣಗೆರೆ: 2017ರಲ್ಲಿ ರೋಹಿತ್ ಚಕ್ರತೀರ್ಥ ಎನ್ನುವ ವ್ಯಕ್ತಿ ನಾಡಿನ ಜನಮಾನಸದ ಹೃದಯಗೀತೆಯಾಗಿರುವ ನಾಡಗೀತೆಯನ್ನು ಗೇಲಿ ಮಾಡಿ ವಿಕೃತಗೊಳಿಸಿ, ನಾಡಗೀತೆಗೆ ಅಪಾರ ಅವಮಾನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಇಂತಹ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ, ವಕೀಲರಾದ ಕೆ.ಎನ್. ಜಗದೀಶ್, ಸೂರ್ಯ ಮುಕುಂದರಾಜ್, ಹರಿರಾಮ್ ಮೊದಲಾದವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿ ನಾಡಿನ ಖ್ಯಾತ ಸಾಹಿತಿಗಳನ್ನು ಕಡೆಗಣಿಸಿ ಸ್ಥಾಪಿತ ಹಿತಾಸಕ್ತಿ ಬರಹಗಳನ್ನು ಸೇರಿಸಿದ ಕಾರಣ ವಿವಾದಕ್ಕೆ ಕಾರಣವಾಗಿದೆ. ನಾಲ್ಕನೇ ತರಗತಿಯ ಪಠ್ಯ ಪುಸ್ತಕದಲ್ಲಿ ರಾಷ್ಟ್ರಗೀತೆ ಕುವೆಂಪು ಅವರ ಪರಿಚಯವನ್ನು ಅವಮಾನಕಾರಿ ರೀತಿಯಲ್ಲಿ ಪ್ರಕಟಿಸಿರುವುದು ನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ 2017ರಲ್ಲಿ ನಾಡಗೀತೆಯನ್ನು ಅವಮಾನಿಸಿದ ರೋಹಿತ್ ಚಕ್ರತೀರ್ಥರ ಈ ವಿಕೃತ ಬರಹವನ್ನು ಸಾಮಾಜಿಕ ಜಾಲತಾಣವಲ್ಲದೆ ಇತರ ಮಾಧ್ಯಮಗಳಲ್ಲೂ ಈಗ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಇದು ಕುವೆಂಪು ಅವರ ಗೌರವಕ್ಕೆ ಧಕ್ಕೆ ತರುವ ಜೊತೆಗೆ ಅವರ ಅಪಾರ ಅಭಿಮಾನಿ ವರ್ಗದ ಭಾವನೆಗಳಿಗೆ ನೋವುಂಟು ಮಾಡಿದೆ.
“ಜಯ ಭಾರತ ಜನನಿಯ ತನುಜಾತೆ” ಎಂದು ಆರಂಭವಾಗುವ ನಾಡಗೀತೆಯನ್ನು ಬರೆದವರು ರಾಷ್ಟçಕವಿ ಕುವೆಂಪುರವರು, ಈ ನಾಡಗೀತೆಯಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ, ಜನಜೀವನ ಮತ್ತು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಅತ್ಯಂತ ಅಭಿಮಾನದಿಂದ ಹಾಡಿ ನಲಿಯುವ ಗೀತೆಯಿದು. ಇದೇ ಕಾರಣಕ್ಕೇ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡಗೀತೆಯಾಗಿ ಅಂಗೀಕರಿಸಿದೆ. ಈ ನಾಡಗೀತೆಯನ್ನು ನಾಡಿನ ಸಕಲರೂ ಅತ್ಯಂತ ಅಭಿಮಾನ, ಗೌರವಾದರಗಳೊಂದಿಗೆ ಹಾಡುತ್ತಾರೆ. ಇಂತಹ ನಾಡಗೀತೆಗೆ ರೋಹಿತ್ ಚಕ್ರತೀರ್ಥ ಎಂಬಾತ ಅವಮಾನ ಮಾಡಿ ಅಸಡ್ಡೆ, ಅಸಹನೆ, ಗೇಲಿಗೆ ಒಳಪಡಿಸಿರುವುದು ಕನ್ನಡಿಗರಿಗೆ ಮತ್ತು ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ. ಈ ವಿಕೃತ ಬರಹದಿಂದ ಇತರೆ ರಾಜ್ಯಗಳ ಮುಂದೆ ಕನ್ನಡದ ಜನತೆ ತಲೆ ಎತ್ತದಂತಾಗಿದೆ.
ಈತನ ಬರಹಕ್ಕೆ ಲಕ್ಷ್ಮಣ ಆಕಾಶೆ ಕುಮ್ಮಕ್ಕು ನೀಡಿರುವುದು ಬರಹದಲ್ಲಿ ವ್ಯಕ್ತವಾಗಿದೆ. ರಾಷ್ಟ್ರಗೀತೆ ಕುವೆಂಪು ಅವರು ನಿಧನರಾಗಿ ಸುಮಾರು ನಾಲ್ಕು ದಶಕಗಳಾಯಿತು. ಇವರ ನಿಧನದ ಇಷ್ಟು ದೀರ್ಘ ಕಾಲದ ನಂತರ ಕುವೆಂಪು ಅವರನ್ನು ಅತ್ಯಂತ ಅಮಾನುಷ ಭಾಷೆಯಲ್ಲಿ ನಿಂದಿಸಲಾಗಿದೆ. ಕುವೆಂಪು ಅವರ ಸಾಹಿತ್ಯವನ್ನು ಓದಿಕೊಂಡು ಬೆಳೆದ ನಮ್ಮ ನಾಡಿನ ಪ್ರತಿಯೊಬ್ಬರಿಗು ಇದರಿಂದ ಬಹಳ ನೋವಾಗಿದೆ. ಹಾಗಾಗಿ ರಾಷ್ಟ್ರಗೀತೆ ಕುವೆಂಪು ಅವರು ಬರೆದ ನಾಡಗೀತೆಯನ್ನು ಅವಮಾನಿಸಿದ ಇವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
garudavoice21@gmal.com 9740365719