ದಾವಣಗೆರೆಯ ಜನತಾ ವಿದ್ಯಾಲಯದ ಗಣಿತ ಶಿಕ್ಷಕ ಎಚ್.ಎಸ್.ಉಮೇಶ್ವರ್ ರಿಗೆ ಸನ್ಮಾನ

ದಾವಣಗೆರೆ: ಶಿಲ್ಪಿ ಒಂದು ಕಲ್ಲನ್ನು ಕೆತ್ತಿ ಹೇಗೆ ದೇವರ ರೂಪ ನೀಡುತ್ತಾನೋ ಹಾಗೆಯೇ, ಮಕ್ಕಳು ರಾಷ್ಟ್ರದ ಉತ್ತಮ ಪ್ರಜೆಗಳಾಗಲಿ ಎಂದು ಶಿಕ್ಷಕರು ಒಬ್ಬ ಶಿಲ್ಪಿಯಾಗಿ ಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆಯುತ್ತಾರೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಎಕಬೋಟೆ ತಿಳಿಸಿದರು.
ನಗರದ ಹೊಂಡದ ಸರ್ಕಲ್ ಬಳಿ ಇರುವ ಜನತಾ ವಿದ್ಯಾಲಯದಲ್ಲಿ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯಿಂದ ಆಯೋಜಿಸಿದ ಶಿಕ್ಷಕರ ದಿನಾಚರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಅತೀ ಉನ್ನತವಾದ ವೃತ್ತಿಯಾಗಿದೆ. ಗೌರವ ಉತ್ತಮ ಸಂಸ್ಕಾರ, ನಡೆ, ನುಡಿ, ಪ್ರಾಮಾಣಿಕತೆ ಇದ್ದಾಗ ಮಾತ್ರ ಸಿಗುತ್ತದೆ. ಮಕ್ಕಳ ಮುಂದಿನ ಜೀವನ ರೂಪಿಸಿಕೊಳ್ಳಲು ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದರು.
ಪ್ರತಿಯೊಬ್ಬರಿಗೂ ವರ್ಷದಲ್ಲಿ ಹುಟ್ಟು ಹಬ್ಬ, ಮದುವೆ, ಸಂಭ್ರಮಾಚರಣೆ ಹೇಗೆಯೋ ಹಾಗೆ ಶಿಕ್ಷಕರಿಗೂ ಕೂಡಾ ಈ ಸೆ. 5 ಸುದಿನವಾಗಿದೆ. ಮಕ್ಕಳಿಗೆ ಅಕ್ಷರ ಕಲಿಸಿ ಜೀವನದ ಪಾಠ ಕಲಿಸುವ ಶಿಕ್ಷಕರನ್ನು ಇಂದು ಸ್ಮರಿಸುವ ದಿನವಾಗಿದ್ದು, ಡಾ.ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮದಿನವಾದ ಇಂದು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಶಿಕ್ಷಕರಿಗೆ ವೇತನ ಕಡಿಮೆ ಇರಬಹುದು ಆದರೆ ಅವರಿಗೆ ಇರುವ ಗೌರವಕ್ಕೆ ಬೆಲೆ ಕಟ್ಟಲಾಗದು. ನಮ್ಮ ಸರ್ಕಾರವು ಉತ್ತಮ ಶಿಕ್ಷಕರ ಸೇವೆಯನ್ನು ಗುರುತಿಸಿ ಪ್ರತಿ ವರ್ಷ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಸರ್ಕಾರ ಇಂತಹ ಕೆಲಸ ಮಾಡುವುದರ ಜೊತೆಗೆ ಇಂತಹ ಸಂಘ ಸಂಸ್ಥೆಗಳು ಕೂಡಾ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಇನ್ನೂ ಮಾಡಬೇಕು ಎಂದು ತಿಳಿಸಿದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಮಾತನಾಡಿ, ಒಬ್ಬ ಶಿಕ್ಷಕರಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಪ್ರತಿಭೆ ಮೂಲಕ ರಾಷ್ಟçಪತಿಗಳಾಗಿ ಸೇವೆ ಸಲ್ಲಿಸಿದರು. ನಮ್ಮ ಸಂಸ್ಕೃತಿಯಲ್ಲಿ ವಿದ್ಯೆ ಕಲಿಸಿದ ಗುರುಗಳಿಗೆ ಗೌರವಿಸುವುದನ್ನು ಹಿರಿಯರು ನಮಗೆ ಹಿಂದಿನಿಂದಲೂ ಹಾಕಿಕೊಟ್ಟಿದ್ದಾರೆ. ನಮ್ಮ ದೇಶ, ನಮ್ಮ ನಾಡು, ನಮ್ಮ ಭಾಷೆ ಮೇಲೆ ಭಕ್ತಿ ಗೌರವವನ್ನು ಕಲಿಸಿದ್ದೇ ಶಿಕ್ಷಣ. ಮನೆಯಲ್ಲಿ ತಂದೆ ತಾಯಿ, ಶಾಲೆಗಳಲ್ಲಿ ಗುರುಗಳು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಿದ್ದಾರೆ. ನಾವು ನಮ್ಮ ಜೀವನದಲ್ಲಿ ಹೇಗೆ ಬಾಳಬೇಕು ಎಂಬುದನ್ನು ಶಿಕ್ಷಕರು ನಮಗೆ ಕಲಿಸಿಕೊಟ್ಟಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ವದ ಪಾತ್ರ ಇದೆ. ಶಿವಾಜಿ ಮಹಾರಾಜರು 12ನೇ ವರ್ಷಕ್ಕೆ ರಾಜ್ಯ ಆಳುವಂತಾಗಲು ಅವರಿಗೆ ಅವರ ತಾಯಿ ರಾಮಾಯಣ, ಮಹಾಭಾರತದಂತಹ ಮಹಾನ್ ದಾರ್ಶನಿಕರ ಕಥೆಗಳನ್ನು ಹೇಳುತ್ತಿದ್ದರು. ಇದು ಅವರಿಗೆ ಸ್ಪೂರ್ತಿ ತಂದಿತು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜನತಾ ವಿದ್ಯಾಲಯದ ಕಾರ್ಯದರ್ಶಿ ಹಾಗೂ ಗಣಿತ ಶಿಕ್ಷಕರಾದ ಎಚ್.ಎಸ್.ಉಮೇಶ್ವರ್ರಿಗೆ ಗೌರವಿಸಲಾಯಿತು. ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಎನ್.ಕೆ.ಕೊಟ್ರೇಶ ಸಂಸ್ಥೆಯಿಂದ ನಡೆದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷ ಎಸ್.ರಾಜಶೇಖರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಕಾಡೆಮಿ ನಿರ್ದೇಶಕ ಬಿ.ಮಂಜುನಾಥ, ಚನ್ನಬಸವ ಶೀಲವಂತ್ ಪ್ರಕಾಶ್ ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಅಧ್ಯಕ್ಷ ಎಸ್.ರಾಜಶೇಖರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಕಾಡೆಮಿ ನಿರ್ದೇಶಕ ಬಿ.ಮಂಜುನಾಥ, ಚನ್ನಬಸವ ಶೀಲವಂತ್ ಪ್ರಕಾಶ್ ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
ಎನ್ ಕೆ. ಕೊಟ್ರೇಶ್
ಪ್ರಧಾನ ಕಾರ್ಯದರ್ಶಿ
ಹಿಮಾಲಯ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ದಾವಣಗೆರೆ.