ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ದಾವಣಗೆರೆ ಪತ್ರಕರ್ತರಿಂದ ಪ್ರತಿಭಟನೆ

WhatsApp Image 2022-07-04 at 9.30.29 PM

ದಾವಣಗೆರೆ: ಸುದ್ದಿಗಾಗಿ ತೆರಳಿದ್ದ ಖಾಸಗಿ ಸುದ್ದಿ ವಾಹಿನಿಯ ವರದಿಗಾರರು ಹಾಗೂ ವೀಡಿಯೋ ಜರ್ನಲಿಸ್ಟ್ ಮೇಲೆ ಹಾವೇರಿಯಲ್ಲಿ ನಡೆದಿರುವ ಹಲ್ಲೆ ಖಂಡಿಸಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡಸಿದ ಕೂಟದ ಸದಸ್ಯರು ಹಲ್ಲೆ ನಡೆಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ, ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು. ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಮಾತನಾಡಿ, ಸಮಾಜದ ಅಂಕು-ಡೊಂಕು ತಿದ್ದುವ, ನ್ಯಾಯಪರವಾಗಿ ಸುದ್ದಿ ಮಾಡುವ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಪತ್ರಕರ್ತರ ಮೇಲೆ ಈ ರೀತಿ ಹಲ್ಲೆ ನಡೆದಿರುವುದು ಇದೇ ಮೊದಲಲ್ಲ. ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ನೈಜ ವರದಿ ಮಾಡುವ ಪತ್ರಕರ್ತರಿಗೆ ಮೊದಲಿನಿಂದಲೂ ರಕ್ಷಣೆಯೇ ಇಲ್ಲದಂತಾಗಿದೆ ಎಂದು ವಿಷಾದಿಸಿದರು.

ಪತ್ರಕರ್ತರು ರಾಜಕಾರಣಿಗಳ, ಅಧಿಕಾರಿಗಳ, ಸಂಘ ಸಂಸ್ಥೆಗಳಲ್ಲಿರುವವರ ಭ್ರಷ್ಟಾಚಾರಗಳನ್ನು, ಹುಳಕನ್ನು ಹೊರಗೆಳೆಯುವ ಮುನ್ನ ಅವರು ಜಾಗೃತಿ ವಹಿಸಬೇಕು. ಸ್ವಯಂ ರಕ್ಷಣೆಯೊಂದಿಗೆ ಅವರು ವರದಿ ಮಾಡಬೇಕು. ತಮ್ಮ ಪ್ರಾಣಕ್ಕೆ ಎರವಾಗುವ ಸುದ್ದಿಗಳಿಂದ ಆದಷ್ಟು ಜಾಗೃತಿಯಿಂದ ಸುದ್ದಿ ಮಾಡಬೇಕೆಂದು ಸೂಚ್ಯವಾಗಿ ತಿಳಿಸಿದರು.

ಕನ್ನಡದ ಖಾಸಗಿ ಸುದ್ದಿವಾಹಿನಿಯಾಗಿರುವ ನ್ಯೂಸ್ ಫಸ್ಟ್ ವರದಿಗಾರ ಈರಯ್ಯ, ಶಿವಾನಂದ, ವಿಡಿಯೋ ಜರ್ನಲಿಸ್ಟ್ ಪ್ರಕಾಶ್ ಮೇಲೆ ವರದಿಗಾಗಿ ತೆರಳಿದ ವೇಳೆ ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ನ್ಯಾಯ ದೊರಕಿಸಿಕೊಡಬೇಕು ಹಾಗೂ ಎಲ್ಲಾ ವರದಿಗಾರರಿಗೂ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ನಾಗರಾಜ್ ಬಡದಾಳ್ ಮಾತನಾಡಿ, ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗಕ್ಕೆ ರಕ್ಷಣೆ ಇಲ್ಲದಂತಾಗಿದ್ದು, ವಸ್ತು ನಿಷ್ಠ ವರದಿ ಮಾಡುವ ವರದಿಗಾರರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದ್ದರೂ ಪತ್ರಕರ್ತರ ರಕ್ಷಣೆಗೆ ಸರಕಾರಗಳು ಮುಂದಾಗದೇ ಇರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ವೈದ್ಯರ ಮೇಲೆ ನಡೆದ ಹಲ್ಲೆಗಳನ್ನು ಹತ್ತಿಕ್ಕಿ ವೈದ್ಯರ ರಕ್ಷಣೆಗೆ ಕಾನೂನು ರೂಪಿಸಿದಂತೆ ಸರಕಾರಗಳು ಮಾಧ್ಯಮರಂಗದ ಪತ್ರಕರ್ತರ ರಕ್ಷಣೆಗಾಗಿ ಕಾನೂನು ರೂಪಿಸಬೇಕು. ಆಗ ಇಂತಹ ಹಲ್ಲೆಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕೂಟದ ಖಜಾಂಚಿ ಮಧು ಕುಂದವಾಡ, ಸದಸ್ಯರಾದ ರಮೇಶ್ ಜಹಗೀರ್‌ದಾರ್, ಸಿದ್ದಯ್ಯ, ಎಂ.ವೈ. ಸತೀಶ್, ಡಿ.ಎಂ. ಮಹೇಶ್, ಡಿ. ರಂಗನಾಥ್ ರಾವ್, ರವಿಬಾಬು, ಬಾಲಕೃಷ್ಣ ಶಿಬರ್ಲಾ, ವೀರೇಶ್, ಫಕೃದ್ದೀನ್, ವಿನಾಯಕ್ ಪೂಜಾರ್, ದೇವಿಕಾ, ತೇಜಸ್ವಿನಿ, ಕೆ.ಎನ್. ಮಲ್ಲಿಕಾರ್ಜುನ್, ಕಾವ್ಯ ಬಿ.ಕೆ., ಹನುಮಂತ ರಾವ್, ಬಸವರಾಜ್, ವಸಂತಕುಮಾರ್, ಯೋಗರಾಜ್, ಜೈಮುನಿ, ಅಣ್ಣಪ್ಪ, ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!