ಲಾರಿಗೆ ಕಾರು ಡಿಕ್ಕಿ.! ದಾವಣಗೆರೆಯ ಅಬಕಾರಿ ನಿವೃತ್ತ ಡಿಸಿ ಹಾಗೂ ಪತ್ನಿ ಸ್ಥಳದಲ್ಲಿ ಸಾವು

ಭರಮಸಾಗರ (ಚಿತ್ರದುರ್ಗ): ಬೆಂಗಳೂರಿನಲ್ಲಿ ಮೊಮ್ಮಗಳ ಜನ್ಮ ದಿನಾಚರಣೆ ಮುಗಿಸಿ, ಮಗಳನ್ನು ಅಮೆರಿಕಾಕ್ಕೆ ಕಳುಹಿಸಿ ಪುನಃ ದಾವಣಗೆರೆಗೆ ಬರುವ ವೇಳೆ ದಂಪತಿಗಳಿಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಭರಮಸಾಗರ ಸಮೀಪದ ಕಸವನಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ದಾವಣಗೆರೆ ನಿವಾಸಿ, ಮಾಜಿ ಅಬಕಾರಿ ಡಿಸಿ ಜಯರಾಮ್ ನಾಯ್ಕ್ (72), ಪತ್ನಿ ಹೇಮಾವತಿ (58) ಮೃತರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಜಯರಾಮ್ ನಾಯಕ್ ಮೂಲತಃ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದವರಾಗಿದ್ದು, ಬೆಂಗಳೂರಿನ ನೆಲಮಂಗಲ, ಧಾರವಾಡ, ದಾವಣಗೆರೆಯಲ್ಲಿ ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ದಾವಣಗೆರೆ ಆಂಜನೇಯ ಬಡಾವಣೆಯಲ್ಲಿ ತಮ್ಮ ವೃತ್ತಿ ಜೀವನ ಕಳೆಯುತ್ತಿದ್ದರು. ಹೀಗಿರುವಾಗ ಬೆಂಗಳೂರಿನ ಮಗಳ ಮನೆಯಲ್ಲಿ 10 ದಿವಸ ಇದ್ದರು. ಮೊಮ್ಮಗಳ ಬರ್ತಡೇಯನ್ನು ಕೂಡ ಅದ್ದೂರಿಯಾಗಿ ಮಾಡಿ ಮಗಳನ್ನು ಅಮೆರಿಕಾದ ವಿಮಾನ ಹತ್ತಿಸಿ, ಬೆಂಗಳೂರಿನಲ್ಲಿ ಬ್ರೇಕ್ ಫಾಸ್ಟ್ ಮುಗಿಸಿ ದಾವಣಗೆರೆಗೆ ಬರುತ್ತಿರುವ ವೇಳೆ ಮಿನಿ ಟ್ಯಾಂಕರ್ಗೆ ಹಿಂಬದಿಯಿಂದ ಢಿಕ್ಕಿ ಪಡಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಜಯರಾಮ್ನಾಯಕ್ಗೆ ನಿಶಾ ಮತ್ತು ಚೇತನ್ ಎಂಬ ಹೆಣ್ಣುಮಕ್ಕಳಿದ್ದು, ತಮ್ಮನ ಮಗ ಸಂತೋಷ್ನನ್ನು ಮನೆ ಮಗನಂತೆ ಸಾಕಿದ್ದರು. ನಿಶಾ ಅಮೆರಿಕಾದಲ್ಲಿದ್ದು ಸಾಫ್ಟ್ವೇರ್ ಎಂಜಿನಿಯುರ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಇನ್ನೊಬ ಮಗಳು ಚೇತನಾ ಬೆಂಗಳೂರಿನಲ್ಲಿ ವೈದ್ಯ ವೃತ್ತಿಯಲ್ಲಿದ್ದರು.
