ಹಿರೇಮೇಗಳಗೆರೆ: ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರ ಪರದಾಟ

ಹರಪನಹಳ್ಳಿ : ಬಿದ್ದ ಮಳೆಗೆ ರಸ್ತೆಗಳೆಲ್ಲ ತಗ್ಗು ಗುಂಡಿಗಳಾಗಿ ಮಾರ್ಪಾಡಾಗಿದ್ದು, ರಸ್ತೆಯಲ್ಲಿರುವ ತಗ್ಗು ಗುಂಡಿಗಳನ್ನು ತಪ್ಪಿಸುವ ಸಲುವಾಗಿ ಹೋಗಿ ವಾಹನಗಳು ಅಪಘಾತವಾಗುವ ಸಂಭವ ಹೆಚ್ಚಿದೆ. ಇದಕ್ಕೆ ಪುಷ್ಠ ಕೊಡುವಂತಹ ಘಟನೆ ದಾವಣಗೆರೆ ಸಮೀಪದ ಹರಪನಹಳ್ಳಿ ತಾಲೂಕಿನ ಹಿರೇಮೆಗಳಗೆರೆ ಗ್ರಾಮದ ಸಮೀಪ ನಡೆದಿದೆ.
ಉಚ್ಚಂಗಿದುರ್ಗದ ಹಾಲಮ್ಮನ ತೋಪಿನಿಂದ ಹಿರೇಮೆಗಳಗೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಕ್ಕಪಕ್ಕದ ಮಣ್ಣು ಕುಸಿದಿದ್ದು, ಯಾವ ಸಂದರ್ಭದಲ್ಲಿ ಅಪಘಾತಗಳು ಜರುಗುತ್ತದೆ ಎಂದು ಊಹಿಸಲು ಕಷ್ಟವಾಗುವಂತಹ ಪರಿಸ್ಥಿತಿ ಇದೆ. ಜಲ್ಲಿಕಲ್ಲುಗಳನ್ನು ಹೊತ್ತೋಯ್ಯತ್ತಿರುವ ಟ್ರ್ಯಾಕ್ಟರ್ವೊಂದು ರಸ್ತೆ ಮಧ್ಯೆ ಬಿದ್ದಿರುವ ದೊಡ್ಡ ಗುಂಡಿಯನ್ನು ತಪ್ಪಿಸಿ ರಸ್ತೆ ಎಡಭಾಗಕ್ಕೆ ಚಲಾಯಿಸಿದ್ದು, ರಸ್ತೆ ಕೊನೆಭಾಗದ ಮಣ್ಣು ಕುಸಿದು ಹಾಗೂ ಟ್ರ್ಯಾಕ್ಟರ್ ಚಕ್ರ ಜಾರಿ ಎಡಭಾಗಕ್ಕೆ ಸಂಪೂರ್ಣ ವಾಲಿದೆ. ಅದೃಷ್ಟಾವಶಾತ್ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ. ಅಷ್ಟೇಅಲ್ಲದೆ ಮುಂಭಾಗದಿ0ದ ಲಾರಿಯೊಂದು ಬರುತ್ತಿದ್ದು ರಸ್ತೆಯಲ್ಲಿ ಬಿದ್ದ ಗುಂಡಿ ತಪ್ಪಿಸಲು ಅದು ಸಹ ಹೆಣಗಾಡಿದೆ.
ಈ ರೀತಿಯ ಘಟನೆಗಳು ಆಗಾಗ ಇಲ್ಲಿ ನಡೆಯುತ್ತಲೇ ಇರುತ್ತದೆ ಎಂದು ಹೇಳಲಾಗುತ್ತಿದ್ದು, ಯಾವಾಗ ಯಾವ ವಾಹನ ಅಪಘಾತವಾಗುತ್ತದೆಯೋ ಎಂದು ಹೇಳಲಾಗುವುದಿಲ್ಲ. ಇದೇ ಭಯದಲ್ಲಿ ವಾಹನ ಸವಾರರು ಓಡಾಡುತ್ತಿದ್ದಾರೆ. ಈ ಕುರಿತು ಹರಪನಹಳ್ಳಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮಣ್ಣು ಕುಸಿದಿರುವ ರಸ್ತೆಗಳನ್ನು ಸರಿಪಡಿಸಿ ಗುಂಡಿಗಳನ್ನು ಮುಚ್ಚಬೇಕು ಎನ್ನುವುದು ಗ್ರಾಮಸ್ಥರು ಹಾಗೂ ವಾಹನಸವಾರರ ಮನವಿಯಾಗಿದೆ.
garudavoice21@gmail.com 9740365719