“ಅಂತರಂಗ-ಬಹಿರಂಗ ಶುದ್ದಿಯೇ ಧರ್ಮ ” : ಗಣೇಶಾಚಾರ್. ಆರ್.

ದಾವಣಗೆರೆ: ವಚನ ಎಂದರೆ ಮಾತು ಒಬ್ಬೊಬ್ಬರ ಮಾತಿಗೆ ಶಕ್ತಿ, ಬೆಳಕು ಇರುತ್ತದೆ. ಮಾತು ಹೇಗಿರಬೇಕೆಂಬುದನ್ನು ವಚನ ಸಾಹಿತ್ಯ ತಿಳಿಸಿಕೊಡುತ್ತದೆ. ಒಂದು ಕಾಲದಲ್ಲಿ ಧರ್ಮ ಎಂಬುದು ಕಬ್ಬಿಣದ ಕಡಲೆಯಂತ್ತಿತ್ತು.ಅಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೂ ಅದರ ಅನುಸರಣೆ ಸುಲಭವಾಗುವಂತೆ ಮಾಡಿದವರು ಬಸವಣ್ಣನವರು. ಯಾವುದು ನಮ್ಮನ್ನು ಕಷ್ಟದಿಂದ ಪಾರು ಮಾಡುತ್ತದೆಯೋ ಅದೇ ಧರ್ಮ. ಅಂತರಂಗ ಶುದ್ಧಿ ಬಹಿರಂಗ ಶುದ್ಧಿ ಯೇ ಧರ್ಮ ಎಂದು ಕುರ್ಕಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರು ತಿಳಿಸಿದರು.
ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ಕಮಲಮ್ಮ ಮತ್ತು ಬಿ ವಾಮದೇವಪ್ಪ ಇವರು ಸ್ಥಾಪಿಸಿದ”ಹಿರೇತೊಗಲೇರಿ ಶ್ರೀಮತಿ ಗಂಗಮ್ಮ ಬಸಾಪುರದ ಬಸಪ್ಪ ಸ್ಮರಣಾರ್ಥ ದತ್ತಿ ” ಕಾರ್ಯಕ್ರಮವನ್ನು ಹಿರೇತೊಗಲೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದಲ್ಲಿ ಮೌಲ್ಯಗಳು ಎನ್ನುವ ವಿಷಯವನ್ನು ಕುರಿತಂತೆ ಉಪನ್ಯಾಸ ನೀಡುತ್ತಾ ಮೇಲಿನಂತೆ ಆರ್ ಗಣೇಶಾಚಾರ್ ಅವರು ನುಡಿದರು.
ದಯವಿಲ್ಲದ ಧರ್ಮ ಅದಾವುದಯ್ಯ ದಯವೇ ಬೇಕು ಸಕಲ ಪ್ರಾಣಿಗಳಲ್ಲಿ. ದಯೆ ಎಲ್ಲದನ್ನು ಮೀರಿದ ಶಕ್ತಿ ಅದಕ್ಕಿದೆ. ಇದನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಬೀತುಪಡಿಸಿದ್ದಾರೆ. ದಯೆಗೆ ಯಾವುದೇ ಜಾತಿ,ಜನಾಂಗ,ಧರ್ಮ, ಭಾಷೆಯ ಎಲ್ಲೆಯಿಲ್ಲ. ಇದು ಅದೆಲ್ಲವನ್ನೂ ಮೀರಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ಇದನ್ನು ಸಾರಿಸಾರಿ ಹೇಳಿದ್ದಾರೆ ಇಂದಿಗೂ ಅವರ ವಚನಗಳು ಜೀವಂತವಾಗಿದೆ ಎಂದರೆ ಅದಕ್ಕಿರುವ ಶಕ್ತಿಗೆ ಕಾರಣ. ಬಸವಣ್ಣನವರ ಸರಳ ವಚನಗಳನ್ನು ಪಾಲಿಸುವುದರ ಮೂಲಕ ನಮ್ಮ ಜೀವನವನ್ನು ಹಸನು ಮಾಡಿಕೊಳ್ಳಬೇಕು ಎಂದು ಕರೆಕೊಟ್ಟರು. ಮುಂದುವರೆದು ಮಾತನಾಡುತ್ತ ಮೌಲ್ಯ ಎಂದರೆ ಬೆಲೆಯುಳ್ಳದ್ದು.ಯಾವುದು ನಿರಂತರವಾದದ್ದು, ಸಾರ್ವಕಾಲಿಕವಾದದ್ದು ಅದೇ ಮೌಲ್ಯ. ಸತ್ಯ ಎಂಬುದು ಒಂದು ಮೌಲ್ಯ.ಆ ಸತ್ಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ ಮಲ್ಲೇಶಿ ಅವರು ನೆರವೇರಿಸಿದರು. ಎಚ್. ಅಂಜನಪ್ಪ.ಮುಖ್ಯ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ತೊಗಲೇರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಲಕ್ಕಮ್ಮ ಇವರು ಪ್ರಾಸ್ತಾವಿಕ ನುಡಿಗಳಲ್ಲಿ ದತ್ತಿ ದಾನಿಗಳನ್ನು ಸ್ಮರಿಸಿದರು. ಆರಂಭದಲ್ಲಿ ಶಾಲಾ ಮಕ್ಕಳು ಪ್ರಾರ್ಥಿಸಿದರು, ಶಿಕ್ಷಕ ನಾಗರಾಜ್ ರವರು ಸ್ವಾಗತಿಸಿದರು, ಜೆ. ಗುರುಸಿದ್ದಪ್ಪನವರು ಕಾರ್ಯಕ್ರಮ ನಿರೂಪಿಸಿದರು. ಸಿ.ಜಿ. ಜಗದೀಶ್ ಕೂಲಂಬಿ ವಂದಿಸಿದರು.