ಫ್ಲೈಟ್ ಹತ್ತಿಸಿದ್ದ ತಂದೆ :
ಅಮೆರಿಕಾದಲ್ಲಿನ ನಿಶಾಗೆ ಬೆಳಗ್ಗೆ 4.30ಕ್ಕೆ ಫ್ಲೈಟ್ ಇದ್ದು ಜಯರಾಮ್ನಾಯಕ್ ಮಧ್ಯರಾತ್ರಿ 1 ಗಂಟೆಗೆ ಎದ್ದಿದ್ದರು. ನಂತರ ಮಗಳನ್ನು 4.30ಕ್ಕೆ ವಿಮಾನ ಹತ್ತಿಸಿ ಮಗಳಿಗೆ ವಿಶ್ ಮಾಡಿ ದಾವಣಗೆರೆಗೆ ವಾಪಸ್ ಆಗುತ್ತಿದ್ದರು. ಆದರೆ ಅಷ್ಟೊರೊಳಗೆ ಅಪಘಾತವಾಗಿದ್ದ ಕಾರಣ ಮಗಳು ಪುನಃ ವಾಪಸ್ ಬರುತ್ತಿದ್ದರು. ಹೀಗಿರುವಾಗ ಬೆಂಗಳೂರು ಕಡೆಯಿಂದ ದಾವಣಗೆರೆ ಕಡೆ ತೆರಳುವಾಗ ಲಾರಿಗೆ ಹಿಂಬದಿಯಿಂದ ಸ್ವೀಪ್ಟ್ ಕಾರು ಡಿಕ್ಕಿಯಾಗಿದೆ. ಢಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಭರಮಸಾಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮಾಜಿ ಸಚಿವರ ಸಹೋದರ :
ಮೃತ ಜಯರಾಮ್ ನಾಯ್ಕ್ ಮಾಜಿ ಸಚಿವ ಡಾ.ಎಂ.ಶಂಕರ್ನಾಯ್ಕ್ನವರ ಸಹೋದರರಾಗಿದ್ದಾರೆ. ಮಾಜಿ ಸಚಿವರು ಜೆ.ಎಚ್.ಪಟೇಲ್ ಸಿಎಂ ಆದ ಸಂದರ್ಭದಲ್ಲಿ ವೈದ್ಯಕೀಯ ಸಚಿವರಾಗಿದ್ದರು. ಇನ್ನು ಇವರ ತಂದೆ ಮುನಿಯಾನಾಯ್ಕ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.
ಜಯರಾಮ ನಾಯ್ಕ್ ಧಾರವಾಡದಲ್ಲಿ ಅಬಕಾರಿ ಡಿಸಿಯಾಗಿದ್ದರಲ್ಲದೇ ದಾವಣಗೆರೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ನೆಲಮಂಗಲ ಸೇರಿದಂತೆ ಇತರೆಡೆ ಕೂಡ ಕೆಲಸ ಮಾಡಿದ್ದರು. ಮೃತರ ಅಂತ್ಯಕ್ರಿಯೆ ಜನ್ಮ ಭೂಮಿಯಾದ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ ನಡೆಸಲಿದ್ದಾರೆ ಎಂಬ ಮಾಹಿತಿಯನ್ನು ಕುಟುಂಬಸ್ಥರು ತಿಳಿಸಿದ್ದಾರೆ.
ನನ್ನ ತಂದೆ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸೇರಿದಂತೆ ಎಂದಿಗೂ ಡ್ರೈವರ್ನ್ನು ಕರೆದುಕೊಂಡು ಹೋಗಿಲ್ಲ. ಡ್ರೈವಿಂಗ್ ಪರ್ಪೆಕ್ಟ್ ಇತ್ತು. ಯಾವಾಗಲೂ ಒಬ್ಬರೇ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದರು. ವೇಗವಾಗಿ ಕೂಡ ಹೋಗುತ್ತಿರಲಿಲ್ಲ. ನಿಧಾನವಾಗಿಯೇ ಚಲಿಸುತ್ತಿದ್ದರು. ಟ್ಯಾಂಕರ್ ಲಾರಿ ಸಡನ್ ಆಗಿ ಬ್ರೇಕ್ ಹಾಕಿದ್ದ ಕಾರಣ ಕಾರು ಹಿಂಬದಿಯಿಂದ ಗುದ್ದಿದೆ ಎಂಬ ಅನುಮಾನವಿದೆ. ಎಂಬ ಅನುಮಾನವಿದೆ ಎಂದು ಜಯರಾಮ್ ನಾಯ್ಕ್ ಅವರ ಸಾಕುಮಗ ಸಂತೋಷ ವ್ಯಕ್ತಪಡಿಸಿದ್ದಾರೆ